ಬೆಂಗಳೂರು : ಪಂಚ ರಾಜ್ಯಗಳ ಚುನಾವಣೆಯ ಅಬ್ಬರ ಮುಗಿದು ತಕ್ಷಣವೇ, ಜನಸಾಮಾನ್ಯರಿಗೆ ಆಡಳಿತಾರೂಢ ಸರ್ಕಾರಗಳು ‘ಬೆಲೆ ಏರಿಕೆ’ಯ ಶಾಕ್ ನೀಡಿರುವುದು ಖಂಡನೀಯ. ಈ ಜನವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರಾದ ರಘು ಜಾಣಗೆರೆ ಅವರು, ದೇಶದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳ ತೀವ್ರ ಅಭಾವ ಹಾಗೂ ದಿಢೀರ್ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮ, ಸಣ್ಣ ಕೈಗಾರಿಕೆಗಳು ಮತ್ತು ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ಸಿಲುಕಿರುವುದನ್ನು ತೀವ್ರವಾಗಿ ಖಂಡಿಸಿದರು.

“ಯುದ್ಧ ಪರಿಸ್ಥಿತಿ ಮತ್ತು ಸರಬರಾಜು ಸಮಸ್ಯೆಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾದರೂ, ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಸುಳ್ಳು ಭರವಸೆ ನೀಡುತ್ತಾ ಜನರನ್ನು ದಾರಿ ತಪ್ಪಿಸಿ, ಈಗ ಏಕಾಎಕಿ ವಾಣಿಜ್ಯ ಗ್ಯಾಸ್ ಸಿಲೆಂಡರ್’ಗಳ ಬೆಲೆ ಏರಿಸಿದ್ದಾರೆ” ಎಂದು ಆರೋಪಿಸಿದರು.
“ಸರ್ಕಾರ ನಿಗದಿಪಡಿಸಿದ ದರದಲ್ಲಿ ಎಲ್ಲಿಯೂ ವಾಣಿಜ್ಯ ಸಿಲಿಂಡರ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೋಟೆಲ್ ಮಾಲೀಕರು ಹಾಗೂ ಸಣ್ಣ ವ್ಯಾಪಾರಸ್ಥರು ಅನಿವಾರ್ಯವಾಗಿ ಕಾಳಸಂತೆಯಲ್ಲಿ ₹3,000 ರಿಂದ ₹5,000 ಹೆಚ್ಚುವರಿಯಾಗಿ ನೀಡಿ ಸಿಲಿಂಡರ್ ಖರೀದಿಸುವಂತಾಗಿದೆ. ಸರ್ಕಾರವೇ ವಾಣಿಜ್ಯ ಸಿಲಿಂಡರ್ ದರವನ್ನು ₹3,154ಕ್ಕೆ ಏರಿಸಿದ್ದು, ಕಾಳಸಂತೆಯಲ್ಲಿ ಅದು ₹6,000 ರಿಂದ ₹8,000ವರೆಗೆ ತಲುಪಿದೆ. ಇದರಿಂದ ಹೋಟೆಲ್ ಉದ್ಯಮ ನಡೆಸುವುದು ಅಸಾಧ್ಯವಾಗಿ, ಅನೇಕ ಸಣ್ಣ ಹೋಟೆಲ್ಗಳು ಬೀಗ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು. “ಹೋಟೆಲ್ಗಳು ಮುಚ್ಚುತ್ತಿರುವುದರಿಂದ ಸಾಮಾನ್ಯ ಜನರು ಕಡಿಮೆ ದರದಲ್ಲಿ ತಿಂಡಿ-ಊಟ ಪಡೆಯುವ ಅವಕಾಶ ಕಳೆದುಕೊಳ್ಳುತ್ತಿದ್ದಾರೆ. ಬಡವರು, ಕಾರ್ಮಿಕರು ಮತ್ತು ಪ್ರಯಾಣಿಕರು ಸಹ ದಿನನಿತ್ಯದ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದರು.
