ಭೋಪಾಲ್ : ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊಸ ಮಾದರಿಯ ತಂತ್ರಜ್ಞಾನ ಆಧಾರಿತ ಸುಲಿಗೆ ಜಾಲವನ್ನು ಸೃಷ್ಟಿಸಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಸರ್ಕಾರಿ ಪೋರ್ಟಲ್ಗಳಿಂದ ಆರಂಭವಾಗುವ ಇವರ ಕಾರ್ಯಾಚರಣೆ ಕೊನೆಗೆ ಗುಂಡಿನ ದಾಳಿಯಲ್ಲಿ ಅಂತ್ಯಗೊಳ್ಳುತ್ತಿದೆ ಎಂಬ ಆಘಾತಕಾರಿ ಮಾಹಿತಿಯೂ ಹೊರಬಿದ್ದಿದೆ.
ಈಗ ಬೆದರಿಕೆಗಿಂತ ಹೆಚ್ಚಾಗಿ ದತ್ತಾಂಶವೇ (ಡೇಟಾ) ಇವರ ಪ್ರಮುಖ ಅಸ್ತ್ರವಾಗಿದೆ. ಜಿಎಸ್ಟಿ ಮತ್ತು ರೇರಾ (RERA) ಪೋರ್ಟಲ್ಗಳಿಂದ ಹಿಡಿದು ಸಿಗ್ನಲ್ನಂತಹ ಎನ್ಕ್ರಿಪ್ಟ್ ಆದ ಆ್ಯಪ್ಗಳ ಮೂಲಕ ಈ ಸಿಂಡಿಕೇಟ್ ಕಾರ್ಯಾಚರಣೆ ನಡೆಸುತ್ತಿದ್ದು, ಭಾರತದಲ್ಲಿ ಸಂಘಟಿತ ಅಪರಾಧಗಳು ಕಾರ್ಯನಿರ್ವಹಿಸುವ ರೀತಿಯನ್ನೇ ಇದು ಬದಲಾಯಿಸಿದೆ.
ಈ ವ್ಯವಸ್ಥಿತ ಜಾಲಕ್ಕೆ ಉದ್ಯಮಿಗಳೇ ಗುರಿ
ಮಧ್ಯಪ್ರದೇಶದಲ್ಲಿ ಸದ್ಯಕ್ಕೆ ಈ ಜಾಲ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಉದ್ಯಮಿಗಳನ್ನು ವ್ಯವಸ್ಥಿತವಾಗಿ ಗುರಿಯಾಗಿಸಿ 5 ಕೋಟಿಯಿಂದ 15 ಕೋಟಿ ರೂ.ಳವರೆಗೆ ಸುಲಿಗೆ ಮಾಡಲಾಗುತ್ತಿದೆ. ಇದು ಕೇವಲ ಯಾದೃಚ್ಛಿಕ ಅಪರಾಧವಲ್ಲ, ಬದಲಾಗಿ ಗುಪ್ತಚರ ಮಾಹಿತಿ ಆಧರಿತ ವ್ಯವಸ್ಥಿತ ಕಾರ್ಯಾಚರಣೆಯಾಗಿದೆ.
ಮೊದಲಿಗೆ ಆನ್ಲೈನ್ ಮೂಲಕ ದತ್ತಾಂಶ ಕಲೆಹಾಕಿ, ನಂತರ ಗುರಿಯನ್ನು ನಿಗದಿಪಡಿಸಿ ಬೆದರಿಕೆ ಹಾಕಲಾಗುತ್ತದೆ. ಬೇಡಿಕೆ ಈಡೇರದಿದ್ದರೆ ಗುಂಡಿನ ದಾಳಿ ನಡೆಸಲಾಗುತ್ತದೆ. ಖರಗೋನ್ನ ಹತ್ತಿ ವ್ಯಾಪಾರಿ ದಿಲೀಪ್ ರಾಥೋರ್ ಅವರಿಂದ 10 ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣದ ಕೇಂದ್ರ ಬಿಂದುವಾಗಿ ಉಜ್ಜಯಿನಿಯ ರಾಜಪಾಲ್ ಸಿಂಗ್ ಚಂದ್ರಾವತ್ ಎಂಬಾತ ಹೊರಹೊಮ್ಮಿದ್ದಾನೆ. ಉದ್ಯಮಿಯಾಗುವ ಕನಸು ಕಂಡಿದ್ದ ಈತನಿಗೆ ಬಂಡವಾಳದ ಕೊರತೆಯಿದ್ದ ಕಾರಣ, ಸುಲಿಗೆಯನ್ನೇ ಶಾರ್ಟ್ ಕಟ್ ಆಗಿ ಬಳಸಿಕೊಂಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಎಸ್ಟಿ ಮಾಹಿತಿ ಬಳಕೆ, ಡಿಜಿಟಲ್ ಬೆದರಿಕೆ
