ಮುಂಬೈ : ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸೋಷಿಯಲ್ ಮೀಡಿಯಾದಲ್ಲಿ ಹೊಸದೊಂದು ಸಂಚಲನ ಸೃಷ್ಟಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹೀನಾಯ ಪ್ರದರ್ಶನದ ಬೆನ್ನಲ್ಲೇ, ಪಾಂಡ್ಯ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯನ್ನು ದಿಢೀರ್ ಆಗಿ ಡಿಲೀಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು.
ಬುಧವಾರ ಸಂಜೆ ಅವರ ಖಾತೆಯನ್ನು ಹುಡುಕಿದಾಗ ‘ಯೂಸರ್ ನಾಟ್ ಫೌಂಡ್’ (User not found) ಹಾಗೂ ‘ಈ ಪ್ರೊಫೈಲ್ ಖಾಸಗಿಯಾಗಿದೆ’ ಎಂಬ ಸಂದೇಶಗಳು ಕಾಣಿಸಿಕೊಂಡಿದ್ದವು. ಬರೋಬ್ಬರಿ 40 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಖಾತೆ ಏಕಾಏಕಿ ಕಣ್ಮರೆಯಾಗಿದ್ದು ಕ್ರಿಕೆಟ್ ವಲಯದಲ್ಲಿ ನಾನಾ ಊಹಾಪೋಹಗಳಿಗೆ ಕಾರಣವಾಗಿತ್ತು.
ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ತಂಡವು ಲೀಗ್ ಹಂತದ 14 ಪಂದ್ಯಗಳ ಪೈಕಿ ಕೇವಲ 4ರಲ್ಲಿ ಮಾತ್ರ ಜಯ ಸಾಧಿಸಲು ಶಕ್ತವಾಗಿತ್ತು. ಪಾಯಿಂಟ್ಸ್ ಟೇಬಲ್ನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ಕೇವಲ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಿಂತ ಒಂದು ಸ್ಥಾನ ಮೇಲಿತ್ತು. ತಂಡದ ಈ ವೈಫಲ್ಯದ ಹೊಣೆಯನ್ನು ಹೊತ್ತಿದ್ದ ನಾಯಕ ಪಾಂಡ್ಯ, ಟೂರ್ನಿಯುದ್ದಕ್ಕೂ ಅಭಿಮಾನಿಗಳಿಂದ ತೀವ್ರ ಟೀಕೆ ಹಾಗೂ ಟ್ರೋಲ್ಗಳಿಗೆ ಗುರಿಯಾಗಿದ್ದರು. ಇದೇ ಹತಾಶೆಯಿಂದ ಅವರು ಸಾಮಾಜಿಕ ಜಾಲತಾಣದಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿರಬಹುದು ಎಂದು ಅಭಿಮಾನಿಗಳು ಅಂದಾಜಿಸಿದ್ದರು.
ಗಂಟೆಗಳ ಬಳಿಕ ಮತ್ತೆ ಪ್ರತ್ಯಕ್ಷವಾದ ಇನ್ಸ್ಟಾಗ್ರಾಮ್ ಖಾತೆ
ಖಾತೆ ಡಿಲೀಟ್ ಆದ ಅಥವಾ ನಿಷ್ಕ್ರಿಯಗೊಂಡ ವಿಚಾರ ಅಂತರ್ಜಾಲದಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ, ಕೆಲವೇ ಗಂಟೆಗಳ ಬಳಿಕ ಹಾರ್ದಿಕ್ ಪಾಂಡ್ಯ ಅವರ ಇನ್ಸ್ಟಾಗ್ರಾಮ್ ಖಾತೆ ಮತ್ತೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಂಡಿದೆ. ಖಾತೆ ಮರುಸ್ಥಾಪನೆಯಾಗಿದ್ದರೂ, ಈ ದಿಢೀರ್ ಬೆಳವಣಿಗೆಯ ಹಾಗೂ ನಾಪತ್ತೆಯ ಹಿಂದಿನ ನಿಖರ ಕಾರಣವನ್ನು ಪಾಂಡ್ಯ ಎಲ್ಲೂ ಸ್ಪಷ್ಟಪಡಿಸಿಲ್ಲ. ಐಪಿಎಲ್ 2026ರಲ್ಲಿ ವೈಯಕ್ತಿಕವಾಗಿಯೂ ಪಾಂಡ್ಯ ಅಷ್ಟೇನೂ ಪರಿಣಾಮಕಾರಿ ಆಟವಾಡಿರಲಿಲ್ಲ. ಟೂರ್ನಿಯಲ್ಲಿ ಅವರು ಆಡಿದ ಎಂಟು ಇನ್ನಿಂಗ್ಸ್ಗಳಿಂದ ಕೇವಲ 146 ರನ್ ಹಾಗೂ 3 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು. ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಸೇರಿದಂತೆ ಹಲವು ದಿಗ್ಗಜರು, ಮುಂಬೈ ತಂಡವು ಮುಂದಿನ ಸೀಸನ್ಗೆ ಪಾಂಡ್ಯ ಅವರನ್ನು ಉಳಿಸಿಕೊಳ್ಳಬೇಕು, ಆದರೆ ನಾಯಕತ್ವದಿಂದ ಕೆಳಗಿಳಿಸಿ ಅವರಿಗೆ ಮುಕ್ತವಾಗಿ ಆಡಲು ಅವಕಾಶ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಸೇರುವ ಸುಳಿವು ಹಾಗೂ ಅನ್ಫಾಲೋ ವಿವಾದ
ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ತಮ್ಮ ಫೋನ್ ಸ್ಕ್ರೀನ್ ಮೇಲೆ ’07:07′ ಸಮಯವಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಇದು ಅವರು ಮಹೇಂದ್ರ ಸಿಂಗ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರುವ ಮುನ್ಸೂಚನೆ ಎಂದು ನೆಟ್ಟಿಗರು ವಿಶ್ಲೇಷಿಸಿದ್ದರು. ಇದರ ಜೊತೆಗೆ, ಐಪಿಎಲ್ನಿಂದ ಮುಂಬೈ ಹೊರಬಿದ್ದ ತಕ್ಷಣವೇ ಹಾರ್ದಿಕ್ ಪಾಂಡ್ಯ ಇನ್ಸ್ಟಾಗ್ರಾಮ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ, ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರನ್ನು ಅನ್ಫಾಲೋ ಮಾಡಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡಿದ್ದವು. ಕೆಲ ಕಾಲ ಮುಂಬೈ ತಂಡವನ್ನು ಅನ್ಫಾಲೋ ಮಾಡಿದ್ದ ಹಾರ್ದಿಕ್, ಬಳಿಕ ಮತ್ತೆ ಫಾಲೋ ಮಾಡಿದ್ದರು. ಈ ಎಲ್ಲಾ ಗೊಂದಲಗಳ ನಡುವೆಯೇ ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಆಗಿ ಮರುಕಳಿಸಿರುವುದು, ಪಾಂಡ್ಯ ಹಾಗೂ ಮುಂಬೈ ಫ್ರಾಂಚೈಸಿ ಆಡಳಿತ ಮಂಡಳಿಯ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತಷ್ಟು ಪುಷ್ಟೀಕರಿಸುವಂತಿದೆ.
ಇದನ್ನೂ ಓದಿ : ಜಡೇಜಾ ‘ಪುಷ್ಪ’ ಅವತಾರ : ನಿತೀಶ್ ವಿಕೆಟ್ ಕಿತ್ತು ‘ತಗ್ಗೇದೆ ಲೇ’ ಎಂದ ಆಲ್ರೌಂಡರ್!



















