ಅಹಮದಾಬಾದ್ : ಇಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಸಭೆಯಲ್ಲಿ ಮಹತ್ವದ ಹಾಗೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ನಿಯಮಾವಳಿಗಳ ಗಂಭೀರ ಉಲ್ಲಂಘನೆ ಮತ್ತು ಆಡಳಿತಾತ್ಮಕ ವೈಫಲ್ಯದ ಹಿನ್ನೆಲೆಯಲ್ಲಿ ‘ಕ್ರಿಕೆಟ್ ಕೆನಡಾ‘ ಮಂಡಳಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಐಸಿಸಿ ಅಮಾನತುಗೊಳಿಸಿದೆ. ಜಾಗತಿಕ ಕ್ರಿಕೆಟ್ನಲ್ಲಿ ಪಾರದರ್ಶಕತೆ ಹಾಗೂ ಉತ್ತಮ ಆಡಳಿತವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಐಸಿಸಿ ಈ ಕಠಿಣ ಹೆಜ್ಜೆ ಇಟ್ಟಿದೆ.
ಆಟಗಾರರ ಭವಿಷ್ಯಕ್ಕೆ ಯಾವುದೇ ಧಕ್ಕೆಯಿಲ್ಲ
ಕ್ರಿಕೆಟ್ ಕೆನಡಾ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಲಾಗಿದ್ದರೂ, ಆಟಗಾರರ ಹಿತಾಸಕ್ತಿಯನ್ನು ಕಾಪಾಡಲು ಐಸಿಸಿ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ. ಆಡಳಿತಾತ್ಮಕ ಸಮಸ್ಯೆಗಳ ಪರಿಣಾಮವು ಆಟಗಾರರ ಮೇಲೆ ಬೀರಬಾರದು ಎಂಬ ಉದ್ದೇಶದಿಂದ, ಕೆನಡಾದ ರಾಷ್ಟ್ರೀಯ ಕ್ರಿಕೆಟ್ ತಂಡಗಳು ಎಂದಿನಂತೆ ಐಸಿಸಿ ಟೂರ್ನಿಗಳಲ್ಲಿ ಹಾಗೂ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮಂಡಳಿಯ ಆಡಳಿತ ಮಂಡಳಿಯ ಮೇಲಿನ ಶಿಸ್ತುಕ್ರಮವು ಮೈದಾನದಲ್ಲಿ ಕೆನಡಾವನ್ನು ಪ್ರತಿನಿಧಿಸುವ ಕ್ರಿಕೆಟಿಗರ ಮೇಲೆ ಯಾವುದೇ ರೀತಿಯ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂಬುದನ್ನು ಐಸಿಸಿ ಖಚಿತಪಡಿಸಿದೆ.
ಅನುದಾನಕ್ಕೆ ಷರತ್ತುಬದ್ಧ ಅವಕಾಶ ಹಾಗೂ ಮರುಸ್ಥಾಪನೆ ಪ್ರಕ್ರಿಯೆ
ರಾಷ್ಟ್ರೀಯ ತಂಡಗಳ ನಿರಂತರ ಬೆಳವಣಿಗೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು, ಐಸಿಸಿ ಆಡಳಿತ ಮಂಡಳಿಯ ಉಸ್ತುವಾರಿಯಲ್ಲಿ ನಿಯಂತ್ರಿತ ಕಾರ್ಯವಿಧಾನದ ಮೂಲಕ ಕೆನಡಾಗೆ ಆರ್ಥಿಕ ಅನುದಾನವನ್ನು ಒದಗಿಸಲು ನಿರ್ಧರಿಸಲಾಗಿದೆ. ಈ ಅನುದಾನವನ್ನು ಕೇವಲ ರಾಷ್ಟ್ರೀಯ ತಂಡದ ಅನುಮೋದಿತ ಕಾರ್ಯಕ್ರಮಗಳಿಗೆ ಮಾತ್ರ ಬಳಸಲು ಷರತ್ತು ವಿಧಿಸಲಾಗಿದೆ. ಅಲ್ಲದೆ, ಮಂಡಳಿಯ ಸ್ಥಾನಮಾನವನ್ನು ಮರಳಿ ಪಡೆಯಲು ಕೆನಡಾ ಕ್ರಿಕೆಟ್ ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ಪೂರೈಸಬೇಕಾಗಿದೆ. ಐಸಿಸಿ ನಾರ್ಮಲೈಸೇಶನ್ ಕಮಿಟಿಯು ಈ ಪ್ರಕ್ರಿಯೆಯ ಉಸ್ತುವಾರಿ ವಹಿಸಲಿದ್ದು, ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಿ ಎಲ್ಲಾ ಷರತ್ತುಗಳನ್ನು ಪೂರೈಸಿದ ಬಳಿಕವಷ್ಟೇ ಮಂಡಳಿಯ ಅಮಾನತು ಆದೇಶವನ್ನು ಹಿಂಪಡೆಯುವ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು.
