ಉಡುಪಿ : 29 ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿಗಳ ಬದುಕಿನಲ್ಲಿ ಶಿಸ್ತು, ಸಂಯಮ, ಆರೋಗ್ಯ ಮತ್ತು ಸಾಧನೆಯ ಮೌಲ್ಯಗಳನ್ನು ಬಿತ್ತಿದ ಬೈಂದೂರಿನ ನಾವುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ದೈಹಿಕ ಶಿಕ್ಷಣ ಉಪನ್ಯಾಸಕ ಜೀವನ್ ಕುಮಾರ್ ಶೆಟ್ಟಿ ಅವರಿಗೆ ಅದ್ದೂರಿ ಗೌರವಪೂರ್ವಕ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಮಂಗಳೂರು ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯೂ ಆಗಿರುವ ಜೀವನ್ ಕುಮಾರ್ ಶೆಟ್ಟಿ ಅವರಿಗೆ ತಮ್ಮ ನಿಸ್ವಾರ್ಥ ಸೇವೆ, ಸರಳ ವ್ಯಕ್ತಿತ್ವ ಮತ್ತು ಕ್ರೀಡಾ ಕ್ಷೇತ್ರಕ್ಕೆ ನೀಡಿದ ಅಮೋಘ ಕೊಡುಗೆಯಿಂದ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದ ಗುರುಗಳಿಗೆ ಅಪಾರ ಗೌರವದೊಂದಿಗೆ ಬೀಳ್ಕೊಡುಗೆ ನೀಡಲಾಯಿತು.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹರ್ಕೂರು ಗ್ರಾಮದವರಾದ ಜೀವನ್ ಕುಮಾರ್ ಶೆಟ್ಟಿ, 08-03-1997ರಂದು ನಾವುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರಾಗಿ ಸೇವೆ ಆರಂಭಿಸಿದ್ದರು.

ಕಳೆದ 29 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳ ಬದುಕಿನಲ್ಲಿ ಶಿಸ್ತು, ಆರೋಗ್ಯ, ಕ್ರೀಡಾ ಮನೋಭಾವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ ಇವರು, ಸೇವೆಗೆ ಸೇರಿದ ಮೊದಲ ವರ್ಷದಲ್ಲೇ ಕುಂದಾಪುರ ತಾಲೂಕು ಮಟ್ಟದ ದಸರಾ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾಲೇಜು ತಂಡವನ್ನು ಪ್ರಥಮ ಸ್ಥಾನಕ್ಕೆ ಮುನ್ನಡೆಸಿದ್ದರು. ಅಷ್ಟೇ ಅಲ್ಲದೆ ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಸ್ಪರ್ಧೆಗೆ ತಂಡವನ್ನು ಆಯ್ಕೆಯಾಗುವಂತೆ ಮಾಡಿದ್ದರು. ನಂತರ ಸುಮಾರು 20 ಬಾರಿ ತಾಲೂಕು ಮಟ್ಟದ ವಾಲಿಬಾಲ್ ಚಾಂಪಿಯನ್ಶಿಪ್ ಗೆಲ್ಲಿಸಿ ಜಿಲ್ಲಾಮಟ್ಟಕ್ಕೆ ತಂಡವನ್ನು ಮುನ್ನಡೆಸಿದ್ದಾರೆ.

ಜೀವನ್ ಕುಮಾರ್ ಶೆಟ್ಟಿ ಅವರ ತರಬೇತಿಯಲ್ಲಿ ಕಾಲೇಜಿನ ವಾಲಿಬಾಲ್ ತಂಡ ಏಳು ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೂ ಅರ್ಹತೆ ಗಳಿಸಿರುವುದು ಕಾಲೇಜಿನ ಹೆಮ್ಮೆಯ ಸಾಧನೆಯಾಗಿದೆ.

ಜೀವನ್ ಕುಮಾರ್ ಶೆಟ್ಟಿ ಕ್ರೀಡಾ ತರಬೇತಿಗೆ ಮಾತ್ರ ಸೀಮಿತವಾಗದೆ, ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನೆರವು ನೀಡಿದ ಅವರು, ಹಳೆ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಚಂದ್ರೇಶ್ ಶೆಟ್ಟಿ ಹಾಗೂ ಇಲಿಯಾಸ್ ಅವರ ನೇತೃತ್ವದಲ್ಲಿ ‘ಜೀವನ್ ಫ್ರೆಂಡ್ಸ್’ ವಾಲಿಬಾಲ್ ತಂಡ ಹುಟ್ಟಿಕೊಳ್ಳಲು ಪ್ರಮುಖ ಕಾರಣರಾಗಿದ್ದಾರೆ. ತಮ್ಮ ಸ್ವಂತ ವೆಚ್ಚದಲ್ಲಿಯೂ ಹಲವು ಪ್ರತಿಭಾವಂತ ಆಟಗಾರರಿಗೆ ನೆರವು ನೀಡಿ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದ್ದಾರೆ.