ಈ ಜಾಲ ಕೇವಲ ಮಾಲ್ವಾ ಭಾಗಕ್ಕೆ ಸೀಮಿತವಾಗಿಲ್ಲ. ಇಂದೋರ್, ಭೋಪಾಲ್, ಅಶೋಕನಗರ, ಮೌ ಸೇರಿದಂತೆ ಮುಂಬೈ ಮತ್ತು ಗುಜರಾತ್ ಜಾಲದೊಂದಿಗೆ ಸಂಪರ್ಕ ಹೊಂದಿರುವ ಉದ್ಯಮಿಗಳು ಕೂಡ ಇವರ ರೇಡಾರ್ನಲ್ಲಿದ್ದಾರೆ. ಇಂದೋರ್ನ ಪ್ರಮುಖ ಕಲ್ಲಿದ್ದಲು ವ್ಯಾಪಾರಿಯೂ ಇವರ ಪಟ್ಟಿಯಲ್ಲಿದ್ದರು. ಅಪ್ರಾಪ್ತರು, ಶಾಲೆಯಿಂದ ಹೊರಗುಳಿದವರು ಮತ್ತು ಮೊದಲ ಬಾರಿಗೆ ಅಪರಾಧ ಎಸಗುವವರನ್ನು ಬಳಸಿಕೊಂಡು ಜಿಎಸ್ಟಿ ಮತ್ತು ರೇರಾ ಪೋರ್ಟಲ್ಗಳಲ್ಲಿರುವ ಸಾರ್ವಜನಿಕ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ಉದ್ಯಮದ ವಹಿವಾಟು, ಯೋಜನೆಗಳ ವಿವರ, ಆರ್ಥಿಕ ಸ್ಥಿತಿಗತಿ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನೂ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಗುರಿಯಾದ ವ್ಯಕ್ತಿಯ ಕುಟುಂಬ ಮತ್ತು ಹಣಕಾಸಿನ ಸಂಪೂರ್ಣ ಮಾಹಿತಿ ಕಲೆಹಾಕಿ ವಾಟ್ಸ್ಆ್ಯಪ್ ಹಾಗೂ ಸಿಗ್ನಲ್ ಆ್ಯಪ್ಗಳ ಮೂಲಕ ಕರಾರುವಕ್ಕಾದ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಇವುಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೂ ದೊಡ್ಡ ಸವಾಲಾಗಿದೆ.
ಜಾಗತಿಕ ಸಂಪರ್ಕ
ರಾಜಪಾಲ್ ಖಾತೆಗೆ ಅಮೆರಿಕದಿಂದ ಹಣ ಹರಿದುಬಂದಿರುವ ಡಿಜಿಟಲ್ ಪುರಾವೆಗಳು ಲಭ್ಯವಾಗಿದ್ದು, ಉತ್ತರ ಅಮೆರಿಕದಿಂದ ಕಾರ್ಯಾಚರಣೆ ನಡೆಸುತ್ತಿರುವ ಹ್ಯಾರಿ ಬಾಕ್ಸರ್ (ಹರಿ ಚಂದ್ ಜಾಟ್) ಪಾತ್ರದ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಮೊರೆನಾದಲ್ಲಿ ಬಂಧಿತನಾದ ಪ್ರದೀಪ್ ಶುಕ್ಲಾ, ವಿದೇಶಿ ಹ್ಯಾಂಡ್ಲರ್ಗಳು ಮತ್ತು ಸ್ಥಳೀಯ ಜಾಲದ ನಡುವಿನ ಪ್ರಮುಖ ಕೊಂಡಿಯಾಗಿದ್ದ. ಈ ಕುರಿತು ಮಾಹಿತಿ ನೀಡಿರುವ ಎಸ್ಐಟಿ ಮುಖ್ಯಸ್ಥ ಹಾಗೂ ಡಿಐಜಿ ರಾಹುಲ್ ಲೋಧಾ, ಪ್ರದೀಪ್ ಶುಕ್ಲಾ ಹ್ಯಾರಿ ಬಾಕ್ಸರ್ನ ನಿಕಟವರ್ತಿಯಾಗಿದ್ದು, ಶೂಟರ್ಗಳನ್ನು ಒದಗಿಸುವ ಜವಾಬ್ದಾರಿ ಹೊತ್ತಿದ್ದ. ಆತನ ಬಂಧನದಿಂದ ಮಹತ್ವದ ಸುಳಿವು ಸಿಕ್ಕಿದೆ ಎಂದು ಹೇಳಿದ್ದಾರೆ. ಅಜ್ಮೀರ್ನ ಹೈ-ಸೆಕ್ಯುರಿಟಿ ಜೈಲಿನಲ್ಲಿರುವ ರಿತಿಕ್ ಬಾಕ್ಸರ್ ಕೂಡ ಜೈಲಿನಿಂದಲೇ ಕಾರ್ಯಾಚರಣೆ ನಿರ್ವಹಿಸುತ್ತಿರುವ ಆರೋಪವಿದೆ.