ಮಹಿಳಾ ಕ್ರಿಕೆಟ್ ಹಾಗೂ ಇತರ ಮಹತ್ವದ ತೀರ್ಮಾನಗಳು
ಕೆನಡಾ ಕ್ರಿಕೆಟ್ ಅಮಾನತಿನ ಹೊರತಾಗಿ, ಈ ಮಹತ್ವದ ಸಭೆಯಲ್ಲಿ ಹಲವು ಐತಿಹಾಸಿಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮಹಿಳಾ ಕ್ರಿಕೆಟ್ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ೨೦೨೭ರ ‘ಮಹಿಳಾ ಚಾಂಪಿಯನ್ಸ್ ಟ್ರೋಫಿ’ಯನ್ನು ಜೂನ್-ಜುಲೈ ಬದಲಾಗಿ ಫೆಬ್ರವರಿ 14 ರಿಂದ 28ವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಇದರ ಜೊತೆಗೆ, ೨೦೨೬ರಲ್ಲಿ ‘ಮಹಿಳಾ ಎಮರ್ಜಿಂಗ್ ನೇಷನ್ಸ್ ಟ್ರೋಫಿ’ ಎಂಬ ಹೊಸ 10ತಂಡಗಳ ಟೂರ್ನಿಯನ್ನು ಆರಂಭಿಸಲು ಹಾಗೂ 2028ಹಿಳಾ ಟಿ20ವಿಶ್ವಕಪ್ಗೆ ಅರ್ಹತಾ ಮಾನದಂಡಗಳನ್ನು ಅನುಮೋದಿಸಲಾಗಿದೆ. ಭಾರತದ ಪಂದ್ಯಗಳನ್ನು ತಟಸ್ಥ ವೇದಿಕೆಯಲ್ಲಿ ಆಡಿಸುವ ಷರತ್ತಿನೊಂದಿಗೆ ೨೦೨೮ರ ವಿಶ್ವಕಪ್ ಆತಿಥ್ಯವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ವಹಿಸಲಾಗಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಪಿಂಕ್ ಬಾಲ್ ಮತ್ತು ಫ್ರಾಂಚೈಸಿ ಕ್ರಿಕೆಟ್ ನಿಯಂತ್ರಣ
ಬೆಳಕಿನ ಕೊರತೆಯಿಂದ ಟೆಸ್ಟ್ ಪಂದ್ಯಗಳಿಗೆ ಅಡ್ಡಿಯಾಗುವುದನ್ನು ತಪ್ಪಿಸಲು ಪ್ರಾಯೋಗಿಕವಾಗಿ ಪಿಂಕ್ ಬಾಲ್ ಬಳಸಲು ಹಾಗೂ ಅಂಪೈರ್ಗಳಿಗೆ ‘ಹಾಕ್-ಐ’ ತಂತ್ರಜ್ಞಾನದ ಬಳಕೆಗೆ ಅನುಮೋದನೆ ನೀಡಲಾಗಿದೆ. ಇದರ ಜೊತೆಗೆ, ಜಗತ್ತಿನಾದ್ಯಂತ ಹೆಚ್ಚಾಗುತ್ತಿರುವ ಫ್ರಾಂಚೈಸಿ ಕ್ರಿಕೆಟ್ ಲೀಗ್ಗಳ (ಟಿ20ಲೀಗ್ಗಳು) ಮೇಲೆ ನಿಗಾವಹಿಸಲು ಮತ್ತು ಇವುಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್ನೊಂದಿಗೆ ಹೇಗೆ ಸಮರ್ಪಕವಾಗಿ ಹೊಂದಾಣಿಕೆ ಮಾಡಬಹುದು ಎಂಬುದನ್ನು ಪರಿಶೀಲಿಸಲು ಹೊಸ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿಗಳ ಆಡಳಿತಾತ್ಮಕ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಕ್ರಿಕೆಟ್ ಆಟವನ್ನು ವಿಶ್ವಾದ್ಯಂತ ನ್ಯಾಯಸಮ್ಮತವಾಗಿ ಹಾಗೂ ಸ್ಪರ್ಧಾತ್ಮಕವಾಗಿ ಬೆಳೆಸುವುದು ಐಸಿಸಿಯ ಮುಖ್ಯ ಗುರಿಯಾಗಿದೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ತಿಳಿಸಿದ್ದಾರೆ.
ಇದನ್ನೂ ಓದಿ : ಪಂತ್ ನಾಯಕತ್ವ ಬಿಟ್ಟಿದ್ದಕ್ಕೆ ಗವಾಸ್ಕರ್ ತೀಕ್ಷ್ಣ ಪ್ರತಿಕ್ರಿಯೆ : RCB ಕೋಚ್ ಸೂತ್ರ ಕೊಂಡಾಡಿದ ಲೆಜೆಂಡ್!



















