ನವದೆಹಲಿ : ಭಾರತೀಯ ಸೇನೆ ಹಾಗೂ ಅರೆಸೇನಾ ಪಡೆಗಳ ಚಲನವಲವ ಮತ್ತು ಸಂಚಾರದ ಕುರಿತು ಪಾಕಿಸ್ತಾನದ ಹ್ಯಾಂಡ್ಲರ್ಗಳಿಗೆ ಸೂಕ್ಷ್ಮ ಮಾಹಿತಿ ರವಾನಿಸುತ್ತಿದ್ದ ಶಂಕಿತ ಬೇಹುಗಾರಿಕೆ ಜಾಲವೊಂದನ್ನು ಪಂಜಾಬ್ನ ಪಠಾನ್ಕೋಟ್ ಪೊಲೀಸರು ಭೇದಿಸಿದ್ದಾರೆ. ಈ ದೇಶದ್ರೋಹಿ ಕೃತ್ಯಕ್ಕೆ ಸಂಬಂಧಿಸಿದಂತೆ ಬಲ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಎಂಬಾತನನ್ನು ಬಂಧಿಸಲಾಗಿದ್ದು, ಈ ಘಟನೆಯು ಗಡಿ ಭಾಗದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಪಠಾನ್ಕೋಟ್ನ ಚಕ್ ಧರಿವಾಲ್ ಗ್ರಾಮದ ನಿವಾಸಿಯಾದ ಬಲ್ಜಿತ್ ಸಿಂಗ್, ಪಠಾನ್ಕೋಟ್-ಜಮ್ಮು ನಡುವಿನ ರಾಷ್ಟ್ರೀಯ ಹೆದ್ದಾರಿ-44ರ ಸುಜಾನ್ಪುರ ಬಳಿಯ ಅಂಗಡಿಯೊಂದರಲ್ಲಿ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದ. ಈ ಹೆದ್ದಾರಿಯ ಮೂಲಕ ಸಂಚರಿಸುವ ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳ ಪ್ರತಿಯೊಂದು ಚಲನವಲನಗಳನ್ನು ಲೈವ್ ಆಗಿ ವೀಕ್ಷಿಸಲು ಈ ವ್ಯವಸ್ಥೆ ಮಾಡಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿ ದಲ್ಜಿಂದರ್ ಸಿಂಗ್ ಧಿಲ್ಲೋನ್ ಅವರ ಪ್ರಕಾರ, ಈ ಸಿಸಿಟಿವಿ ಫೀಡ್ ಅನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಪಾಕಿಸ್ತಾನ ಮತ್ತು ವಿದೇಶಗಳಲ್ಲಿರುವ ಆಪರೇಟಿವ್ಗಳಿಗೆ ನೇರವಾಗಿ ರವಾನಿಸಲಾಗುತ್ತಿತ್ತು.
ದುಬೈ ಲಿಂಕ್, ನಗದು ಆಮಿಷ
ಪೊಲೀಸರ ತೀವ್ರ ವಿಚಾರಣೆಯ ವೇಳೆ ಆರೋಪಿ ಬಲ್ಜಿತ್ ಸಿಂಗ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕಳೆದ ಜನವರಿ ತಿಂಗಳಿನಲ್ಲಿ ತಾನು ಈ ಇಂಟರ್ನೆಟ್ ಆಧಾರಿತ ಕ್ಯಾಮೆರಾವನ್ನು ಅಳವಡಿಸಿದ್ದಾಗಿ ತಿಳಿಸಿದ್ದಾನೆ. ಅಷ್ಟೇ ಅಲ್ಲದೆ, ದುಬೈನಲ್ಲಿರುವ ಅಪರಿಚಿತ ವ್ಯಕ್ತಿಯೊಬ್ಬನಿಂದ ತನಗೆ ಈ ಕುರಿತು ಸೂಚನೆಗಳು ಸಿಗುತ್ತಿದ್ದವು. ಈ ಕೆಲಸಕ್ಕಾಗಿ ನನಗೆ 40,000ರೂ. ಹಣ ನೀಡಲಾಗಿತ್ತು ಎಂಬ ಸ್ಫೋಟಕ ಸತ್ಯವನ್ನೂ ಬಾಯಿಬಿಟ್ಟಿದ್ದಾನೆ. ಸದ್ಯ ಆರೋಪಿಯಿಂದ ಸಿಸಿಟಿವಿ ಕ್ಯಾಮೆರಾ ಹಾಗೂ ವೈಫೈ ರೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ನಾಲ್ವರ ವಿರುದ್ಧ ಪ್ರಕರಣ ದಾಖಲು
ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿದ್ದ ಶಂಕಿತ ಚಟುವಟಿಕೆಗಳ ಬಗ್ಗೆ ಖಚಿತ ಮಾಹಿತಿ ಪಡೆದ ಸುಜಾನ್ಪುರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಈ ಬೇಹುಗಾರಿಕೆ ಜಾಲದಲ್ಲಿ ಭಾಗಿಯಾಗಿದ್ದ ಬಲ್ಜಿತ್ ಸಿಂಗ್, ವಿಕ್ರಮಜೀತ್ ಸಿಂಗ್, ಬಲ್ವಿಂದರ್ ಸಿಂಗ್ ಮತ್ತು ತರಣ್ಪ್ರೀತ್ ಸಿಂಗ್ ಎಂಬ ನಾಲ್ವರ ವಿರುದ್ಧ ದೇಶವಿರೋಧಿ ಕೃತ್ಯಗಳಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಉಳಿದ ಮೂವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಈ ಜಾಲದ ಅಂತಾರಾಷ್ಟ್ರೀಯ ನಂಟು ಮತ್ತು ನಿಧಿ ಮೂಲದ ಬಗ್ಗೆ ತನಿಖೆ ನಡೆಸಲು ಹಿರಿಯ ಅಧಿಕಾರಿಗಳಿಗೆ ವರದಿಯನ್ನು ಕಳುಹಿಸಲಾಗಿದೆ.
