ಮಹೋಬಾ : ಪತ್ನಿ ಮತ್ತು ಮಗನ ಸಾವಿನ ದುಃಖವನ್ನು ತಡೆಯಲಾರದೆ ವ್ಯಕ್ತಿಯೊಬ್ಬರು ಸ್ಮಶಾನದಲ್ಲೇ ಅವರ ಸಮಾಧಿಗಳನ್ನು ಅಪ್ಪಿಕೊಂಡು ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆಯೊಂದು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಚರಖಾರಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಕೇವಲ 11 ದಿನಗಳ ಅಂತರದಲ್ಲಿ ಕುಟುಂಬದ ಮೂವರು ಸಾವನ್ನಪ್ಪಿದ್ದು, ಮೂವರು ಅಪ್ರಾಪ್ತ ಮಕ್ಕಳು ಅನಾಥರಾಗಿದ್ದಾರೆ.
ಮೂಲತಃ ಮಧ್ಯಪ್ರದೇಶದ ಹರಪಾಲ್ಪುರದವರಾದ 40 ವರ್ಷದ ಸುಭಾನ್ ಅಹ್ಮದ್ ಅವರು ಚರಖಾರಿಯಲ್ಲಿರುವ ತಮ್ಮ ಅತ್ತೆಯ ಮನೆಯಲ್ಲಿದ್ದರು. ಮೇ 25ರಂದು ಉತ್ತರ ಭಾರತದಲ್ಲಿ ಬೀಸುತ್ತಿದ್ದ ತೀವ್ರ ಉಷ್ಣಗಾಳಿಗೆ ಇವರ 6 ವರ್ಷದ ಮಗ ಹಸ್ನೈನ್ ತುತ್ತಾಗಿದ್ದ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಮಗು ಕೊನೆಯುಸಿರೆಳೆದಿತ್ತು. ಮಗನ ಸಾವಿನ ಸುದ್ದಿ ಕೇಳಿದ ತಾಯಿ ರಜಿಯಾ ಖಾತೂನ್ ತೀವ್ರ ಆಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದರು. ಅಂದೇ ಇಬ್ಬರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿತ್ತು.
ಸಮಾಧಿಯ ಮೇಲೆಯೇ ಅಂತ್ಯವಾದ ಸುಭಾನ್ ಬದುಕು
ಕೆಲವೇ ಗಂಟೆಗಳ ಅವಧಿಯಲ್ಲಿ ಪತ್ನಿ ಮತ್ತು ಕಿರಿಯ ಮಗನನ್ನು ಕಳೆದುಕೊಂಡ ಸುಭಾನ್ ಅಹ್ಮದ್ ಸಂಪೂರ್ಣವಾಗಿ ಧೃತಿಗೆಟ್ಟಿದ್ದರು. ಕಳೆದ 11 ದಿನಗಳಿಂದ ತೀವ್ರ ಮಾನಸಿಕ ಖಿನ್ನತೆಯಲ್ಲಿದ್ದ ಅವರು, ಶುಕ್ರವಾರ ಮುಂಜಾನೆ 4 ಗಂಟೆಗೆ ಪ್ರಾರ್ಥನೆ ಸಲ್ಲಿಸಲು ಸಮಾಧಿಯ ಮೇಲೆಯೇ ಅಂತ್ಯವಾದ ಸುಭಾನ್ ಬದುಕುತೆರಳಿದ್ದರು. 2 ಗಂಟೆಯಾದರೂ ಅವರು ಮನೆಗೆ ಮರಳದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಿಕೊಂಡು ಹೋದಾಗ ಕಣ್ಣೀರು ತರಿಸುವ ದೃಶ್ಯ ಕಂಡುಬಂದಿದೆ. ಸುಭಾನ್ ಅವರು ಒಂದು ಕೈಯನ್ನು ಮಗನ ಸಮಾಧಿಯ ಮೇಲೂ, ಮತ್ತೊಂದು ಕೈಯನ್ನು ಪತ್ನಿಯ ಸಮಾಧಿಯ ಮೇಲೂ ಇಟ್ಟು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಸಾವಿಗೆ ನಿಖರ ಕಾರಣ ನಿಗೂಢ, ಮೂರು ಮಕ್ಕಳು ಅನಾಥ
ಸುಭಾನ್ ಅವರ ಕಾಲಿನ ಮೇಲೆ ಕಡಿತದ ಗುರುತು ಪತ್ತೆಯಾಗಿದ್ದು, ಸಮಾಧಿಯ ಬಳಿ ಮಲಗಿದ್ದಾಗ ಯಾವುದಾದರೂ ವಿಷಪೂರಿತ ಕೀಟ ಕಚ್ಚಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಪತ್ನಿ-ಮಗನ ಅಗಲಿಕೆಯ ತೀವ್ರ ಆಘಾತ ಮತ್ತು ಮಾನಸಿಕ ಖಿನ್ನತೆಯೇ ಅವರ ಸಾವಿಗೆ ಕಾರಣ ಎಂದು ಕುಟುಂಬಸ್ಥರು ನಂಬಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವೇ ನಿಖರ ಕಾರಣವು ತಿಳಿದುಬರಲಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ದುರಂತದಿಂದಾಗಿ ಸುಭಾನ್ ಅವರ ಮಕ್ಕಳಾದ ಸೈಫ್ (17), ರೋಷ್ನಿ (14) ಮತ್ತು ಆಲಿಯಾ (11) ಪೋಷಕರನ್ನು ಕಳೆದುಕೊಂಡು ಸಂಪೂರ್ಣವಾಗಿ ಅನಾಥರಾಗಿದ್ದಾರೆ. ವಿಧಿಯ ಈ ಕ್ರೂರ ಆಟ ಇಡೀ ಗ್ರಾಮವನ್ನೇ ಕಣ್ಣೀರಿಡುವಂತೆ ಮಾಡಿದೆ.
ಇದನ್ನೂ ಓದಿ : ತುಂಗಭದ್ರಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ!



















