ಬೆಂಗಳೂರು: ನಗರದಲ್ಲಿ ಸಾಲು ಸಾಲು ಮರಗಳು ಬಿದ್ದು ಅವಾಂತರ ಸೃಷ್ಟಿಯಾಗಿ ಜನರ ಪ್ರಾಣಕ್ಕೆ ಕಂಟಕವಾಗುತ್ತಿವೆ.
ನಿನ್ನೆಯೂ ಕೂಡ ಮರದ ಕೊಂಬೆ ಬಿದ್ದು ಅಕ್ಷಯ್ ಎಂಬುವವರು ಸಾವನ್ನಪ್ಪಿದ್ದಾರೆ. ಇದೀಗ ಅಕ್ಷಯ್ ಸಾವಿನಿಂದ ಪಾಲಿಕೆ ಎಚ್ಚೆತ್ತುಕೊಂಡಿದೆ. ಅವೈಜ್ಞಾನಿಕ ಕಾಮಾಗಾರಿಯೇ ಮರ ಬೀಳಲು ಮುಖ್ಯ ಕಾರಣ ಎನ್ನಲಾಗಿದೆ. ಕಾಂಕ್ರೀಟಿಕರಣದಿಂದ ಮರಗಳ ಬುಡ ಶಕ್ತಿ ಕಳೆದುಕೊಂಡು ನೆಲಕ್ಕೆ ಉರುಳುತ್ತಿವೆ.
ಗಾಗಿ ರಸ್ತೆ ಬದಿ ನೆಡಲಾಗಿರುವ ಮರಗಳ ಕೆಳಗೆ ಹಾಕಲಾಗಿರುವ ಕಾಂಕ್ರೀಟ್, ಕಲ್ಲು ಮತ್ತು ಸಿಮೆಂಟ್ ಬ್ಲಾಕ್ ತೆರವಿಗೆ ಆದೇಶ ನೀಡಲಾಗಿದೆ. ಮರಗಳ ಸುತ್ತ ಕನಿಷ್ಠ 1 ಮೀಟರ್ ಸುತ್ತಳತೆಯಲ್ಲಿ ಹಾಕಲಾದ ಸಿಮೆಂಟ್, ಕಾಂಕ್ರೀಟ್ ಕಲ್ಲುಗಳನ್ನು ತೆರವು ಮಾಡಬೇಕೆಂದು ಆದೇಶ ನೀಡಲಾಗಿದೆ. ಈ ಕುರಿತು ಬಿಬಿಎಂಪಿ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಆದೇಶ ಹೊರಡಿಸಿದ್ದಾರೆ.
ಅವೈಜ್ಞಾನಿಕ ಕಾಮಗಾರಿ ಮರಗಳ ಆರೋಗ್ಯ, ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದ್ದು, ಜೊತೆಗೆ ಅಸಮರ್ಪಕ ಗಾಳಿ ಮತ್ತು ನೀರಿನ ಒಳಹರಿವಿನಿಂದ ಅವುಗಳ ಬೇರುಗಳ ಪೋಷಣೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದಾಗಿ ವೃಕ್ಷಗಳ ಬೇರು ಆಳಕ್ಕೆ ಇಳಿಯದೆ ಮಳೆ, ಗಾಳಿಗೆ ಬೀಳುತ್ತಿವೆ. ಪ್ರಾಣಹಾನಿ ತಪ್ಪಿಸುವ ನಿಟ್ಟಿನಲ್ಲಿ ಪಾಲಿಕೆ ಈ ನಿರ್ಣಯ ಕೈಗೊಂಡಿದೆ.



















