ಚೆನ್ನೈ : ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಐತಿಹಾಸಿಕ ಪ್ರಶಸ್ತಿ ಮುಡಿಗೇರಿಸಿಕೊಂಡು ತವರಿಗೆ ಮರಳಿದ ಭಾರತದ ಯುವ ಗ್ರ್ಯಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ ಅವರನ್ನು ತಮಿಳುನಾಡು ಸರ್ಕಾರ ಅದ್ಧೂರಿಯಾಗಿ ಗೌರವಿಸಿದೆ. ತಮಿಳುನಾಡು ಸಚಿವಾಲಯದಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಜ್ಞಾನಂದ ಅವರನ್ನು ಭೇಟಿಯಾಗಿ, ರಾಜ್ಯ ಸರ್ಕಾರದ ಪರವಾಗಿ 50 ಲಕ್ಷ ರೂ. ನಗದು ಪುರಸ್ಕಾರದ ಚೆಕ್ ಹಸ್ತಾಂತರಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಹಾಗೂ ಯುವ ಚೆಸ್ ತಾರೆ ನಡುವೆ ನಡೆದ ಸೌಹಾರ್ದಯುತ ಚೆಸ್ ಪಂದ್ಯ ಎಲ್ಲರ ಗಮನ ಸೆಳೆದಿದೆ.
ಮುಖ್ಯಮಂತ್ರಿಗೆ ಪ್ರಜ್ಞಾನಂದ ಸರ್ಪ್ರೈಸ್ ‘ಚೆಕ್ಮೇಟ್’
ಸಭೆಯ ನಡುವೆ ಮುಖ್ಯಮಂತ್ರಿಗಳ ಕೋರಿಕೆಯ ಮೇರೆಗೆ ಸಿಎಂ ಮೇಜಿನ ಮೇಲೆಯೇ ಚೆಸ್ ಬೋರ್ಡ್ ಇಟ್ಟು ಇಬ್ಬರ ನಡುವೆ ಒಂದು ಸಣ್ಣ ಪಂದ್ಯವನ್ನು ಆಯೋಜಿಸಲಾಗಿತ್ತು. ಜಾಗತಿಕ ಮಟ್ಟದ ದಿಗ್ಗಜರಿಗೆ ಮಣ್ಣು ಮುಕ್ಕಿಸಿರುವ ಪ್ರಜ್ಞಾನಂದ, ಕೆಲವೇ ನಡೆಗಳಲ್ಲಿ ಮುಖ್ಯಮಂತ್ರಿ ವಿಜಯ್ ಅವರಿಗೆ ‘ಚೆಕ್ಮೇಟ್’ ಇಟ್ಟು ಪಂದ್ಯವನ್ನು ಗೆದ್ದುಕೊಂಡರು. ಆಟದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಜ್ಞಾನಂದ, “ಮುಖ್ಯಮಂತ್ರಿಗಳೊಂದಿಗೆ ಆಡಲು ಸಿಕ್ಕ ಅವಕಾಶ ತೀರಾ ಅನಿರೀಕ್ಷಿತ ಮತ್ತು ಸಂತಸದ ಕ್ಷಣವಾಗಿತ್ತು. ಸಿಎಂ ವಿಜಯ್ ಅವರು ತುಂಬಾ ಚೆನ್ನಾಗಿ ಆಡಿದರು. ತಾವು ಸ್ನೇಹಿತರೊಂದಿಗೆ ಚೆಸ್ ಆಡುತ್ತಿದ್ದ ದಿನಗಳನ್ನು ಅವರು ಈ ವೇಳೆ ನೆನಪಿಸಿಕೊಂಡರು” ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ನಾರ್ವೆ ಚೆಸ್ನಲ್ಲಿ ಐತಿಹಾಸಿಕ ಸಾಧನೆ
ಕಳೆದ ಶುಕ್ರವಾರ ಓಸ್ಲೋದಲ್ಲಿ ನಡೆದ ನಾರ್ವೆ ಚೆಸ್ 2026 ಟೂರ್ನಿಯ 10ನೇ ಹಾಗೂ ಅಂತಿಮ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸುವ ಮೂಲಕ ಪ್ರಜ್ಞಾನಂದ ಇತಿಹಾಸ ನಿರ್ಮಿಸಿದ್ದರು. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಟೂರ್ನಿಯ ಕೊನೆಯ ಹಂತದಲ್ಲಿ ಸತತ ನಾಲ್ಕು ಕ್ಲಾಸಿಕಲ್ ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಜ್ಞಾನಂದ ತಮ್ಮ ವೃತ್ತಿಜೀವನದ ಅತ್ಯಂತ ದೊಡ್ಡ ಯಶಸ್ಸನ್ನು ದಾಖಲಿಸಿದ್ದಾರೆ.
ದಿಗ್ಗಜರನ್ನೇ ಮಣಿಸಿದ ಚೆನ್ನೈ ಹುಡುಗ
ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್, ಹಾಲಿ ವಿಶ್ವ ಚಾಂಪಿಯನ್ ದೊಮ್ಮರಾಜು ಗುಕೇಶ್, ಅಲಿರೆಜಾ ಫಿರೌಜ್ಜಾ ಮತ್ತು ವೆಸ್ಲಿ ಸೋ ಅವರಂತಹ ವಿಶ್ವದ ಘಟಾನುಘಟಿ ಆಟಗಾರರು ಭಾಗವಹಿಸಿದ್ದ ಟೂರ್ನಿಯಲ್ಲಿ ಚೆನ್ನೈ ಮೂಲದ ಪ್ರಜ್ಞಾನಂದ ಅಗ್ರಸ್ಥಾನ ಪಡೆದಿರುವುದು ಅವರ ಸಾಧನೆಯ ತೂಕವನ್ನು ಹೆಚ್ಚಿಸಿದೆ. ವಿಶೇಷವೆಂದರೆ, ಈ ಟೂರ್ನಿಯಲ್ಲಿ ನಾರ್ವೆಯ ದಂತಕಥೆ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಎರಡು ಬಾರಿ ಜಯ ಸಾಧಿಸುವ ಮೂಲಕ ಪ್ರಜ್ಞಾನಂದ ಅಪ್ರತಿಮ ಲಯ ಪ್ರದರ್ಶಿಸಿದ್ದರು. ಯುವ ಸಾಧಕನ ಈ ಐತಿಹಾಸಿಕ ಗೆಲುವನ್ನು ಶ್ಲಾಘಿಸಿರುವ ತಮಿಳುನಾಡು ಸರ್ಕಾರ, ಅವರಿಗೆ 50 ಲಕ್ಷ ರೂ. ಪ್ರೋತ್ಸಾಹ ಧನ ನೀಡಿ ಗೌರವಿಸಿದೆ.
ಇದನ್ನೂ ಓದಿ : ಯೂಟ್ಯೂಬ್ನಲ್ಲಿ ಹೋಮ್ ಟೂರ್, ಒಡವೆ ಪ್ರದರ್ಶನದ ಬೆನ್ನಲ್ಲೇ ಕ್ರಿಯೇಟರ್ ಮನೆಗೆ ಕನ್ನ!


















