ಬೆಂಗಳೂರು : ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಮಾಸಿಕ (ಮನೆಯ ಯಜಮಾನಿಯರು) 2 ಸಾವಿರ ರೂ. ನೀಡಲಾಗುತ್ತದೆ. ಇದರ ಬೆನ್ನಲ್ಲೇ, ರಾಜ್ಯ ಸರ್ಕಾರವು ಗೃಹಲಕ್ಷ್ಮಿ (Gruhalakshmi Scheme) ಯೋಜನೆಯಿಂದ 1.1 ಲಕ್ಷ ಮಹಿಳೆಯರನ್ನು ಕೈಬಿಟ್ಟಿದೆ. ಅರ್ಹರಿಗೆ ಮಾತ್ರ ಯೋಜನೆಯ ಲಾಭ ನೀಡುವ ಉದ್ದೇಶದಿಂದ ಅನರ್ಹರನ್ನು ಯೋಜನೆಯಿಂದ ಕೈಬಿಡಲಾಗಿದೆ.
ಮೊದಲ ಹಂತವಾಗಿ ರಾಜ್ಯದ 17 ಜಿಲ್ಲೆಗಳಲ್ಲಿ ಅನರ್ಹರು ಯೋಜನೆಯ ಲಾಭ ಪಡೆಯುತ್ತಿರುವುದನ್ನು ಪರಿಶೀಲನೆ ನಡೆಸಲಾಗಿದ್ದು, 1,12,092 ಅನರ್ಹ ಮಹಿಳೆಯರನ್ನು ಯೋಜನೆಯಿಂದ ಕೈಬಿಡಲಾಗಿದೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನೋಂದಣಿಯಾದ ನಂತರ ರಾಜ್ಯಾದ್ಯಂತ ಸುಮಾರು 67,869 ಮಹಿಳೆಯರು ನಿಧನರಾಗಿದ್ದಾರೆ. ಆದರೂ, ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುತ್ತಿತ್ತು. ಈ ಹಣವನ್ನು ಅವರ ಕುಟುಂಬಸ್ಥರು ಡ್ರಾ ಮಾಡುವ ಮೂಲಕ ಯೋಜನೆಯ ದುರುಪಯೋಗ ಮಾಡಿಕೊಳ್ಳುತ್ತಿದ್ದರು.
ಇದೇ ರೀತಿ, 41,848 ಮಹಿಳೆಯರು ತೆರಿಗೆ ಪಾವತಿಸುವವರಾಗಿದ್ದು, ಇವರ ಹೆಸರನ್ನು ಕೂಡ ಯೋಜನೆಯಿಂದ ಕೈಬಿಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ ನಿಯಮದ ಪ್ರಕಾರ, ತೆರಿಗೆ ಪಾವತಿಸುವ ಶ್ರೀಮಂತ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ. ಆದರೂ, 41,848 ಐಟಿ ಪಾವತಿದಾರ ಮಹಿಳೆಯರು ಪ್ರತಿ ತಿಂಗಳು 2 ಸಾವಿರ ರೂ. ಪಡೆಯುತ್ತಿರುವುದನ್ನು ಗಮನಿಸಿದ ಸರ್ಕಾರವು ಇವರನ್ನು ಯೋಜನೆಯಿಂದ ಕೈಬಿಟ್ಟಿದೆ.
ಇ-ಕೆವೈಸಿ ಕಡ್ಡಾಯ
ಗೃಹಲಕ್ಷ್ಮಿ ಯೋಜನೆಯ ದುರುಪಯೋಗ ತಡೆಯಲು ರಾಜ್ಯ ಸರ್ಕಾರವು ಹೊಸ ಕ್ರಮ ತೆಗೆದುಕೊಂಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಗೃಹಲಕ್ಷ್ಮಿ ಯೋಜನೆಯಲ್ಲಿ ಪಾರದರ್ಶಕತೆ ತರಲು ಕಡ್ಡಾಯ ಬಯೋಮೆಟ್ರಿಕ್ ಇ-ಕೆವೈಸಿ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ಒಂದು ವಾರದಲ್ಲಿಯೇ ಇ-ಕೆವೈಸಿ ಜಾರಿಗೆ ಬರಲಿದ್ದು, ಮಹಿಳೆಯರು ಯೋಜನೆಯ ಲಾಭ ಪಡೆಯಲು ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಯೋಜನೆಯ ಲಾಭ ಪಡೆಯುತ್ತಿರುವ ಸುಮಾರು 1.3 ಕೋಟಿ ಮಹಿಳೆಯರು ಈಗ ಇ-ಕೆವೈಸಿ ಮಾಡಿಸಬೇಕಿದೆ. ಇದಕ್ಕಾಗಿ ಮಹಿಳೆಯರು ಹತ್ತಿರದ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಬಹುದು. ಇದಕ್ಕೆ ಒಂದು ತಿಂಗಳ ಗಡುವು ನೀಡಲಾಗಿದೆ.
ಇದನ್ನೂ ಓದಿ : ಇಂಟರ್ನೆಟ್ ಬೇಡ, ಕರೆ ಮಾಡುವ ಸೌಲಭ್ಯ ಸಾಕು ಎನ್ನುವವರಿಗೆ ಜಿಯೋ ಗುಡ್ ನ್ಯೂಸ್ : ಇಲ್ಲಿದೆ ಹೊಸ ಪ್ಲಾನ್



