ಪಂಜಾಬ್ನಲ್ಲಿ ಸಕ್ರಿಯವಾಗಿರುವ ಹೈಟೆಕ್ ಚೀನಾ ಕ್ಯಾಮೆರಾಗಳು
ಇದೇ ರೀತಿಯ ಘಟನೆಗಳು ಪಂಜಾಬ್ನಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಕಳೆದ ತಿಂಗಳಷ್ಟೇ ಪಂಜಾಬ್ ಪೊಲೀಸರು ಪಾಕಿಸ್ತಾನದ ಐಎಸ್ಐ (ISI) ಬೆಂಬಲಿತ ಎರಡು ಬೃಹತ್ ಬೇಹುಗಾರಿಕೆ ಜಾಲಗಳನ್ನು ಪತ್ತೆಹಚ್ಚಿದ್ದರು. ಈ ಜಾಲಗಳು ಸೇನಾ ನೆಲೆಗಳ ಮೇಲೆ ಕಣ್ಣಿಡಲು ಚೀನಾ ನಿರ್ಮಿತ, ಸೌರಶಕ್ತಿ ಚಾಲಿತ 4G ಸಿಸಿಟಿವಿ ಕ್ಯಾಮೆರಾಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿತ್ತು. ಸಾಂಪ್ರದಾಯಿಕ ವೈರಿಂಗ್ ವ್ಯವಸ್ಥೆ ಇಲ್ಲದೆ, ಕೇವಲ ಸಿಮ್ ಕಾರ್ಡ್ ಮತ್ತು ಸೋಲಾರ್ ಪ್ಲೇಟ್ ಮೂಲಕ ಕಾರ್ಯನಿರ್ವಹಿಸುವ ಈ ಕ್ಯಾಮೆರಾಗಳು ಆಫ್-ಗ್ರಿಡ್ ಕಣ್ಗಾವಲಿಗೆ ನೆರವಾಗುತ್ತಿದ್ದವು ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.
ಜಲಂಧರ್ ಮತ್ತು ಕಪುರ್ತಲಾದಲ್ಲಿ ನಡೆದಿದ್ದ ಈ ಹಿಂದಿನ ಕಾರ್ಯಾಚರಣೆಗಳಲ್ಲಿ ಸುಖ್ವಿಂದರ್ ಸಿಂಗ್, ಸೋನಾ ಮತ್ತು ಸಂದೀಪ್ ಸಿಂಗ್ ಎಂಬಿಬ್ಬರನ್ನು ಬಂಧಿಸಲಾಗಿತ್ತು. ಕಪುರ್ತಲಾ ಸೇನಾ ಶಿಬಿರದ ಬಳಿ ಕಣ್ಗಾವಲು ಇಡಲು ಪಾಕ್ ಹ್ಯಾಂಡ್ಲರ್ ‘ಫೌಜಿ’ ಎಂಬಾತ ಹಣ ನೀಡಿದ್ದ ಕರಾಳ ಸತ್ಯ ಹೊರಬಿದ್ದಿತ್ತು. ಅಷ್ಟೇ ಅಲ್ಲದೆ, ಈ ಆರೋಪಿಗಳು ಡ್ರೋನ್ ಮೂಲಕ ಪಾಕಿಸ್ತಾನದಿಂದ ಬರುವ ಹೆರಾಯಿನ್ ಮಾದಕ ವಸ್ತುವಿನ ಸ್ಮಗ್ಲಿಂಗ್ ದಂಧೆಯಲ್ಲೂ ಭಾಗಿಯಾಗಿದ್ದರು ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಸದ್ಯ ಗಡಿ ರಾಜ್ಯದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಇದನ್ನೂ ಓದಿ : ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್ : ಬಂಗಾರದ ಬೆಲೆಯಲ್ಲಿ ಇಂದು ಭಾರಿ ಇಳಿಕೆ!



