“ಸಿಲಿಂಡರ್ ಸಿಗದೇ ಅನೇಕ ಹೋಟೆಲ್ಗಳು ಸೌದೆ ಒಲೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದಿದೆ. ಆದರೆ ಹೊಗೆ ಮತ್ತು ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ಕೆಲಸಗಾರರು ಕೆಲಸ ತೊರೆಯುತ್ತಿದ್ದಾರೆ. ಇದರಿಂದ ಹೋಟೆಲ್ ಉದ್ಯಮ ಮತ್ತಷ್ಟು ಕುಸಿಯುತ್ತಿದೆ, ಹಾಗೆಯೆ ಇದು ಪರಿಸರದ ಮೇಲೆಯೂ ಅಪಾರ ದುಷ್ಪರಿಣಾಮ ಬೀರುತ್ತಿದೆ. ಕಳೆದ ಮೂರು ವರ್ಷಗಳಿಂದ ರಷ್ಯಾದಿಂದ ಅತಿ ಕಡಿಮೆ ಬೆಲೆಗೆ ಕಚ್ಚಾತೈಲವನ್ನು ಅಮದು ಮಾಡಿಕೊಳ್ಳಲಾಗಿದೆ, ಆದರೂ ಕೂಡ ದೇಶದಲ್ಲಿ ಪೆಟ್ರೋಲಿಯಂ ಉತ್ಮನ್ನಗಳ ಬೆಲೆಯನ್ನು ಕಡಿಮೆ ಮಾಡದೆ, ತೈಲೋತ್ಪನ್ನ ಕಂಪನಿಗಳು ಹೇರಳವಾಗಿ ಲಾಭ ಮಾಡಿಕೊಂಡಿವೆ, ಆದರೆ, ಕೇವಲ ಎರಡು ತಿಂಗಳಲ್ಲಿನ ಅಂತರಾಷ್ಟ್ರೀಯ ಬೆಲೆ ಏರಿಕೆಯಿಂದ ನಷ್ಟವಾಗುತ್ತಿದೆ ಎಂದು ಬೆಲೆ ಏರಿಕೆ ಮಾಡಲಾಗುತ್ತಿದೆ. ಭಾರತವು ರಷ್ಯಾದಿಂದ ಎಷ್ಟು ಮತ್ತು ಯಾವ ದರದಲ್ಲಿ ಕಚ್ಚಾತೈಲ ಅಮದು ಮಾಡಿಕೊಂಡಿದೆ, ಅದರಿಂದ ಯಾವ ಯಾವ ಕಂಪನಿಗಳಿಗೆ ಎಷ್ಟು ಲಾಭವಾಗಿದೆ ಎಂಬ ಮಾಹಿತಿಯನ್ನು ಒಕ್ಕೂಟ ಸರ್ಕಾರವು ಬಚ್ಚಿಟ್ಟಿದೆ, ತಕ್ಷಣವೇ ಈ ಮಾಹಿತಿಯನ್ನು ಬಹಿರಂಗಗೊಳಿಸಬೇಕು. ಹಗಲು ದರೋಡೆ ಮಾಡಲೆಂದೆ ಇಂತಹ ಮಾಹಿತಿಗಳನ್ನು ರಾಷ್ಟ್ರೀಯ ಗೋಪ್ಯತೆಯ ವಿಚಾರವೆಂದು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.
ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್ ಅವರು ಮಾತನಾಡಿ, “ಒಕ್ಕೂಟ ಸರ್ಕಾರವು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರವನ್ನು ಗಗನಕ್ಕೇರಿಸುವ ಮೂಲಕ ಸಣ್ಣ ಉದ್ಯಮಗಳ ಬೆನ್ನೆಲುಬನ್ನು ಮುರಿಯುತ್ತಿದೆ ಎಂದು ಆರೋಪಿಸಿದರು. ಗ್ಯಾಸ್ ದರ ಏರಿಕೆಯಿಂದ ರಾಜ್ಯದಾದ್ಯಂತ ಸಣ್ಣ ಮತ್ತು ಮಧ್ಯಮ ಗಾತ್ರದ ಹೋಟೆಲ್ಗಳು ಮುಚ್ಚುವ ಭೀತಿಯಲ್ಲಿವೆ ಎಂದು ಹೇಳಿದರು. ಪ್ರವಾಸಿ ತಾಣಗಳಲ್ಲಿ ಅಡುಗೆ ಅನಿಲದ ಕೊರತೆ ಮತ್ತು ಬೆಲೆ ಏರಿಕೆಯಿಂದಾಗಿ ಹೋಟೆಲ್ಗಳು ಮುಚ್ಚುತ್ತಿರುವುದರಿಂದ ಪ್ರವಾಸಿಗರು ತಿಂಡಿ-ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಎಲ್ಪಿಜಿ ಅವಲಂಬಿತ ಆಟೋ ಮತ್ತು ಟ್ಯಾಕ್ಸಿ ಚಾಲಕರು ಅನಿಲದ ಕೊರತೆ ಹಾಗೂ ದುಬಾರಿ ದರದಿಂದ ಜೀವನೋಪಾಯ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ” ಎಂದು ಹೇಳಿದರು.
“ರಾಜ್ಯದ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳ ಹೆಸರಿನಲ್ಲಿ ಜನರನ್ನು ಮೋಸಗೊಳಿಸಿ, ಇದೀಗ ಹಿಂಬಾಗಿಲಿನಿಂದ ವಿದ್ಯುತ್ ದರ ಏರಿಸಿ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹಾಕುತ್ತಿದೆ, ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 56 ಪೈಸೆ ಹೆಚ್ಚಳ ಮಾಡಿರುವುದು ಮಧ್ಯಮ ವರ್ಗದವರ ಮಾಸಿಕ ಬಜೆಟ್ಗೆ ಗಂಭೀರ ಹೊಡೆತ ನೀಡಿದೆ. ಈಗಾಗಲೇ ವಿದ್ಯುತ್ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ಸಣ್ಣ ಕೈಗಾರಿಕೆಗಳಿಗೆ ಈ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆ ಇನ್ನಷ್ಟು ಏರಿಕೆಯಾಗುತ್ತಿದೆ” ಎಂದು ಆರೋಪಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ್ ಎಸ್. ಅವರು ಮಾತನಾಡಿ “ರಾಜ್ಯದಲ್ಲಿ ವಿದ್ಯುತ್ ದರ ಏರಿಸುವ ಮೂಲಕ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳು ಹಾಗು ಉದ್ಯಮಳ ಆಡಿಪಾಯವನ್ನೆ ಅಲುಗಾಡಿಸಲಾಗುತ್ತಿದೆ. ಪ್ರತಿವರ್ಷ ವಿದ್ಯುತ್ ದರ ಏರಿಕೆಯಿಂದ ವಿದ್ಯುತ್ ಬಹಳ ದುಬಾರಿಯಾಗಿದ್ದು, ಉಚಿತ ವಿದ್ಯುತ್ ನೀಡುತ್ತಿದ್ದೇವೆ, ಆದ್ದರಿಂದ ಈ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ವಿರೋಧಿಸುವುದಿಲ್ಲ ಎಂಬ ಭ್ರಮೆಯಲ್ಲಿರುವ ರಾಜ್ಯ ಸರ್ಕಾರವು, ಇದೇ ಸಾಮಾನ್ಯ ವರ್ಗದ ಜನರು ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳಾಗಿದ್ದು, ಒಂದು ಕಡೆ ಕೊಟ್ಟು ಮತ್ತೊಂದು ಕಡೆಯಿಂದ ಕಿತ್ತುಕೊಳ್ಳುತ್ತಿರುವುದು ಜನರಿಗೆ ತಿಳಿಯುತ್ತಿಲ್ಲ ಎಂದು ಅದು ಭಾವಿಸಿದಂತಿದೆ. ರಾಜ್ಯದಲ್ಲಿನ ಎಸ್ಕಾಂಗಳು, ವಿದ್ಯುತ್ ಪ್ರಸರಣ ನಿಗಮ ಹಾಗೂ ವಿದ್ಯುತ್ ನಿಗಮಗಳಲ್ಲಿನ ಅಪಾರ ಭ್ರಷ್ಟಾಚಾರದಿಂದ ವಿದ್ಯುತ್ ದರ ಏರಿಸಬೇಕಾದ ಪರಿಸ್ಥಿತಿ ಬಂದಿದೆ. ಇವುಗಳು ರಾಜ್ಯದ ಜನರ ಪಾಲಿಗೆ ಬಿಳಿ ಆನೆಗಳಂತಾಗಿದ್ದು, ಇವುಗಳನ್ನು ಸಾಕಲು ಜನರು ವಿದ್ಯುತ್’ಗೆ ಹೆಚ್ಚಿನ ದರ ನೀಡಬೇಕಾದ ಪರಿಸ್ಥಿತಿ ಬಂದಿದೆ.