ಜಾತಿ-ಮತ ಭೇದವಿಲ್ಲದೆ ಸರ್ವಧರ್ಮ ಸಮನ್ವಯದ ಮನೋಭಾವದಿಂದ ಸೇವೆ ಸಲ್ಲಿಸಿದ ಜೀವನ್ ಕುಮಾರ್ ಶೆಟ್ಟಿ ಅವರು, ಹಲವು ಬಾರಿ ಬಡ್ತಿ ಅವಕಾಶ ಬಂದಿದ್ದರೂ ಈ ಭಾಗದ ಜನರ ಮೇಲಿನ ಪ್ರೀತಿ ಹಾಗೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ಅದನ್ನು ತಿರಸ್ಕರಿಸಿ ನಾವುಂದದಲ್ಲೇ ಸೇವೆ ಮುಂದುವರಿಸಿ ಜನಮನ್ನಣೆ ಗಳಿಸಿದ್ದಾರೆ. ಅವರ ಸರಳತೆ ಹಾಗೂ ನಿಸ್ವಾರ್ಥ ಸೇವೆಯನ್ನು ಗುರುತಿಸಿ ‘ಜೀವನ ಯಾನ’ ಪ್ರಶಸ್ತಿಯೂ ಲಭಿಸಿದೆ. ರಾಷ್ಟ್ರೀಯ ತರಬೇತುದಾರರಾಗಿರುವ ಅವರಿಗೆ ನಾವುಂದದ ಸಮಸ್ತ ಜನತೆ ಸಂಕೇತಾತ್ಮಕವಾಗಿ ‘ದ್ರೋಣಾಚಾರ್ಯ ಪ್ರಶಸ್ತಿ’ ನೀಡಿ ಗೌರವಿಸಿದೆ.

ಶ್ರೀಮತಿ ರತ್ನಾವತಿ ಶೆಟ್ಟಿ ಮತ್ತು ಶ್ರೀ ಶಂಕರ್ ಶೆಟ್ಟಿ ದಂಪತಿಯ ಪುತ್ರರಾದ ಜೀವನ್ ಕುಮಾರ್ ಶೆಟ್ಟಿ ಅವರು 20-05-1998ರಂದು ಸುಜಾತಾ ಶೆಟ್ಟಿಯವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಪುತ್ರ ಹೃತಿಕ್ ಅವರೊಂದಿಗೆ ಸುಖ ಜೀವನ ನಡೆಸುತ್ತಿದ್ದಾರೆ.

ಬೀಳ್ಕೊಡುಗೆ ಸಮಾರಂಭದ ಬಳಿಕ ಮಾತನಾಡಿದ ಜೀವನ್ ಕುಮಾರ್ ಶೆಟ್ಟಿ, ತಮ್ಮ ‘ಜೀವನಯಾನ’ ಕಾರ್ಯಕ್ರಮಕ್ಕೆ ಆಗಮಿಸಿ ಅಭಿನಂದನಾ ನುಡಿಗಳನ್ನಾಡಿದ ಎಲ್ಲಾ ಗಣ್ಯರು, ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಮಾಜಿ ಮತ್ತು ಹಾಲಿ ವಾಲಿಬಾಲ್ ಆಟಗಾರರು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳು, ಹಿತೈಷಿಗಳು, ಸ್ನೇಹಿತರು, ಅಭಿಮಾನಿಗಳು, ಬಂಧು-ಬಳಗ ಹಾಗೂ ದೇಶ-ವಿದೇಶಗಳಿಂದ ಶುಭಾಶಯ ಕೋರಿದ ಎಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

ಇದನ್ನೂ ಓದಿ : ಸಸ್ಪೆನ್ಸ್ ಹಬ್ಬದೂಟ ಹಾಕುತ್ತಾ ‘ಅಪರಾಧಿ ನಾನಲ್ಲ’..?



















