ಬೆಂಗಳೂರು : ಇತ್ತೀಚೆಗಷ್ಟೇ ಮುಕ್ತಾಯಗೊಂಡ ೨೦೨೬ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಅತ್ಯಂತ ವೇಗದ ಎಸೆತಗಳನ್ನು ಹಾಕಿ ಮಿಂಚಿದ್ದ ಯುವ ವೇಗದ ಬೌಲರ್ ಅಶೋಕ್ ಶರ್ಮಾ, ದೇಶೀಯ ಕ್ರಿಕೆಟ್ನಲ್ಲಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ರಾಜಸ್ಥಾನ ಕ್ರಿಕೆಟ್ ಸಂಸ್ಥೆಗೆ (ಆರ್ಸಿಎ) ವಿದಾಯ ಹೇಳಿರುವ ಅವರು, ಮುಂಬರುವ ದೇಶೀಯ ಕ್ರಿಕೆಟ್ ಋತುವಿನಿಂದ ಗುಜರಾತ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಇದಕ್ಕಾಗಿ ಆರ್ಸಿಎಯಿಂದ ಅವರು ನಿರಾಕ್ಷೇಪಣಾ ಪತ್ರ (ಎನ್ಒಸಿ) ಕೂಡ ಪಡೆದುಕೊಂಡಿದ್ದಾರೆ.
ವೃತ್ತಿಜೀವನದ ದೃಷ್ಟಿಯಿಂದ ಗುಜರಾತ್ನತ್ತ ಒಲವು
ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಉದ್ದೇಶದಿಂದ ತಾವು ರಾಜಸ್ಥಾನ ತೊರೆದು ಗುಜರಾತ್ ತಂಡವನ್ನು ಸೇರುತ್ತಿರುವುದಾಗಿ ಅಶೋಕ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ರಾಜಸ್ಥಾನಕ್ಕಿಂತ ಗುಜರಾತ್ನಲ್ಲಿ ತಮಗೆ ಹೆಚ್ಚು ಅವಕಾಶಗಳು ಸಿಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ರಾಜಸ್ಥಾನ ಹಿರಿಯರ ತಂಡಕ್ಕೆ ಪದಾರ್ಪಣೆ ಮಾಡಿದ್ದ ಶರ್ಮಾ, ಆಡಿದ ಕೇವಲ ನಾಲ್ಕು ಪ್ರಥಮ ದರ್ಜೆ ಪಂದ್ಯಗಳಲ್ಲಿ ೧೪ ವಿಕೆಟ್ ಕಬಳಿಸಿ ಆಯ್ಕೆಗಾರರ ಗಮನ ಸೆಳೆದಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ೧೬ ಪಂದ್ಯಗಳಲ್ಲಿ ೨೨ ವಿಕೆಟ್ ಹಾಗೂ ವಿಜಯ್ ಹಜಾರೆ ಟ್ರೋಫಿಯ ಕೇವಲ ಏಳು ಪಂದ್ಯಗಳಲ್ಲಿ ೧೩ ವಿಕೆಟ್ ಉರುಳಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು.
ಐಪಿಎಲ್ನಲ್ಲಿ ವೇಗದ ಬೌಲಿಂಗ್ ಮೂಲಕ ಕಮಾಲ್
ದೇಶೀಯ ಕ್ರಿಕೆಟ್ನ ಈ ಅಮೋಘ ಸಾಧನೆ ಅಶೋಕ್ ಶರ್ಮಾ ಅವರಿಗೆ ೨೦೨೬ರ ಐಪಿಎಲ್ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ತಂಡ ಸೇರಲು ನೆರವಾಗಿತ್ತು. ಟೂರ್ನಿಯಲ್ಲಿ ೬ ಪಂದ್ಯಗಳನ್ನಾಡಿ ೬ ವಿಕೆಟ್ ಪಡೆದಿದ್ದ ಅವರು, ಟೂರ್ನಿಯ ಅತಿ ವೇಗದ ಎಸೆತ (೧೫೪.೨ ಕಿ.ಮೀ) ದಾಖಲಿಸುವ ಮೂಲಕ ಭರವಸೆಯ ವೇಗಿಯಾಗಿ ಮೂಡಿಬಂದಿದ್ದರು. ಅವರ ಈ ವೇಗ ಹಾಗೂ ಕರಾರುವಕ್ಕಾದ ದಾಳಿ ಹಲವರ ಪ್ರಶಂಸೆಗೆ ಪಾತ್ರವಾಗಿತ್ತು.
ರಾಜಸ್ಥಾನ ತಂಡಕ್ಕೆ ಆಘಾತದ ಮೇಲೆ ಆಘಾತ
ಅಶೋಕ್ ಶರ್ಮಾ ಅವರ ನಿರ್ಗಮನದಿಂದಾಗಿ ರಾಜಸ್ಥಾನ ತಂಡದ ವೇಗದ ಬೌಲಿಂಗ್ ವಿಭಾಗ ಮತ್ತಷ್ಟು ದುರ್ಬಲಗೊಂಡಿದೆ. ದೀಪಕ್ ಚಹಾರ್ ಹಾಗೂ ಖಲೀಲ್ ಅಹ್ಮದ್ ಅವರಂತಹ ಹಿರಿಯ ವೇಗಿಗಳು ಪದೇ ಪದೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ, ಪ್ರಸಕ್ತ ಸಾಲಿನ ದೇಶೀಯ ಋತುವಿಗೆ ೩೬ ವರ್ಷದ ಅನಿಕೇತ್ ಚೌಧರಿ ಮಾತ್ರ ರಾಜಸ್ಥಾನ ತಂಡದ ಏಕೈಕ ಹಿರಿಯ ವೇಗಿಯಾಗಿ ಉಳಿದುಕೊಂಡಿದ್ದಾರೆ. ಇದರ ಜೊತೆಗೆ, ರಾಜಸ್ಥಾನದ ಮತ್ತೋರ್ವ ಉದಯೋನ್ಮುಖ ವೇಗಿ ಗಣೇಶ್ ಸುತಾರ್ ಕೂಡ ಹರಿಯಾಣ ತಂಡದ ಪರ ಆಡಲು ನಿರ್ಧರಿಸಿದ್ದು, ಆರ್ಸಿಎಯಿಂದ ಎನ್ಒಸಿ ಪಡೆದಿದ್ದಾರೆ. ಈ ಇಬ್ಬರು ಪ್ರತಿಭಾವಂತ ವೇಗಿಗಳ ನಿರ್ಗಮನ ರಾಜಸ್ಥಾನ ಕ್ರಿಕೆಟ್ ತಂಡಕ್ಕೆ ಬಹುದೊಡ್ಡ ಹೊಡೆತ ನೀಡಿದೆ.
ಇದನ್ನೂ ಓದಿ : ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕಾಲೆಳೆದ ಜಸ್ಪ್ರೀತ್ ಬುಮ್ರಾ : ವಿಡಿಯೋ ವೈರಲ್



















