ತಮಿಳಿನಿಂದಲೇ ಕನ್ನಡ ಹುಟ್ಟಿದ್ದು, ಇದೊಂದು ಮಾತು ಇದೀಗ ನೂರಾರು ಕೋಟಿ ಬಂಡಾವಾಳವನ್ನು ನೀರಿನಲ್ಲಿ ಹೋಮ ಮಾಡಿದಂಥಾ ಪರಿಸ್ಥಿತಿಗೆ ತಂದು ನಿಲ್ಲಿಸಿದೆ.
ಯೆಸ್. ಕಮಲ್ ಹಾಸನ್ ದಕ್ಷಿಣ ಭಾರತದ ಪ್ರತಿಭಾನ್ವಿತ ನಟ ಎನ್ನುವುದರಲ್ಲಿ ಇನ್ನೊಂದು ಮಾತಿಲ್ಲ. ತಮಿಳು, ತೆಲುಗು, ಕರ್ನಾಟಕ ಸೇರಿದಂತೆ ವಿಶ್ವದೆಲ್ಲೆಡೆ ಕಮಲ್ ಗೆ ಅವರದ್ದೇ ಅಭಿಮಾನ ಬಳಗವಿದೆ. ಆದರೆ, ಈ ನಟ ಇತ್ತೀಚೆಗೆ ಕನ್ನಡ ಭಾಷೆಯ ಹುಟ್ಟಿನ ವಿಚಾರವನ್ನು ಕೆಣಕಿ ಸುಮ್ಮನಿರದೆ ಇರುವೆ ಬಿಟ್ಟುಕೊಂಡರು ಎನ್ನುವಂತಾ ವಾತಾವರಣ ಸೃಷ್ಟಿಸಿದ್ದಾರೆ. ಆದರೆ ಇವರನ್ನೇ ನಂಬಿ ಬಂಡವಾಳ ಹಾಕಿದವರ ಮೈಮೇಲೀಗ ಹಾವೇ ಸುಳಿದಾಡ್ತಿರುವಂಥಾ ಪರಿಸ್ಥಿತಿ ಇದೆ.
ತಪ್ಪು ಮಾಡಿಲ್ಲ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲಾ
ಪ್ರೀತಿಯಿಂದ ಮಾತನಾಡಿದ್ದೇನೆ, ಪ್ರೀತಿಯಿಂದ ಹೇಳಿದ್ದಕ್ಯಾರಾದರೂ ಕ್ಷಮೆ ಕೇಳ್ತಾರಾ? ಯೆಸ್ ಇದು ಕಮಲ್ ಹಾಸನ್ ರ ಅಹಂಕಾರದ ಮೊದಲ ಚರಣ. ಆದರೆ ಯಾವಾಗ ಖುದ್ದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಕ್ಷಮೆ ಕೇಳಲು ಮೇ 30ರ ಗಡುವು ವಿಧಿಸಿತೋ ಆಗ ಮತ್ತೆ ವರಸೆ ಬದಲಿಸಿದ ತಮಿಳು ಹಾಸನ್, ನಾನು ತಪ್ಪೇ ಮಾಡಿಲ್ಲ. ಅಂಥದರಲ್ಲಿ ತಪ್ಪು ಮಾಡದೆ ಕ್ಷಮೆಯಾಕೆ? ಇಂತಹ ಬೆದರಿಕೆಗಳನ್ನು ನಾನು ಬಹಳ ಕಂಡಿದ್ದೇನೆ ಅಂತಾ ಮತ್ತೆ ತಮ್ಮ ದುರಹಂಕಾರದ ಪರಮಾವಧಿ ಪ್ರದರ್ಶಿಸಿದ್ದಾರೆ. ಈ ಬೆಳವಣಿಗೆ ಮುಂದಿನ ವಾರ ತೆರೆಗೆ ಬರುತ್ತಿರುವ ಅವರ ಥಗ್ ಲೈಫ್ ಸಿನಿಮಾದ ಕರ್ನಾಟಕ ಭವಿಷ್ಯವನ್ನು ಅರ್ಥ ಚಂದ್ರಗೊಳಿಸಿದೆ.