ಇನ್ಸ್ಟಾಗ್ರಾಮ್ ಮೂಲಕ ಯುವಕರ ನೇಮಕ
ಈ ಅಪರಾಧ ಜಾಲದ ಅತ್ಯಂತ ಕೆಳಹಂತದಲ್ಲಿ ಅಪ್ರಾಪ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ಮೂಲಕ ಯುವಕರನ್ನು ಸೆಳೆದು, ಐಷಾರಾಮಿ ಜೀವನದ ಆಮಿಷವೊಡ್ಡಿ ಗ್ಯಾಂಗ್ಗೆ ಸೇರಿಸಿಕೊಳ್ಳಲಾಗುತ್ತಿದೆ. ಅಶೋಕನಗರದಲ್ಲಿ ಪೆಟ್ರೋಲ್ ಬಾಂಬ್ ದಾಳಿ ನಡೆಸುವ ಮುನ್ನ ಬಂಧಿತನಾದ 19 ವರ್ಷದ ಮನೀಶ್ ಜಾಂಗಿಡ್ ಎಂಬಾತನೇ ಇದಕ್ಕೆ ಸಾಕ್ಷಿ. ವಿಡಿಯೋ ಕರೆಗಳ ಮೂಲಕ ಪೆಟ್ರೋಲ್ ಬಾಂಬ್ ತಯಾರಿಸುವ ತರಬೇತಿಯನ್ನೂ ಈತನಿಗೆ ನೀಡಲಾಗಿತ್ತು.
ಖರಗೋನ್ನಲ್ಲಿ ಈ ಷಡ್ಯಂತ್ರ ನೇರ ಹಿಂಸಾಚಾರಕ್ಕೆ ತಿರುಗಿತ್ತು. ಉದ್ಯಮಿ ದಿಲೀಪ್ ರಾಥೋರ್ ಮನೆ ಮೇಲೆ ಮಾರ್ಚ್ 16 ರಂದು ಗುಂಡಿನ ದಾಳಿ ನಡೆಸಿ, ಮಾರನೇ ದಿನವೇ ಅದರ ವಿಡಿಯೋ ಕಳುಹಿಸಿ 10 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿತ್ತು. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಈವರೆಗೆ 24ಕ್ಕೂ ಹೆಚ್ಚು ಬಂಧನಗಳಾಗಿವೆ. ಆದರೂ ಈ ಜಾಲದ ವ್ಯಾಪ್ತಿ ಆತಂಕಕಾರಿಯಾಗಿದೆ. ಇದು ಕೇವಲ ಕಾನೂನು ಸುವ್ಯವಸ್ಥೆಯ ಸಮಸ್ಯೆಯಾಗಿರದೆ, ಸಂಘಟಿತ ಅಪರಾಧ, ಡಿಜಿಟಲ್ ತಂತ್ರಜ್ಞಾನ ಮತ್ತು ಅಂತಾರಾಷ್ಟ್ರೀಯ ಸಮನ್ವಯತೆಯ ಅಪಾಯಕಾರಿ ಸಮ್ಮಿಲನವಾಗಿದೆ. ಭಾರತದ ಸುಲಿಗೆಕೋರರ ಜಾಲವು ಈಗ ಸಂಪೂರ್ಣ ಡಿಜಿಟಲೀಕರಣಗೊಂಡಿದ್ದು, ಇದರ ಆಳವನ್ನು ಅರಿಯಲು ತನಿಖಾ ಸಂಸ್ಥೆಗಳು ಈಗಷ್ಟೇ ಹೆಜ್ಜೆ ಇಡುತ್ತಿವೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ KSRTC ಬಸ್.. ತಪ್ಪಿದ ಭಾರೀ ಅನಾಹುತ!



















