ನವದೆಹಲಿ: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಕ್ರಿಕೆಟ್ ಬದುಕು ಒಂದು ರೀತಿಯಲ್ಲಿ ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಅವರ ಕ್ಲಾಸಿಕ್ ಸಿನಿಮಾಗಳಂತಿದೆ. ಅದರಲ್ಲಿ ಭರವಸೆ ಇದೆ, ಅನಿರೀಕ್ಷಿತ ತಿರುವುಗಳಿವೆ, ಹಿನ್ನಡೆಗಳಿವೆ ಮತ್ತು ಎಲ್ಲವನ್ನೂ ಮೀರಿ ನಿಲ್ಲುವ ಛಲವಿದೆ.
31ನೇ ವಯಸ್ಸಿನಲ್ಲಿ ಅವರು ಈಗ 2026ರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಹೊಸ್ತಿಲಲ್ಲಿದ್ದಾರೆ. ಅವರ ಈ ಪಯಣ ಸುಲಭವಾಗಿರಲಿಲ್ಲ. ‘ಕಿರೀಟಂ’ ಸಿನಿಮಾದ ನಾಯಕನಂತೆ ಪ್ರತಿಭೆ ಇದ್ದರೂ ಸಂದರ್ಭಗಳು ಕೈಕೊಡುತ್ತಿದ್ದವು. 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರೂ, ತಂಡದೊಳಗೆ ಮತ್ತು ಹೊರಗೆ ಓಡಾಡುವುದೇ ಅವರ ಕಾಯಕವಾಗಿತ್ತು. ಪ್ರತಿಭೆ ಇದ್ದರೂ, ಅದನ್ನು ಸಾಬೀತುಪಡಿಸಲು ಅವರಿಗೆ ಸಿಕ್ಕಿದ್ದು ತುಣುಕು ಅವಕಾಶಗಳು ಮಾತ್ರ.

ವಿಶ್ವಕಪ್ ಮತ್ತು ಮಲಯಾಳಿ ನಂಟು!
ಭಾರತ ಗೆದ್ದ ವಿಶ್ವಕಪ್ ತಂಡಗಳಲ್ಲಿ ಮಲಯಾಳಿಗಳ ಉಪಸ್ಥಿತಿ ಕಾಕತಾಳೀಯವೆಂಬಂತೆ ಇದೆ. 1983ರಲ್ಲಿ ಸುನಿಲ್ ವಾಲ್ಸನ್ (ಆಡುವ ಅವಕಾಶ ಸಿಗಲಿಲ್ಲ), 2007 ಮತ್ತು 2011ರಲ್ಲಿ ಶ್ರೀಶಾಂತ್ (ಪ್ರಮುಖ ಪಾತ್ರ ವಹಿಸಿದ್ದರು) ಮತ್ತು 2024ರಲ್ಲಿ ಸಂಜು ಸ್ಯಾಮ್ಸನ್ (ಬೆಂಚ್ ಕಾದಿದ್ದರು) ತಂಡದ ಭಾಗವಾಗಿದ್ದರು. ಆದರೆ ಈ ಬಾರಿ ಸಂಜು ಕೇವಲ ಬೆಂಚ್ ಕಾಯುವವರಲ್ಲ, ಪ್ರಮುಖ ಆಟಗಾರನಾಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ.
ತಿರುವನಂತಪುರಂನಲ್ಲಿ ತವರಿನ ಬೀಳ್ಕೊಡುಗೆ?
ವಿಶ್ವಕಪ್ಗೂ ಮುನ್ನ ಭಾರತ ಆಡುವ ಕೊನೆಯ ಟಿ20 ಪಂದ್ಯ ತಿರುವನಂತಪುರಂನಲ್ಲಿ ನಡೆಯಲಿದೆ. ಇದು ಸಂಜು ಅವರ ತವರು. ಅಲ್ಲಿಂದ ವಿಶ್ವಕಪ್ಗೆ ತೆರಳುವ ಮುನ್ನ ತವರಿನ ಅಭಿಮಾನಿಗಳಿಂದ ಅವರಿಗೆ ಸಿಗುವ ಪ್ರೀತಿ ಮತ್ತು ಹಾರೈಕೆ ಅವರ ವೃತ್ತಿಜೀವನದ ಮತ್ತೊಂದು ಪ್ರಮುಖ ಘಟ್ಟವಾಗಲಿದೆ.
ಶುಭಮನ್ ಗಿಲ್ ನಾಯಕತ್ವದ ರೇಸ್ನಲ್ಲಿದ್ದಾಗ ಸಂಜು ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಯಿತು. ಓಪನರ್ ಆಗಿ ಗುರುತಿಸಿಕೊಂಡಿದ್ದರೂ ಕೆಳಕ್ರಮಾಂಕದಲ್ಲಿ ಆಡಬೇಕಾಯಿತು. ಆದರೆ, 2024ರ ಟಿ20 ವಿಶ್ವಕಪ್ ನಂತರ ಸಿಕ್ಕ ಅವಕಾಶಗಳನ್ನು ಅವರು ಎರಡೂ ಕೈಗಳಿಂದ ಬಾಚಿಕೊಂಡರು. ಮೂರು ಶತಕ ಮತ್ತು ಅರ್ಧಶತಕ ಸೇರಿದಂತೆ 500ಕ್ಕೂ ಹೆಚ್ಚು ರನ್ ಗಳಿಸಿ, ತಾವು ಕೇವಲ ಪ್ರತಿಭಾವಂತ ಮಾತ್ರವಲ್ಲ, ಪಂದ್ಯ ಗೆಲ್ಲಿಸಿಕೊಡುವ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ‘ದೃಶ್ಯಂ’ ಸಿನಿಮಾದ ನಾಯಕನಂತೆ ಈಗ ಸಂಜು ಕೂಡ ಶಾಂತ, ಆದರೆ ಪರಿಣಾಮಕಾರಿ!
ಇದನ್ನೂ ಓದಿ: ‘ಆ ಪುಟ್ಟ ಚಾಂಪಿಯನ್ಗೆ ನನ್ನದೊಂದು ಅಪ್ಪುಗೆ’ : ಕಾಶ್ಮೀರಿ ಬಾಲಕಿಯ ಮನಗೆದ್ದ ಸ್ಮೃತಿ ಮಂಧಾನ!



















