ಕರಾಚಿ : ಪಾಕಿಸ್ತಾನ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ವಿಕೆಟ್ ಕೀಪರ್ ಬ್ಯಾಟರ್ ಸರ್ಫರಾಜ್ ಅಹ್ಮದ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಇಂದು ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. 2017ರಲ್ಲಿ ಭಾರತದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ್ದ ಸರ್ಫರಾಜ್, ತಮ್ಮ 19 ವರ್ಷಗಳ ಸುದೀರ್ಘ ಕ್ರಿಕೆಟ್ ಪ್ರಯಾಣಕ್ಕೆ ಅಂತಿಮ ತೆರೆ ಎಳೆದಿದ್ದಾರೆ.
ಪ್ರಸ್ತುತ ಪಾಕಿಸ್ತಾನ ಅಂಡರ್-19 ತಂಡದ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಯುವ ಪ್ರತಿಭೆಗಳನ್ನು ರೂಪಿಸುವತ್ತ ಗಮನಹರಿಸಲು ಈ ನಿರ್ಧಾರ ಕೈಗೊಂಡಿದ್ದಾರೆ. ಸರ್ಫರಾಜ್ ಅಹ್ಮದ್ ಪಾಕಿಸ್ತಾನ ಕ್ರಿಕೆಟ್ನಲ್ಲಿ ಅಪರೂಪದ ದಾಖಲೆ ಹೊಂದಿದ್ದಾರೆ. ಜೂನಿಯರ್ ಮತ್ತು ಸೀನಿಯರ್ ಎರಡೂ ಹಂತಗಳಲ್ಲಿ ಐಸಿಸಿ ಟ್ರೋಫಿ ಗೆದ್ದ ಏಕೈಕ ಪಾಕಿಸ್ತಾನಿ ನಾಯಕ ಎಂಬ ಹೆಗ್ಗಳಿಕೆ ಇವರದ್ದು. 2006ರಲ್ಲಿ ಶ್ರೀಲಂಕಾದಲ್ಲಿ ನಡೆದ ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ಭಾರತವನ್ನು ಸೋಲಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಸರ್ಫರಾಜ್, 2017ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಸಾಂಪ್ರದಾಯಿಕ ಎದುರಾಳಿ ಭಾರತವನ್ನೇ ಮಣಿಸಿ ಐತಿಹಾಸಿಕ ಸಾಧನೆ ಮಾಡಿದ್ದರು. ಇವರ ನಾಯಕತ್ವದಲ್ಲಿ ಪಾಕಿಸ್ತಾನ ಟಿ20 ಶ್ರೇಯಾಂಕದಲ್ಲಿ ವಿಶ್ವದ ನಂ.1 ತಂಡವಾಗಿ ಹೊರಹೊಮ್ಮಿತ್ತು.
ಅಂಕಿಅಂಶಗಳ ಮೇಲೆ ಒಂದು ನೋಟ
38 ವರ್ಷದ ಸರ್ಫರಾಜ್ ಪಾಕಿಸ್ತಾನ ಪರ 54 ಟೆಸ್ಟ್, 117 ಏಕದಿನ ಮತ್ತು 61 ಟಿ20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆ 6,164 ಅಂತರಾಷ್ಟ್ರೀಯ ರನ್ ಗಳಿಸಿರುವ ಇವರು, 6 ಶತಕ ಮತ್ತು 35 ಅರ್ಧಶತಕಗಳನ್ನು ಸಿಡಿಸಿದ್ದಾರೆ. ವಿಕೆಟ್ ಹಿಂಭಾಗದಲ್ಲಿ 315 ಕ್ಯಾಚ್ ಹಾಗೂ 56 ಸ್ಟಂಪಿಂಗ್ಗಳನ್ನು ಮಾಡುವ ಮೂಲಕ ಚುರುಕಿನ ವಿಕೆಟ್ ಕೀಪರ್ ಎನಿಸಿಕೊಂಡಿದ್ದರು. ವಿಶೇಷವೆಂದರೆ, 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ 10 ಕ್ಯಾಚ್ ಪಡೆಯುವ ಮೂಲಕ ಪಾಕಿಸ್ತಾನದ ವಿಕೆಟ್ ಕೀಪರ್ ಆಗಿ ದಾಖಲೆ ಬರೆದಿದ್ದರು. ಲಾರ್ಡ್ಸ್ ಮೈದಾನದಲ್ಲಿ ಏಕದಿನ ಶತಕ ಸಿಡಿಸಿದ ಪಾಕಿಸ್ತಾನದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆಯೂ ಇವರ ಹೆಸರಿನಲ್ಲಿದೆ.
ಕನಸು ನನಸಾದ ಕ್ಷಣ”: ಭಾವುಕರಾದ ಮಾಜಿ ನಾಯಕ
ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ ಸರ್ಫರಾಜ್, “ಪಾಕಿಸ್ತಾನವನ್ನು ಪ್ರತಿನಿಧಿಸುವುದು ನನ್ನ ಜೀವನದ ದೊಡ್ಡ ಗೌರವ. 2006ರ ಅಂಡರ್-19 ಗೆಲುವಿನಿಂದ ಹಿಡಿದು 2017ರ ಚಾಂಪಿಯನ್ಸ್ ಟ್ರೋಫಿಯವರೆಗೆ ಪ್ರತಿಯೊಂದು ಕ್ಷಣವೂ ವಿಶೇಷವಾದುದು. ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ದೇಶವನ್ನು ಮುನ್ನಡೆಸಿದ್ದು ನನ್ನ ಕನಸು ನನಸಾದಂತಾಗಿದೆ” ಎಂದು ಭಾವುಕರಾಗಿ ನುಡಿದರು. ಅಲ್ಲದೆ, ತಮ್ಮ ನಾಯಕತ್ವದ ಅವಧಿಯಲ್ಲಿ ಬಾಬರ್ ಅಜಮ್, ಶಾಹೀನ್ ಅಫ್ರಿದಿ ಮತ್ತು ಹಸನ್ ಅಲಿ ಅಂತಹ ಆಟಗಾರರು ಬೆಳೆದು ನಿಂತಿದ್ದನ್ನು ನೋಡುವುದೇ ತಮಗೆ ಅತ್ಯಂತ ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದರು. 2023ರ ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಪಂದ್ಯವಾಡಿದ್ದ ಸರ್ಫರಾಜ್, ಈಗ ಸಂಪೂರ್ಣವಾಗಿ ಕೋಚಿಂಗ್ ವೃತ್ತಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಕಂಡ ಒಬ್ಬ ದಕ್ಷ ನಾಯಕ ಮತ್ತು ಹೋರಾಟಗಾರನಿಗೆ ಇಡೀ ಕ್ರಿಕೆಟ್ ಲೋಕ ಶುಭಾಶಯಗಳನ್ನು ಕೋರುತ್ತಿದೆ.
ಇದನ್ನೂ ಓದಿ : ಗಂಭೀರ್ ಅವರ 2014ರ IPL ಅಭಿಷೇಕ್ ಶರ್ಮಾ ಕಮ್ಬ್ಯಾಕ್ಗೆ ನೆರವಾದದ್ದು ಹೇಗೆ?



















