ಚಂಡಿಗಡ : ಐಪಿಎಲ್ 2026ರ ಆರಂಭಿಕ ಪಂದ್ಯಗಳಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡ, ಇದೀಗ ಸತತ ನಾಲ್ಕು ಪಂದ್ಯಗಳ ಸೋಲಿನಿಂದ ಕಂಗೆಟ್ಟಿದೆ. ಆಟದ ಮೈದಾನದಲ್ಲಿನ ಕಳಪೆ ಪ್ರದರ್ಶನದ ಜೊತೆಗೆ, ಇದೀಗ ಮೈದಾನದ ಹೊರಗಿನ ವಿವಾದಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಫ್ರಾಂಚೈಸಿಯ ನೆಮ್ಮದಿ ಕೆಡಿಸಿವೆ. ತಂಡದ ಪ್ರಮುಖ ಆಟಗಾರರ ಬಗ್ಗೆ ವಿನಾಕಾರಣ ಹಬ್ಬುತ್ತಿರುವ ವದಂತಿಗಳಿಂದ ಬೇಸತ್ತಿರುವ ಪಂಜಾಬ್ ಕಿಂಗ್ಸ್ ಆಡಳಿತ ಮಂಡಳಿ ಹಾಗೂ ಸಹ-ಮಾಲೀಕಿ ಪ್ರೀತಿ ಜಿಂಟಾ, ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಸುಳ್ಳು ಸುದ್ದಿ ಹರಡುವವರಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಚಹಲ್ ವೇಪಿಂಗ್ ವಿವಾದ ಹಾಗೂ ಪ್ರಭ್ಸಿಮ್ರಾನ್ ಫಿಟ್ನೆಸ್ ಟೀಕೆ
ಪಂಜಾಬ್ ತಂಡದ ಸತತ ಸೋಲುಗಳ ಬೆನ್ನಲ್ಲೇ ಕೆಲವು ಆಟಗಾರರನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗಳು ಶುರುವಾಗಿದ್ದವು. ತಂಡದ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರು ವಿಮಾನಯಾನದ ವೇಳೆ ಇ-ಸಿಗರೇಟ್ (ವೇಪಿಂಗ್) ಸೇದುತ್ತಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ, ಯುವ ಆರಂಭಿಕ ಬ್ಯಾಟರ್ ಪ್ರಭ್ಸಿಮ್ರಾನ್ ಸಿಂಗ್ ಅವರ ಫಿಟ್ನೆಸ್ ಕುಸಿದಿದೆ ಹಾಗೂ ವಿಪರೀತ ತೂಕ ಹೆಚ್ಚಿಸಿಕೊಂಡಿದ್ದಾರೆ ಎಂಬ ಆಧಾರರಹಿತ ವರದಿಗಳು ಹರಿದಾಡಿದ್ದವು. ಆಟಗಾರರ ವರ್ತನೆ, ಬದ್ಧತೆ ಹಾಗೂ ಶಿಸ್ತಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಈ ಕಪೋಲಕಲ್ಪಿತ ಚರ್ಚೆಗಳು ಫ್ರಾಂಚೈಸಿಯ ಘನತೆಗೆ ಧಕ್ಕೆ ತರುವಂತಿವೆ ಎಂಬ ಆತಂಕ ತಂಡದ ಮ್ಯಾನೇಜ್ಮೆಂಟ್ ಅನ್ನು ಕಾಡಿದೆ.
ಟ್ವೀಟ್ ಡಿಲೀಟ್ ಮಾಡಿ, ತಿದ್ದಿ ಪ್ರಕಟಿಸಿದ ಪಂಜಾಬ್ ಕಿಂಗ್ಸ್
ತಮ್ಮ ಆಟಗಾರರ ಮೇಲಿನ ಸುಳ್ಳು ಆರೋಪಗಳನ್ನು ತೀವ್ರವಾಗಿ ಖಂಡಿಸಿರುವ ಪಂಜಾಬ್ ಕಿಂಗ್ಸ್, ತನ್ನ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಕಟ್ಟುನಿಟ್ಟಿನ ಹೇಳಿಕೆ ಬಿಡುಗಡೆ ಮಾಡಿತ್ತು. “ಟೀಕೆ, ಹಾಸ್ಯ ಮತ್ತು ಕ್ರೀಡಾಭಿಪ್ರಾಯಗಳು ಆಟದ ಒಂದು ಭಾಗ. ಆದರೆ, ಕೀಳು ಮಟ್ಟದ ಎಂಗೇಜ್ಮೆಂಟ್ಗಾಗಿ ಸುಳ್ಳು ಕಥೆಗಳು ಮತ್ತು ಕಟ್ಟುಕಥೆಗಳನ್ನು ಸೃಷ್ಟಿಸುವುದು ಸರಿಯಲ್ಲ. ಗಮನ ಸೆಳೆಯಲು ಅಥವಾ ಪ್ರಚಾರ ಪಡೆಯಲು ತಪ್ಪು ಮಾಹಿತಿ ಹರಡುವ ಮೊದಲು ಸತ್ಯಾಂಶವನ್ನು ಪರಿಶೀಲಿಸುವಂತೆ ನಾವು ಪ್ರತಿಯೊಬ್ಬರನ್ನು, ವಿಶೇಷವಾಗಿ ‘ಕ್ರೀಡಾ ಪತ್ರಕರ್ತರನ್ನು’ ಒತ್ತಾಯಿಸುತ್ತೇವೆ” ಎಂದು ಫ್ರಾಂಚೈಸಿ ಮೊದಲಿಗೆ ಪೋಸ್ಟ್ ಮಾಡಿತ್ತು. ಆದರೆ, ‘ಕ್ರೀಡಾ ಪತ್ರಕರ್ತರು’ ಎಂಬ ಪದಬಳಕೆಗೆ ಮಾಧ್ಯಮ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುವ ಸುಳಿವು ಅರಿತ ಆಡಳಿತ ಮಂಡಳಿ, ತಕ್ಷಣವೇ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿತು. ಬಳಿಕ ಕ್ರೀಡಾ ಪತ್ರಕರ್ತರು ಎಂಬ ಪದವನ್ನು ಕೈಬಿಟ್ಟು ಕೇವಲ ಸಾರ್ವಜನಿಕರನ್ನು ಉದ್ದೇಶಿಸಿ ಹೊಸದಾಗಿ ಹೇಳಿಕೆಯನ್ನು ಪ್ರಕಟಿಸಿತು.
