‘
ಆಗ್ರಾ: ಉತ್ತರಪ್ರದೇಶದ ಆಗ್ರಾದ ತಾಜ್ ಮಹಲ್ ಸಂಕೀರ್ಣದ ಬಳಿ ನಿಲ್ಲಿಸಿದ್ದ ಕಾರೊಂದರಲ್ಲಿ ವೃದ್ಧರೊಬ್ಬರು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಶ್ಚಿಮ ದ್ವಾರದ ಬಳಿ ಲಾಕ್ ಮಾಡಲಾಗಿದ್ದ ಕಾರಿನೊಳಗೆ ಹಿರಿಯ ನಾಗರಿಕರೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದು, ಸ್ಥಳೀಯರ ಸಹಾಯದಿಂದ ಅವರನ್ನು ಹೊರಗೆ ತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆ ವ್ಯಕ್ತಿ ಹಲವಾರು ಗಂಟೆಗಳಿಂದ ಕಾರಿನೊಳಗೇ ಲಾಕ್ ಆಗಿದ್ದರು. ತೀವ್ರ ಉಷ್ಣತೆಯಿಂದಾಗಿ ಅವರ ಸ್ಥಿತಿ ಗಂಭೀರವಾಗಿತ್ತು. ಅಚ್ಚರಿಯೆಂದರೆ ಕಾರಿನೊಳಗೆ ಅವರನ್ನು ಬಟ್ಟೆಯಿಂದ ಕಟ್ಟಿ ಹಾಕಲಾಗಿತ್ತು. ಇದು ಘಟನೆ ಬಗ್ಗೆ ಇನ್ನಷ್ಟು ಅನುಮಾನ ಮೂಡಿಸಿದೆ.
ಬಹಳ ಹೊತ್ತಿನಿಂದಲೂ ಕಾರು ನಿಂತಿದ್ದನ್ನು ಅಲ್ಲೇ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಗಮನಿಸಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ. ಅವರು ಕಾರಿನೊಳಗೆ ಇಣುಕಿ ನೋಡಿದಾಗ, ವೃದ್ಧರು ಚಲನರಹಿತವಾಗಿ ಮಲಗಿರುವುದು ಕಂಡುಬಂದಿದೆ. ಅವರ ಕೈ ಕಾಲುಗಳನ್ನು ಕಟ್ಟಲಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅವರು ಕೂಡಲೇ ಸಹಾಯಕ್ಕಾಗಿ ಸುತ್ತಲಿದ್ದವರನ್ನು ಕರೆದರು. ಬಳಿಕಇತರರ ಸಹಾಯದಿಂದ, ಅವರು ಕಾರಿನ ಕಿಟಕಿಯನ್ನು ಒಡೆದು ವ್ಯಕ್ತಿಯನ್ನು ಹೊರತೆಗೆದಿದ್ದಾರೆ.
ಆದರೆ ಅವರ ಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಮಾತನಾಡುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ತಕ್ಷಣ ಆಂಬ್ಯುಲೆನ್ಸ್ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯ ಪ್ರವಾಸಿ ಮಾರ್ಗದರ್ಶಿ ಮತ್ತು ಘಟನೆಯ ಪ್ರತ್ಯಕ್ಷದರ್ಶಿ ಮೊಹಮ್ಮದ್ ಅಸ್ಲಾಂ, “ಕಾರಿನೊಳಗೆ ಹಿರಿಯ ನಾಗರಿಕನನ್ನು ಕಟ್ಟಿ ಹಾಕಲಾಗಿತ್ತು. ಅವರ ಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ ಅವರಿಗೆ ಮಾತನಾಡಲೂ ಆಗುತ್ತಿರಲಿಲ್ಲ. ಇಡೀ ದೃಶ್ಯವು ಬಹಳ ವಿಚಲಿತಗೊಳಿಸುವಂತಿತ್ತು” ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಕುಟುಂಬದ ಮೇಲೆ ಶಂಕೆ
ಕಾರು ಮಹಾರಾಷ್ಟ್ರ ನೋಂದಣಿ ಫಲಕವನ್ನು ಹೊಂದಿದ್ದು, ಅದರ ಮೇಲೆ ‘ಮಹಾರಾಷ್ಟ್ರ ಸರ್ಕಾರ’ ಎಂಬ ಸ್ಟಿಕ್ಕರ್ ಸಹ ಅಂಟಿಸಲಾಗಿತ್ತು ಎಂದು ವರದಿಗಳು ಸೂಚಿಸುತ್ತವೆ. ವಾಹನದ ಮೇಲ್ಛಾವಣಿಗೆ ಸಾಮಾನುಗಳನ್ನು ಕಟ್ಟಲಾಗಿತ್ತು, ಇದರಿಂದಾಗಿ ಮಹಾರಾಷ್ಟ್ರದಿಂದ ಕುಟುಂಬವೊಂದು ಆಗ್ರಾಕ್ಕೆ ಭೇಟಿ ನೀಡಲು ಬಂದಿದ್ದು, ಕುಟುಂಬವು ಆ ವ್ಯಕ್ತಿಯನ್ನು ಕಾರಿನಲ್ಲಿ ಲಾಕ್ ಮಾಡಿ ತಾಜ್ ಮಹಲ್ ನೋಡಲು ಹೋಗಿರಬಹುದು ಎಂದು ಶಂಕಿಸಲಾಗಿದೆ.
ಪೊಲೀಸ್ ಇನ್ಸ್ಪೆಕ್ಟರ್ ಕನ್ವರ್ ಸಿಂಗ್, ಈ ಪ್ರಕರಣವು ನಿರ್ಲಕ್ಷ್ಯ ಅಥವಾ ಅಮಾನವೀಯ ವರ್ತನೆಯಾಗಿ ಕಂಡುಬರುತ್ತದೆ ಎಂದಿದ್ದಾರೆ. “ನಾವು ಕಾರು ಮಾಲೀಕರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ನಿಖರವಾಗಿ ಏನಾಯಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.



