ಇಂದು ಇಡೀ ದೇಶದಲ್ಲೆ ಅತಿ ಹೆಚ್ಚು ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಅದು ಶೇಕಡ 75 ಮೀರಿದೆ. ಅತಿ ಕಡಿಮೆ ದರದಲ್ಲಿ ಜಲ, ವಾಯು ಹಾಗು ಸೋಲಾರ್ ಮೂಲಗಳಿಂದ ವಿದ್ಯುತ್ ಉತ್ಪಾಧಿಸಲಾಗುತ್ತಿದೆ. ಆದರೆ, ಖಾಸಗಿ ಬಂಡವಾಳಿಗರಿಗೆ ಅದರಲ್ಲೂ ಬೇನಾಮಿಯಾಗಿ ಸೋಲಾರ್ ಹಾಗು ಪವನ ವಿದ್ಯುತ್ ಕ್ಷೇತ್ರದಲ್ಲಿ ಹೂಡಿಕೆ ಮಾಡಿರುವ ರಾಜಕಾರಣಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಜನರಿಗೆ ಮಂಕುಬೂದಿ ಎರಚಿ ಬೆಲೆ ಏರಿಕೆಯನ್ನು ಪ್ರತಿ ವರ್ಷ ಸಂಪ್ರದಾಯದಂತೆ ಮಾಡಲಾಗುತ್ತಿದೆ ಮತ್ತು ಅದು ತೀರ ಅವಶ್ಯಕ ಎನ್ನುವಂತೆ ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ, ಈಗಿರುವ ಅರ್ಧ ಬೆಲೆಯಲ್ಲಿ ವಿದ್ಯುತ್ ನೀಡಬಹುದಾಗಿದೆ. ರಾಜ್ಯ ಸರ್ಕಾರವು ಯಾವ ಯಾವ ಮೂಲಗಳಿಂದ ಮತ್ತು ಕಂಪನಿಗಳಿಂದ ವಿದ್ಯುತ್ ಖರೀದಿ ಮಾಡುತ್ತಿದೆ, ಯಾವ ದರದಲ್ಲಿ ಖರೀದಿ ಮಾಡುತ್ತಿದೆ, ಅವುಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳು ಏನು ಎನ್ನುವ ಮಾಹಿತಿಯನ್ನು ಬಹಿರಂಗಪಡಿಸಬೇಕು. ಈ ವಿಚಾರದಲ್ಲಿ ಜನರನ್ನು ಸಂಪೂರ್ಣವಾಗಿ ಕತ್ತಲೆಯಲ್ಲಿ ಇಟ್ಟು ಅವರನ್ನು ಮೂರ್ಖರನ್ನಾಗಿಸಿ, ಲೂಟಿ ಮಾಡಲಾಗುತ್ತಿದೆ. ಇಷ್ಟು ಪ್ರಮಾಣದಲ್ಲಿ ಹಣ ನೀಡಿದರೂ ಕೂಡ ಗುಣಮಟ್ಟದ ವಿದ್ಯುತ್ ಲಭ್ಯವಿಲ್ಲ, ಪದೇ ಪದೇ ವಿದ್ಯುತ್ ಕಡಿತ ಮಾಡಲಾಗುತ್ತಿದೆ, ಗ್ರಾಮೀಣ ಭಾಗದಲ್ಲಿ ಇದು ಬಹಳ ಹೆಚ್ಚಾಗಿದ್ದು, ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಚುನಾವಣೆ ಮುಗಿಯುವವರೆಗೆ ಬೆಲೆಗಳನ್ನು ಏರಿಸದೆ, ಮತದಾನ ಮುಗಿದ ತಕ್ಷಣವೇ ಬೆಲೆ ಏರಿಸುವುದು ರಾಜಕೀಯ ಪಕ್ಷಗಳ ಯೋಜಿತ ತಂತ್ರಗಾರಿಕೆಯಾಗಿದೆ ಇದು ನಿಲ್ಲಬೇಕು ಮತ್ತು ತಕ್ಷಣವೇ ಗ್ಯಾಸ್ ಹಾಗೂ ವಿದ್ಯುತ್ ಬೆಲೆ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
ಇನ್ನು, ‘ಅಚ್ಛೇ ದಿನ್’ ಭರವಸೆ ನೀಡಿದ್ದ ಬಿಜೆಪಿ ಸರ್ಕಾರ, ಯುದ್ಧದ ನೆಪವೊಡ್ಡಿ ಸಾಮಾನ್ಯ ಜನರ ಮೇಲೆ ಆರ್ಥಿಕ ಭಾರ ಹಾಕುತ್ತಿದೆ. ಮೂರು ವರ್ಷಗಳಾದರೂ ಕಾಂಗ್ರೆಸ್ ಸರ್ಕಾರ ಯುವಕರಿಗೆ ಸಮರ್ಪಕ ಉದ್ಯೋಗ ಒದಗಿಸುವಲ್ಲಿ ವಿಫಲವಾಗಿದೆ. ನಿರುದ್ಯೋಗ ಮತ್ತು ಜೀವನ ವೆಚ್ಚದ ಏರಿಕೆ – ಇವೆರಡರ ನಡುವೆ ಜನಸಾಮಾನ್ಯರು ಹೈರಾಣಾಗಿದ್ದಾರೆ. ತಕ್ಷಣವೇ ಬೆಲೆ ಏರಿಕೆ ಆದೇಶಗಳನ್ನು ಹಿಂಪಡೆಯಬೇಕೆಂದು ಕೆಆರ್ಎಸ್ ಪಕ್ಷ ಆಗ್ರಹಿಸಿದೆ.
ರಾಜ್ಯ ಕಾರ್ಯಾಧ್ಯಕ್ಷರಾದ ರಘು ಜಾಣಗೆರೆ, ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್, ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ ಎಸ್, ಸಂಘಟನಾ ಕಾರ್ಯದರ್ಶಿಗಳಾದ ಆರೋಗ್ಯ ಸ್ವಾಮಿ,ರಘು ನಂದನ, ಆನಂದ್, ಅಕ್ಷಯ್ ಬೆಂಗಳೂರು ಪಶ್ಚಿಮ ಜಿಲ್ಲಾಧ್ಯಕ್ಷರಾದ ದೇವರಾಜ ಆರ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಧನಂಜಯ ಎಮ್, ಪದಾಧಿಕಾರಿಗಳಾದ ರಾಮ ರೆಡ್ಡಿ,ಲೋಕೇಶ್, ಶ್ರೀನಿವಾಸನ್, ವೆಂಕಟೇಶ್, ಮೇರಿ, ಅಂಜಲಿ, ಸತೀಶ್, ಪುಷ್ಪ, ಆಶಾ, ಸದಾಮ್, ಮೊಹಮ್ಮದ್ ಆಶಾಮ್, ಜಯಪ್ಪ ರೆಡ್ಡಿ ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಕಪೂರ್ ಕುಟುಂಬದ ಆಸ್ತಿ ಕಲಹ ; ಸಂಧಾನಕಾರರಾಗಿ ಮಾಜಿ ಮುಖ್ಯ ನ್ಯಾ. ಡಿ.ವೈ ಚಂದ್ರಚೂಡ್ ನೇಮಕ!


