ಇದು ಟೀಕೆಯಲ್ಲ, ಉದ್ದೇಶಪೂರ್ವಕ ಸುಳ್ಳು ಎಂದ ಪ್ರೀತಿ ಜಿಂಟಾ
ಫ್ರಾಂಚೈಸಿಯ ಅಧಿಕೃತ ಹೇಳಿಕೆಯ ಜೊತೆಗೆ ದನಿಗೂಡಿಸಿರುವ ಬಾಲಿವುಡ್ ನಟಿ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಒಡತಿ ಪ್ರೀತಿ ಜಿಂಟಾ, ತಪ್ಪು ಮಾಹಿತಿ ಹರಡುವವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಂಜಾಬ್ ತಂಡದ ಮೂಲ ಪೋಸ್ಟ್ ಅನ್ನು ಮರುಹಂಚಿಕೊಂಡಿರುವ ಅವರು, “ಕ್ರೀಡಾತ್ಮಕ ಟೀಕೆಗೂ ಹಾಗೂ ಲೆಕ್ಕಾಚಾರದ ತಪ್ಪು ಮಾಹಿತಿಗೂ ದೊಡ್ಡ ವ್ಯತ್ಯಾಸವಿದೆ. ಆಟದ ಸುತ್ತಲಿನ ಆರೋಗ್ಯಕರ ಚರ್ಚೆಗಳನ್ನು ನಾವು ಸದಾ ಸ್ವಾಗತಿಸುತ್ತೇವೆ. ಆದರೆ, ವ್ಯಕ್ತಿಗಳು, ತಂಡ ಅಥವಾ ನಮ್ಮ ಬ್ರ್ಯಾಂಡ್ನ ಇಮೇಜ್ಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಹರಡುತ್ತಿರುವ ಸುಳ್ಳು ಕಥೆಗಳನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಮತ್ತು ಅದನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಪರಿಶೀಲಿಸದ ಮಾಹಿತಿಯನ್ನು ದೊಡ್ಡದಾಗಿ ಬಿಂಬಿಸುವ ಮೊದಲು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಬೇಕು” ಎಂದು ಅವರು ಕಟುವಾಗಿ ಎಚ್ಚರಿಸಿದ್ದಾರೆ.
ಪ್ಲೇ-ಆಫ್ಸ್ ರೇಸ್ನಲ್ಲಿ ಪಂಜಾಬ್ ಇನ್ನು ಭದ್ರ
ಸತತ ನಾಲ್ಕು ಪಂದ್ಯಗಳಲ್ಲಿ ಮುಗ್ಗರಿಸಿದ್ದರೂ, ಪಂಜಾಬ್ ಕಿಂಗ್ಸ್ ತಂಡದ ಪ್ಲೇ-ಆಫ್ಸ್ ಪ್ರವೇಶಿಸುವ ಕನಸು ಇನ್ನೂ ಜೀವಂತವಾಗಿದೆ. ಟೂರ್ನಿಯ ಮೊದಲ ಏಳು ಪಂದ್ಯಗಳಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದಿದ್ದ (ಆರು ಗೆಲುವು, ಒಂದು ಪಂದ್ಯ ಮಳೆಯಿಂದಾಗಿ ರದ್ದು) ಪಂಜಾಬ್, ಪ್ರಸ್ತುತ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಭದ್ರವಾಗಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಸತತ ಎರಡನೇ ವರ್ಷವೂ ಪ್ಲೇ-ಆಫ್ಸ್ ಪ್ರವೇಶಿಸುವುದು ಅಧಿಕೃತವಾಗಲಿದೆ. ಹೀಗಾಗಿ, ಮೈದಾನದ ಹೊರಗಿನ ವಿವಾದಗಳನ್ನು ಬದಿಗೊತ್ತಿ, ಧರ್ಮಶಾಲಾದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಮುಂದಿನ ಮಹತ್ವದ ಪಂದ್ಯದತ್ತ ತಂಡ ಸಂಪೂರ್ಣ ಗಮನಹರಿಸಬೇಕಿದೆ.
ಇದನ್ನೂ ಓದಿ : “ಚೆನ್ನೈ ಚೆಟ್ಟನ್” : ಲೋಕಲ್ ಬಾಯ್ಸ್ ಜೊತೆ ಬೀಚಲ್ಲಿ ಕ್ರಿಕೆಟ್ ಆಡಿ ಫ್ಯಾನ್ಸ್ ಮನಗೆದ್ದ ಸಂಜು ಸ್ಯಾಮ್ಸನ್!


















