ಪಾಟ್ನಾ/ನವದೆಹಲಿ : ಬಿಹಾರ ರಾಜಕಾರಣದ ಚಾಣಕ್ಯ ಎಂದೇ ಹೆಸರಾದ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರು ತಮ್ಮ ದಶಕಗಳ ಕಾಲದ ಮುಖ್ಯಮಂತ್ರಿ ಪಟ್ಟವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಕಳೆದ ಎರಡು ದಶಕಗಳಿಂದ ರಾಜ್ಯದ ಚುಕ್ಕಾಣಿ ಹಿಡಿದಿದ್ದ ಅವರು, ಈಗ ರಾಜ್ಯಸಭೆಗೆ ತೆರಳುವ ಮೂಲಕ ಸಕ್ರಿಯ ರಾಜಕಾರಣದ ಹೊಸ ಇನಿಂಗ್ಸ್ ಆರಂಭಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಬಿಹಾರ ರಾಜಕೀಯದ ದೀರ್ಘಕಾಲದ ಕುತೂಹಲಕ್ಕೆ ತೆರೆ ಬಿದ್ದಿದೆ.
ತಮ್ಮ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ನಿತೀಶ್ ಕುಮಾರ್, “ನನ್ನ ಸಂಸದೀಯ ಜೀವನದ ಆರಂಭದಿಂದಲೂ ಒಂದು ಆಸೆ ಇತ್ತು. ದೇಶದ ಸಂಸತ್ತಿನ ಉಭಯ ಸದನಗಳು (ಲೋಕಸಭೆ ಮತ್ತು ರಾಜ್ಯಸಭೆ) ಹಾಗೂ ರಾಜ್ಯ ಶಾಸಕಾಂಗದ ಉಭಯ ಸದನಗಳ (ವಿಧಾನಸಭೆ ಮತ್ತು ವಿಧಾನ ಪರಿಷತ್ತು) ಸದಸ್ಯನಾಗಬೇಕು ಎಂಬುದು ನನ್ನ ಗುರಿಯಾಗಿತ್ತು. ಈಗ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಆ ದಾಖಲೆಯನ್ನು ಪೂರ್ಣಗೊಳಿಸಲು ಬಯಸಿದ್ದೇನೆ,” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ರಾಜಕೀಯ ಸಮಕಾಲೀನರ ಹಾದಿಯಲ್ಲಿ ನಿತೀಶ್
ನಿತೀಶ್ ಕುಮಾರ್ ಅವರ ಈ ನಡೆಗೆ ಬಿಹಾರದ ಹಿರಿಯ ನಾಯಕರ ನಡುವಿನ ರಾಜಕೀಯ ಪೈಪೋಟಿಯೂ ಒಂದು ಕಾರಣ ಎನ್ನಲಾಗಿದೆ. ಬಿಹಾರ ರಾಜಕಾರಣದ ಧ್ರುವತಾರೆಗಳಾದ ಲಾಲು ಪ್ರಸಾದ್ ಯಾದವ್, ದಿವಂಗತ ಸುಶೀಲ್ ಮೋದಿ, ರಾಮ್ ವಿಲಾಸ್ ಪಾಸ್ವಾನ್ ಮತ್ತು ಶರದ್ ಯಾದವ್ ಅವರು ಈಗಾಗಲೇ ನಾಲ್ಕೂ ಸದನಗಳ ಸದಸ್ಯತ್ವ ಪಡೆದ ದಾಖಲೆ ಹೊಂದಿದ್ದಾರೆ. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಿಂದ ಒಟ್ಟಿಗೆ ಬೆಳೆದು ಬಂದ ಈ ನಾಯಕರಲ್ಲಿ ನಿತೀಶ್ ಕುಮಾರ್ ಅವರು ಮಾತ್ರ ರಾಜ್ಯಸಭೆಯ ಸದಸ್ಯರಾಗಿರಲಿಲ್ಲ. ಈಗ ರಾಜ್ಯಸಭೆಗೆ ಪ್ರವೇಶ ಪಡೆಯುವ ಮೂಲಕ ಅವರು ಲಾಲು ಪ್ರಸಾದ್ ಮತ್ತು ಸುಶೀಲ್ ಮೋದಿ ಅವರ ಸಾಲಿಗೆ ಸೇರಲಿದ್ದಾರೆ.
ಅಭಿವೃದ್ಧಿ ಪಯಣ ಮತ್ತು ಮಾರ್ಗದರ್ಶನ
ಕಳೆದ 20 ವರ್ಷಗಳಿಂದ ಬಿಹಾರದ ಜನರು ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿರುವ ನಿತೀಶ್, ರಾಜ್ಯವು ಅಭಿವೃದ್ಧಿಯ ಹೊಸ ಆಯಾಮಗಳನ್ನು ತಲುಪಲು ಜನರ ವಿಶ್ವಾಸವೇ ಕಾರಣ ಎಂದಿದ್ದಾರೆ. “ನಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿದ್ದರೂ, ಬಿಹಾರದ ಜನರೊಂದಿಗಿನ ನನ್ನ ಸಂಬಂಧ ಮುಂದುವರಿಯಲಿದೆ. ರಾಜ್ಯದ ಅಭಿವೃದ್ಧಿಗಾಗಿ ನಾನು ಶ್ರಮಿಸುತ್ತಲೇ ಇರುತ್ತೇನೆ. ಅಸ್ತಿತ್ವಕ್ಕೆ ಬರಲಿರುವ ಹೊಸ ಸರ್ಕಾರಕ್ಕೆ ನನ್ನ ಸಂಪೂರ್ಣ ಬೆಂಬಲ ಮತ್ತು ಮಾರ್ಗದರ್ಶನ ಇರಲಿದೆ,” ಎಂದು ಅವರು ಭರವಸೆ ನೀಡಿದ್ದಾರೆ. ನಿತೀಶ್ ಕುಮಾರ್ ಅವರ ಈ ಹಠಾತ್ ನಿರ್ಧಾರವು ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಮೀಕರಣಗಳಿಗೆ ನಾಂದಿ ಹಾಡುವ ಸಾಧ್ಯತೆಯಿದೆ. ಇದರ ಜೊತೆಗೆ ಬಿಹಾರದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಯೂ ಆರಂಭವಾಗಿದೆ.
ಇದನ್ನೂ ಓದಿ : ದಾಖಲೆಯ 17ನೇ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಸಜ್ಜು.. ರಂಗೋಲಿಯಲ್ಲಿ ಮೂಡಿ ಬಂದ ಸಿಎಂ ಭಾವಚಿತ್ರ



















