ಆಪರೇಶನ್ ಸಿಂಧೂರ್ ನ ಪೆಟ್ಟಿನಿಂದಲೇ ಹೊರಬಾರದ ಪಾಕಿಸ್ತಾನಕ್ಕೀಗ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ.
ಈಗಾಗಲೇ ಭಾರತ ಸಾರಿರುವ ಜಲ ಸಮರದ ಕರಾಳ ಚಹರೆ ಪಾಕಿಸ್ತಾನದಲ್ಲಿ ನಿಧಾನವಾಗಿ ಅನಾವರಣವಾಗುತ್ತಿದೆ. ಚಿನಾಬ್ ನದಿಯ ಹರಿವು ತಗ್ಗಿದ್ದು, ಜಲಾಶಯಗಳ ನೀರಿನ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಪರಿಣಾಮ ಪಾಕಿಸ್ತಾನ ರೈತರ ಬೇಸಿಗೆ ಬೆಳೆ ಈಗ ಒಣಗಲು ಆರಂಭಿಸಿದೆ. ಚಿನಾಬ್ ನದಿ ಪಾತ್ರದ ಮಂಗಲ ವ್ಯಾಪ್ತಿಯಲ್ಲಿ ಅಪಾರ ಗೋಧಿ ನಾಟಿಯಾಗಿದೆ.
ಆದರೀಗ ಏಕಾಏಕಿ ನೀರಿನ ಪ್ರಮಾಣ ತಳ ತಲುಪಿದೆ. ಹೀಗಾಗಿ ರೈತರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಕಳೆದ ಮೂರು ದಿನಗಳಿಂದ ಬೆಳೆಗೆ ನೀರಿಲ್ಲದೆ ಪರದಾಡುತ್ತಿರುವ ರೈತರು, ಮುಂಗಾರು ಮಳೆಗಾಗಿ ಆಕಾಶ ನೋಡುತ್ತಿದ್ದಾರೆ. ನಿಗದಿಯಂತೆ ಮುಂದಿನ ವಾರ ಪಾಕ್ ಗೆ ಮುಂಗಾರು ಎಂಟ್ರಿ ಕೊಡಬೇಕಿದೆ. ಆದರೆ, ಅಲ್ಲಿಯವರೆಗೂ ಜಲಾಶಯದ ನೀರಿಲ್ಲದೆ ನದಿ ಪಾತ್ರದ ರೈತರು ಅಸಹಾಯಕರಾಗಿದ್ದಾರೆ.
ಉಗ್ರರ ಬೆನ್ನಿಗೆ ನಿಂತ ಪಾಕ್ ಜೊತೆ ಭಾರತ ತನ್ನ ಸಿಂಧೂ ಜಲ ಒಪ್ಪಂದವನ್ನು ಸಮಾಪ್ತಿ ಮಾಡಿದೆ. ಹೀಗಾಗಿ ಭಾರತದಿಂದ ಹರಿದು ಹೋಗಬೇಕಿದ್ದ ನೀರನ್ನು ನಿರ್ಬಂಧಿಸಲಾಗಿದೆ. ಇದರ ಪ್ರತಿಕೂಲವೆನ್ನುವಂತೆ ನೂರಾರು ಹೆಕ್ಟೇರ್ ಗೋಧಿ ಪೈರು ಈಗ ಒಣಗುತ್ತಿದೆ.
ಭಾರತದೊಟ್ಟಿಗೆ ಸಂಬಂಧ ಸುಧಾರಿಸುವ ಯಾವ ಭರವಸೆಯನ್ನೂ ಪಾಕ್ ಸರ್ಕಾರ ನಡೆಸಿಲ್ಲ. ಹೀಗಾಗಿ ಅನ್ನದಾತರು, ಮುಂಗಾರಿನತ್ತ ಮುಖ ಮಾಡಿದ್ದಾರೆ. ಒಂದೊಮ್ಮೆ ಮುಂಗಾರು ಈ ಬಾರಿ ಕೈಕೊಟ್ರೆ, ದೊಡ್ಡ ಮಟ್ಟದ ಗೋಧಿ ಉತ್ಪಾದನೆ ತಗ್ಗಲಿದ್ದು, ಭವಿಷ್ಯದಲ್ಲಿ ಪಾಕಿಸ್ತಾನ ಆಹಾರ ಬರದಿಂದ ಬಳಲುವಂತಾ ಪರಿಸ್ಥಿತಿ ನಿರ್ಮಿಸಿದ್ರೂ ಆಶ್ಚರ್ಯವಿಲ್ಲ.