ಸಿನಿಮಾ ರಿಲೀಸ್ ಆದ್ರೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ
ಜಗ್ಗೋದಿಲ್ಲ ಬಗ್ಗೋದಿಲ್ಲ ಅಂತಿರುವ ಕಮಲ್ ನಿಜಕ್ಕೂ ಮೊಂಡುವಾದ ಮಾಡುತ್ತಿದ್ದಾರೆ. ಈಗಾಗಲೇ ವಾಣಿಜ್ಯ ಮಂಡಳಿ ಮತ್ತು ಕನ್ನಡಪರ ಸಂಘಟನೆಗಳು ನೀಡಿದ್ದ ಗಡುವು ಮುಕ್ತಾಯವಾಗಿದೆ. ಈ ನಿಟ್ಟಿನಲ್ಲೇ ಮುಂದಿನ ವಾರ ತೆರೆಗೆ ಬರ್ತಿರುವ ಕಮಲ್ ನಟನೆಯ ಬಹುನಿರೀಕ್ಷಿತ ಸಿನಿಮಾ ಥಗ್ ಲೈಫ್ ಭವಿಷ್ಯ ಅತಂತ್ರವಾಗಿದೆ. ಕ್ಷಮೆ ಕೇಳದೆ ಹೋದ್ರೆ ಚಿತ್ರ ಪ್ರದರ್ಶನಕ್ಕೆ ಅವಕಾಶವಿಲ್ಲ ಅಂತಾ ಹೋರಾಟಗಾರರು ವಾರ್ನಿಂಗ್ ಮಾಡಿದ್ದಾರೆ. ಅದನ್ನು ಮೀರಿ ಬಿಡುಗಡೆ ಮಾಡಿದ್ರೆ ಚಿತ್ರಮಂದಿರಕ್ಕೇ ಬೆಂಕಿ ಹಚ್ತೀವಿ ಎಂದಿದ್ದಾರೆ. ಹೀಗಾಗಿ ಥಗ್ ಲೈಪ್ ಕರ್ನಾಟಕದ ವಿತರಣೆ ಹಕ್ಕು ಪಡೆದಿರುವ ವೆಂಕಟೇಶ್ ಕಮಲಾಕರ್ ಕಂಗಾಲಾಗಿದ್ದಾರೆ.
ಸಿನಿಮಾ ರಿಲೀಸ್ ಆಗದಿದ್ದರೆ 30 ಕೋಟಿ ಲಾಸ್
ಥಗ್ ಲೈಫ್ ಕರ್ನಾಟಕ ವಿತರಣೆ ಹಕ್ಕನ್ನು ವೆಂಕಟೇಶ್ ಕಮಲಾಕರ್ ಪಡೆದಿದ್ದಾರೆ. ಇದಕ್ಕೆ ಮುಂಗಡವಾಗಿ 8 ಕೋಟಿ ನೀಡಿ ಸಿನಿಮಾ ರಿಲೀಸ್ ಗೆ ಭರ್ಜರಿ ತಯಾರಿ ಮಾಡಿದ್ದಾರೆ. ಈ ಹಿಂದೆ ಕಮಲ್ ನಟನೆಯ ವಿಕ್ರಮ್ ಸಿನಿಮಾ ಕರ್ನಾಟಕದಲ್ಲಿ 25 ಕೋಟಿ ರೂ. ಮೀರಿದ ವಹಿವಾಟು ನಡೆಸಿತ್ತು. ಹಾಗೆ ಥಗ್ ಲೈಫ್ ನಿರ್ದೇಶಕ ಮಣಿರತ್ನಂರ ಹಿಂದಿನ ಸಿನಿಮಾ ಪೊನ್ನಿಯನ್ ಸೆಲ್ವನ್ 2 ಕರುನಾಡಲ್ಲಿ 22 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಈ ಗಣಿತದಲ್ಲೇ ವಿತರಕರು ಕಮಲ್ ರ ಥಗ್ ಲೈಫ್ ಈ ಬಾರಿ 30 ಕೋಟಿ ರೂ. ಮೀರಿದ ಬಾಕ್ಸ್ ಆಫೀಸ್ ಗಳಿಕೆ ಮಾಡಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ, ಕಮಲ್ ಕ್ಷಮೆ ಕೇಳಲು ಸುತಾರಂ ಒಪ್ಪುತ್ತಿಲ್ಲ.
ಹೀಗಾದರೆ ಕರ್ನಾಟಕದಲ್ಲಿ ಸಿನಿಮಾ ಬ್ಯಾನ್ ಆಗುತ್ತೆ. ಹಣ ಹೂಡಿರೋ ವಿತರಕ ಬೀದಿಗೆ ಬರುತ್ತಾನೆ. ಹೀಗಾಗಿಯೇ ಕರ್ನಾಟಕ ವಿತರಕರು ಚಿತ್ರತಂಡವನ್ನು ಭೇಟಿ ಮಾಡಿದ್ದು, ಹೇಗಾದರೂ ಮಾಡಿ, ಕಮಲ್ ರಿಂದ ಕ್ಷಮೆ ಕೇಳಿಸಿ ಹಾದಿ ಸುಗಮಗೊಳಿಸಿ ಅಂತಾ ಗೋಗರೆಯುತ್ತಿದ್ದಾರೆ. ಆದರೆ ಅಹಂಕಾರಿ ಕಿರಿಕ್ ಹಾಸನ್ ತಮ್ಮ ಮೇಲೆ ಬಂಡವಾಳ ಹೂಡಿರೋರ ಹಿತಕ್ಕೆ ಬದ್ಧವಾಗ್ತಾರಾ, ಕನ್ನಡಿಗರಿಗೆ ಕೈಮುಗಿದು ಮನ್ನಿಸಿ ಅಂತಾರಾ ಅನ್ನೋದು ಈಗಿರುವ ಪ್ರಶ್ನೆ.



















