ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಭರ್ಜರಿ ಜಯಭೇರಿ ಬಾರಿಸಿ ಸರ್ಕಾರ ರಚಿಸಿದ ಬೆನ್ನಲ್ಲೇ, ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ಮತ್ತು ನೂತನ ಮುಖ್ಯಮಂತ್ರಿ ವಿಜಯ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳು ಹಬ್ಬಿದ್ದವು. ಈ ಎಲ್ಲಾ ಚರ್ಚೆಗಳಿಗೆ ಹಾಗೂ ಟೀಕೆಗಳಿಗೆ ಸ್ವತಃ ರಜನಿಕಾಂತ್ ಭಾನುವಾರ ತೆರೆ ಎಳೆದಿದ್ದಾರೆ. ಚೆನ್ನೈನ ಪೋಯಸ್ ಗಾರ್ಡನ್ನಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ತಮಗೆ ನೂತನ ಸಿಎಂ ವಿಜಯ್ ಮೇಲೆ ಯಾವುದೇ ಅಸೂಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ಡಿಎಂಕೆ ಮುಖ್ಯಸ್ಥ, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರನ್ನು ರಜನಿಕಾಂತ್ ಭೇಟಿಯಾಗಿದ್ದರು. ಈ ಭೇಟಿಯು ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವಿಜಯ್ ಮುಖ್ಯಮಂತ್ರಿಯಾಗುತ್ತಿರುವುದು ರಜನಿಕಾಂತ್ ಅವರಿಗೆ ಇಷ್ಟವಿಲ್ಲ, ಅದಕ್ಕಾಗಿಯೇ ಅವರು ಸ್ಟಾಲಿನ್ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಅರ್ಥದಲ್ಲಿ ವಿಶ್ಲೇಷಿಸಲಾಗುತ್ತಿತ್ತು. ಈ ಕುರಿತು ಮಾತನಾಡಿದ ರಜನಿ, “ನಾನು ಸ್ಟಾಲಿನ್ ಅವರನ್ನು ಒಬ್ಬ ಸ್ನೇಹಿತನಾಗಿ ಭೇಟಿಯಾಗಿದ್ದೆ ಅಷ್ಟೇ. ಆದರೆ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ. ಅನಗತ್ಯವಾಗಿ ಮಾತನಾಡುವಷ್ಟು ಕೀಳು ಮಟ್ಟದ ಅಥವಾ ಅಗ್ಗದ ವ್ಯಕ್ತಿ ರಜಿನಿಯಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೊಳತ್ತೂರು ಕ್ಷೇತ್ರದಲ್ಲಿ 3 ಬಾರಿ ಶಾಸಕರಾಗಿದ್ದ ಸ್ಟಾಲಿನ್ ಅವರು ಟಿವಿಕೆ ಅಭ್ಯರ್ಥಿ ವಿರುದ್ಧ ಸೋತಿದ್ದಕ್ಕೆ ತಮಗೆ ವೈಯಕ್ತಿಕವಾಗಿ ಬೇಸರವಾಗಿದೆ ಎಂದು ತಿಳಿಸಿದರು.
