ಕೌಲಾಲಂಪುರ: ಮಲೇಷ್ಯಾಗೆ ಈ ವರ್ಷದ ಮೊದಲ ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಉಭಯ ದೇಶಗಳ ನಡುವಿನ ‘ಸಮಗ್ರ ಪಾಲುದಾರಿಕೆ’ಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಇಂದು ಮೋದಿ ಸುದೀರ್ಘ ಚರ್ಚೆ ನಡೆಸಿದ್ದು, ಉಭಯ ದೇಶಗಳ ನಡುವೆ ಆರ್ಥಿಕ, ರಕ್ಷಣೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದ 6 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಮಾತುಕತೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಮಲೇಷ್ಯಾವನ್ನು ಬೆಸೆಯುವಲ್ಲಿ ತಮಿಳು ಭಾಷೆ ಮತ್ತು ಸಂಸ್ಕೃತಿಯ ಪಾತ್ರ ಅನನ್ಯವಾದುದು ಎಂದು ಬಣ್ಣಿಸಿದರು. ಮಲೇಷ್ಯಾದ ಶಿಕ್ಷಣ, ಮಾಧ್ಯಮ ಮತ್ತು ದೈನಂದಿನ ಜೀವನದಲ್ಲಿ ತಮಿಳು ಭಾಷೆಯ ಸಕ್ರಿಯ ಉಪಸ್ಥಿತಿಯನ್ನು ಶ್ಲಾಘಿಸಿದ ಅವರು, ಈಗ ಸಹಿ ಮಾಡಲಾದ ‘ಆಡಿಯೋ ವಿಷುವಲ್’ ಒಪ್ಪಂದದಿಂದಾಗಿ ಭಾರತೀಯ ಚಲನಚಿತ್ರಗಳು, ವಿಶೇಷವಾಗಿ ತಮಿಳು ಸಿನಿಮಾಗಳು ಮತ್ತು ಸಂಗೀತವು ಎರಡೂ ದೇಶಗಳ ಜನರ ಹೃದಯವನ್ನು ಇನ್ನಷ್ಟು ಹತ್ತಿರ ತರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಭಯ ದೇಶಗಳ ಮಾತುಕತೆ ವೇಳೆ ಭದ್ರತಾ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉಗ್ರ ನಿಗ್ರಹ, ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಕಡಲ ಭದ್ರತೆಯಲ್ಲಿ ಸಹಕಾರ ಬಲಪಡಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಸೆಮಿಕಂಡಕ್ಟರ್ ತಯಾರಿಕೆ, ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ತಂತ್ರಜ್ಞಾನ ಮತ್ತು ಆಹಾರ ಭದ್ರತೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಜಂಟಿಯಾಗಿ ಕೆಲಸ ಮಾಡಲು ಎರಡೂ ದೇಶಗಳು ಒಪ್ಪಿವೆ. ವಿಶೇಷವಾಗಿ, ದ್ವಿಪಕ್ಷೀಯ ವ್ಯಾಪಾರದಲ್ಲಿ ಸ್ಥಳೀಯ ಕರೆನ್ಸಿಗಳನ್ನು ಬಳಸುವ ನಿರ್ಧಾರವು ಆರ್ಥಿಕ ಸಂಬಂಧದಲ್ಲಿ ಹೊಸ ಮೈಲಿಗಲ್ಲಾಗಿದೆ ಎಂದು ಪ್ರಧಾನಿ ಅನ್ವರ್ ಇಬ್ರಾಹಿಂ ಬಣ್ಣಿಸಿದ್ದಾರೆ.
6 ಮಹತ್ವದ ಒಪ್ಪಂದಗಳು
ವಿಪತ್ತು ನಿರ್ವಹಣೆ, ಭ್ರಷ್ಟಾಚಾರದ ವಿರುದ್ಧ ಹೋರಾಟ, ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆ, ಸೆಮಿಕಂಡಕ್ಟರ್ ಮತ್ತು ಆಡಿಯೋ-ವಿಷುವಲ್ ಸಹ-ನಿರ್ಮಾಣ ಸೇರಿದಂತೆ ಆರು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಮಲೇಷ್ಯಾದಲ್ಲಿರುವ ಭಾರತೀಯ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಭಾರತದ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಕೊಂಡಾಡಿರುವ ಅನ್ವರ್ ಇಬ್ರಾಹಿಂ, ಹೆಚ್ಚಿನ ಸಂಖ್ಯೆಯ ಮಲೇಷ್ಯಾ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕಾಗಿ ಭಾರತಕ್ಕೆ ಕಳುಹಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಮಲೇಷ್ಯಾದಲ್ಲಿರುವ ಸುಮಾರು 29 ಲಕ್ಷ ಭಾರತೀಯ ಮೂಲದ ಜನರು ಈ ದ್ವಿಪಕ್ಷೀಯ ಸಂಬಂಧದ ಜೀವಂತ ಸೇತುವೆಯಾಗಿದ್ದಾರೆ ಎಂದೂ ಇಬ್ರಾಹಿಂ ತಿಳಿಸಿದ್ದಾರೆ.
ಇದನ್ನೂ ಓದಿ : ಗೃಹಲಕ್ಷ್ಮೀ ಫಲಾನುಭವಿಗಳೇ ಗಮನಿಸಿ | ನೀವು ಹಣ ಪಡೆಯಲು ಈ ಕೆಲಸ ಮಾಡಬೇಕು



















