ಬೆಂಗಳೂರು : ವರನಟ ಡಾಕ್ಟರ್ ರಾಜ್ಕುಮಾರ್ ಸಮಾಧಿ ಸ್ಥಳದ ಬಗ್ಗೆ ಸರ್ಕಾರ ಮೀಸಲಿಟ್ಟಿದ್ದ 2 ಎಕರೆ ಪ್ರದೇಶದ ಬಗ್ಗೆ ಪ್ರಶ್ನೆ ಎತ್ತಿದ್ದ ನಟ ಚೇತನ್ ಅಹಿಂಸಾ ವಿರುದ್ಧ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಇದೀಗ ನಟ ಅಹಿಂಸಾ ಚೇತನ್ ವಿರುದ್ದ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಗೋಕಾಕ್ ಹೋರಾಟದ ರೂವಾರಿ, ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಡಾ. ರಾಜ್ಕುಮಾರ್ ಬಗ್ಗೆ ಅಹಿಂಸಾ ಚೇತನ್ ಮಾತನಾಡಿರುವುದು ಸರಿಯಲ್ಲ, ಈ ಕೂಡಲೇ ಅಹಿಂಸಾ ಚೇತನ್ ತಮ್ಮ ಮಾತನ್ನ ವಾಪಸ್ ಪಡೆಯಬೇಕು, ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಕುಮಾರ್ ಹಣವನ್ನ ನೋಡಿಲ್ಲ.. ಕನ್ನಡ ಚಿತ್ರರಂಗಕ್ಕಾಗಿ, ಕನ್ನಡಿಗರಿಗಾಗಿ, ಕನ್ನಡ ಹೋರಾಟಗಾರರಿಗಾಗಿ ದುಡಿದಂತಹ ಧೀಮಂತ ನಾಯಕ, ಅಂತಹ ರಾಜ್ಕುಮಾರ್ ಅವರ ಪುಣ್ಯಭೂಮಿಗಾಗಿ 7 ದಿನ ಉಪವಾಸ ಸತ್ಯಾಗ್ರಹ ಮಾಡಿದ್ವಿ, ಅಂದು ಕುಮಾರಸ್ವಾಮಿ ಅವರು 10 ಕೋಟಿ ಬಿಡುಗಡೆ ಮಾಡಿದ್ರು, ಆದ್ರೆ ಈಗ 2 ಎಕರೆ ಸಮಾಧಿ ಜಮೀನಿನ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದು ಪ್ರವೀಣ್ ಶೆಟ್ಟಿ ಹೇಳಿದ್ದಾರೆ.
ನೀವು ಕನ್ನಡ ಜನರಿಗೆ ಅಹಿಂಸೆಯನ್ನ ಕೊಟ್ಟಿಲ್ಲ.. ಹಿಂಸೆಯನ್ನ ಕೊಡ್ತಾ ಇದ್ದೀರಿ. ರಾಜ್ಕುಮಾರ್ ಅಭಿಮಾನಿಗಳು ಗಲ್ಲಿ ಗಲ್ಲಿಯಲ್ಲಿದ್ದಾರೆ. ಯಾವ ಗಲ್ಲಿಯಿಂದಲಾದ್ರೂ ಏಟು ಬೀಳಬಹುದು, ರಾಜ್ಕುಮಾರ್ ಅವರು ನಿಮ್ಮ ರೀತಿ ಫಾರಿನ್ನಿಂದ ಹೈಟೆಕ್ ಆಗಿ ಬಂದಿಲ್ಲ, ಸಾಮಾನ್ಯ ಮನುಷ್ಯನಾಗಿ ಬಂದವರು, ಕನ್ನಡಿಗರಿಗಾಗಿ ಸದಾ ಮಿಡಿದವರು, ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋದವರಲ್ಲ, ಹೀಗಾಗಿ ಕೂಡಲೇ ಮಾತನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕೆಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಆಗ್ರಹಿಸಿದ್ದಾರೆ.
ನಟ ಚೇತನ್ ಅಹಿಂಸಾ ಪೋಸ್ಟ್
ಡಾ. ರಾಜ್ಕುಮಾರ್ ಹುಟ್ಟಿದ ದಿನದಂದು ಅವರ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿನಾ? 21ನೇ ಶತಮಾನದಲ್ಲಿ ಪ್ರಮುಖ ಹೋರಾಟವೇ ಭೂಮಿಯಾಗಿದೆ. ಸರ್ಕಾರವೂ ಅದನ್ನ ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಉಪಯೋಗಕ್ಕೆ ಹಂಚಬೇಕು. ಮತಗಳ ಲಾಭದ ಉದ್ದೇಶದಿಂದ ಹಂಚಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ನಟ ಚೇತನ್ ಅಹಿಂಸಾ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ : ಸನ್ರೈಸರ್ಸ್ ವಿರುದ್ಧ ಸೇಡು ತೀರಿಸಿಕೊಂಡ 15 ವರ್ಷದ ಪೋರ : 36 ಎಸೆತಗಳಲ್ಲೇ ಸಿಡಿಯಿತು ಶತಕ ‘ವೈಭವ’



