ಹಾಸ್ಯ ಚಟಾಕಿ ಹಾರಿಸಿದ ತಲೈವಾ
ನೂತನ ಸಿಎಂ ವಿಜಯ್ ರಾಜಕೀಯ ಬೆಳವಣಿಗೆಯನ್ನು ಕಂಡು ತಮಗೆ ಹೊಟ್ಟೆಕಿಚ್ಚು ಇದೆಯೇ ಎಂಬ ಪ್ರಶ್ನೆಗೆ ರಜನಿಕಾಂತ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. “ನಾನು ರಾಜಕೀಯದಲ್ಲೇ ಇಲ್ಲ, ಹಾಗಿರುವಾಗ ನನಗೆ ವಿಜಯ್ ಅವರನ್ನು ನೋಡಿ ಯಾಕೆ ಅಸೂಯೆ ಆಗಬೇಕು? ಒಂದು ವೇಳೆ ನನ್ನ ಸಮಕಾಲೀನರಾದ ಕಮಲ್ ಹಾಸನ್ ಏನಾದರೂ ಮುಖ್ಯಮಂತ್ರಿಯಾಗಿದ್ದರೆ, ನನಗೆ ಸ್ವಲ್ಪ ಹೊಟ್ಟೆಕಿಚ್ಚು ಆಗುತ್ತಿತ್ತೇನೋ” ಎಂದು ನಗುತ್ತಾ ಹಾಸ್ಯ ಚಟಾಕಿ ಹಾರಿಸಿದರು. ಚುನಾವಣಾ ಫಲಿತಾಂಶ ಪ್ರಕಟವಾದ ತಕ್ಷಣವೇ ತಾವೂ ವಿಜಯ್ ಅವರಿಗೆ ದೂರವಾಣಿ ಕರೆ ಮಾಡಿ ಶುಭ ಹಾರೈಸಿದ್ದಾಗಿ ಅವರು ತಿಳಿಸಿದರು.
ವಿಜಯ್ ಸಾಧನೆಗೆ ಸೂಪರ್ಸ್ಟಾರ್ ಶ್ಲಾಘನೆ
ಮೊದಲ ಚುನಾವಣೆಯಲ್ಲೇ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತಿರುವುದು ತಮಗೆ ಆಶ್ಚರ್ಯ ತಂದಿದೆ ಎಂದು ಒಪ್ಪಿಕೊಂಡ ರಜನಿಕಾಂತ್, ನೂತನ ಸಿಎಂ ಕಾರ್ಯವೈಖರಿಯನ್ನು ಶ್ಲಾಘಿಸಿದರು. ತಮಗೂ ವಿಜಯ್ ಅವರಿಗೂ 24 ವರ್ಷಗಳ ವಯಸ್ಸಿನ ವ್ಯತ್ಯಾಸವಿದೆ ಎಂಬುದನ್ನು ನೆನಪಿಸಿದ ಅವರು, ತಮಿಳುನಾಡಿನ ಎರಡು ಪ್ರಮುಖ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಎದುರು ಒಂಟಿಯಾಗಿ ನಿಂತು, ಸ್ವಂತ ಬಲದ ಮೇಲೆ ಈ ಮಟ್ಟದ ಗುರುತಿಸಿಕೊಳ್ಳುವಿಕೆ ಹಾಗೂ ಯಶಸ್ಸು ಸಾಧಿಸಿರುವುದಕ್ಕೆ ವಿಜಯ್ ಅಭಿನಂದನಾರ್ಹರು ಎಂದು ಕೊಂಡಾಡಿದರು. ಈ ಹಿಂದೆ ವಿಜಯ್ ಗೆಲುವಿನ ಬಗ್ಗೆ ಕೇಳಿದ ಪ್ರಶ್ನೆಗೆ ಮೌನವಾಗಿಯೇ ಕೈಮುಗಿದು ಹೊರಟುಹೋಗಿದ್ದ ರಜನಿಕಾಂತ್, ಇದೀಗ ಅಧಿಕೃತವಾಗಿ ಸುದೀರ್ಘ ಸ್ಪಷ್ಟನೆ ನೀಡುವ ಮೂಲಕ ತಮಿಳುನಾಡು ರಾಜಕೀಯ ಮತ್ತು ಸಿನಿಮಾ ರಂಗದ ನಡುವಿನ ವದಂತಿಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.
ಇದನ್ನೂ ಓದಿ : ವರ್ಷಗಳ ಕಾಲ ಗ್ಯಾಂಗ್ ರೇಪ್, ಬ್ಲ್ಯಾಕ್ಮೇಲ್ ; ಅಕ್ಕನ ಬೆನ್ನಲ್ಲೇ ತಂಗಿಯೂ ಆತ್ಮಹತ್ಯೆಗೆ ಶರಣು!



















