ಯಾದಗಿರಿ : ಅಪ್ರಾಪ್ತ ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿರುವ ಆರೋಪದ ಮೇಲೆ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಇಂದು ಮುತ್ಯಾ ಸೇರಿ ಸಂತ್ರಸ್ತೆ ಹಾಗೂ ಪೋಷಕರ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪವಾಡ ಪುರುಷ ಎಂದು ಫೇಮಸ್ ಆಗಿರುವ ಮಲ್ಲಿಕಾರ್ಜುನ ಮುತ್ಯಾ ಯಾದಗಿರಿಯ ಮಹಲ್ ರೋಜಾ ಮಠಕ್ಕೆ ಬಂದ ಭಕ್ತರ ಮಗುವಿನ ಜೊತೆ ಅನುಚಿತವಾಗಿ ವರ್ತಿಸಿದರು ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಇದೀಗಾ ಮುತ್ಯಾಗೆ ಸಂಕಷ್ಟ ತಂದೊಡ್ಡಿದೆ.
ಹೀಗಾಗಿ ಮುತ್ಯಾ ವಿರುದ್ಧ ಕ್ರಮ ಜರುಗಿಸಲು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ದೂರು ದಾಖಲಿಸಿ, ಯಾದಗಿರಿ ಎಸ್ಪಿ ಅವರಿಗೆ ಪತ್ರವನ್ನೂ ಬರೆದಿದ್ದರು. ಈಗ ಗೋಗಿ ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಇಡೀ ಪ್ರಕರಣದ ಮಾಹಿತಿ ಪಡೆದುಕೊಂಡು ವಿಡಿಯೋ ಹೇಳಿಕೆ ರಿಲೀಸ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ, ಭಕ್ತರು ಈ ಪ್ರಕರಣದಿಂದ ಹೆದರುವ ಅವಶ್ಯಕತೆಯಿಲ್ಲ. ಪೊಲೀಸರು ಕರೆದಾಗ ತನಿಖೆಗೆ ಹೋಗುವುದಾಗಿ ಹೇಳಿದ್ದಾರೆ.
ಸದ್ಯ ಅಜ್ಞಾತ ಸ್ಥಳದಲ್ಲಿರುವ ಮಲ್ಲಿಕಾರ್ಜುನ ಕಾನೂನು ತಜ್ಞರ ಸಂಪರ್ಕ ಮಾಡಿ, ಪ್ರಕರಣ ಕುರಿತು ಮುಂದಿನ ಆಗುಹೋಗುಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಶುಕ್ರವಾರ ಗೋಗಿ ಪೊಲೀಸ್ ಠಾಣೆ ಅಥವಾ ಎಸ್.ಪಿ ಕಚೇರಿಗೆ ಖುದ್ದು ಹಾಜರಾಗಿ ತನಿಖೆಗೆ ಸಹಕಾರ ನೀಡಲು ಪ್ಲ್ಯಾನ್ ಮಾಡಿದ್ದಾರೆ. ಇನ್ನೂ ಸಂತ್ರಸ್ತೆ ಹಾಗೂ ಅವರ ಪೋಷಕರ ವಿಚಾರಣೆ ಮಾಡುವ ಸಾಧ್ಯತೆಯಿದ್ದು, ಅನುಚಿತ ವರ್ತನೆ ಉದ್ದೇಶಪೂರ್ವಕವಾಗಿ ಆಗಿದೆಯಾ ಅಥವಾ ಇಲ್ಲವಾ ಎಂದು ಹಲವು ಆಯಾಮದಲ್ಲಿ ಮಹತ್ವದ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ : ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ಗೆ ಪಿತೃವಿಯೋಗ.. ಕ್ಯಾನ್ಸರ್ನಿಂದ ಬಳಲುತ್ತಿದ್ದ ತಂದೆ ನಿಧನ



















