ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರ ದಾಳಿಗೆ(Pahalgam Attack) ಪ್ರತಿಯಾಗಿ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿರುವ ಭಾರತದ ಕ್ರಮಕ್ಕೆ ಪಾಕಿಸ್ತಾನ ಕೆರಳಿ ಕೆಂಡವಾಗಿದೆ. ಶನಿವಾರ ಈ ಕುರಿತು ಉದ್ಧಟತನದಿಂದ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲಾವಲ್ ಭುಟ್ಟೋ ಜರ್ದಾರಿ, “ಪಾಕಿಸ್ತಾನವೇ ಸಿಂಧೂ ನಾಗರಿಕತೆಯ ನಿಜವಾದ ಮಾಲಿಕ. ಅದರ ಮೂಲಕ ಒಂದೋ ನಮ್ಮ ನೀರು ಅಥವಾ ಅವರ ರಕ್ತ ಹರಿಯುತ್ತದೆ” ಎಂದು ಭಾರತಕ್ಕೆ ಎಚ್ಚರಿಕೆ ನೀಡುವ ಧಾಟಿಯಲ್ಲಿ ಹೇಳಿದ್ದಾರೆ.
“ಸಿಂಧೂ ನಮ್ಮದು ಮತ್ತು ಅದು ನಮ್ಮದಾಗಿಯೇ ಉಳಿಯಲಿದೆ. ಒಂದೋ ನಮ್ಮ ನೀರು ಅದರ ಮೂಲಕ ಹರಿಯುತ್ತದೆ ಅಥವಾ ಅವರ ರಕ್ತ ಹರಿಯುತ್ತದೆ” ಎಂದು ಭುಟ್ಟೋ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಈ ಮೂಲಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೊತ್ತಿಕೊಂಡಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಹಲವು ವರ್ಷಗಳ ಮಾತುಕತೆಯ ನಂತರ 1960 ರ ಸೆಪ್ಟೆಂಬರಲ್ಲಿ ಸಹಿ ಹಾಕಲಾದ ಸಿಂಧೂ ನದಿ ಒಪ್ಪಂದವು ಸಿಂಧೂ ಜಲಾನಯನ ಪ್ರದೇಶದ ಆರು ನದಿಗಳ ನೀರನ್ನು ಭಾರತ ಮತ್ತು ಪಾಕಿಸ್ತಾನದ ನಡುವೆ ಹೇಗೆ ಹಂಚಿಕೆಯಾಗಬೇಕು ಎಂಬುದನ್ನು ನಿಯಂತ್ರಿಸುತ್ತದೆ. ಪಾಕಿಸ್ತಾನದ ಶೇಕಡಾ 80ರಷ್ಟು ಕೃಷಿ ಭೂಮಿಗೆ ಸಿಂಧೂ ನದಿಯ ನೀರೇ ಆಧಾರವಾಗಿದ್ದು, ಭಾರತ ಒಪ್ಪಂದವನ್ನು ಅಮಾನತುಗೊಳಿಸಿರುವುದು ಭವಿಷ್ಯದಲ್ಲಿ ಪಾಕಿಸ್ತಾನದ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರಲಿದೆ.
ಇದೇ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಭುಟ್ಟೋ, ಮೋದಿಯವರ ಯುದ್ಧೋತ್ಸಾಹ ಅಥವಾ ಸಿಂಧೂ ನೀರನ್ನು ಬೇರೆಡೆಗೆ ತಿರುಗಿಸುವ ಅವರ ಪ್ರಯತ್ನವನ್ನು ಪಾಕಿಸ್ತಾನವಾಗಲೀ, ಅಂತಾರಾಷ್ಟ್ರೀಯ ಸಮುದಾಯವಾಗಲೀ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
“ಅವರು (ಮೋದಿ) ಸಾವಿರಾರು ವರ್ಷಗಳಷ್ಟು ಹಳೆಯದಾದ ನಾಗರಿಕತೆಯ ವಾರಸುದಾರರು ಎಂದು ಹೇಳುತ್ತಾರೆ. ಆದರೆ ಆ ನಾಗರಿಕತೆಯ ಮೂಲವಿರುವುದು ಲರ್ಕಾನಾದ ಮೊಹೆಂಜೊದಾರೊದಲ್ಲಿ. ನಾವು ಅದರ ನಿಜವಾದ ಮಾಲಿಕರು ಹಾಗೂ ರಕ್ಷಕರು. ನಾವು ಅದನ್ನು ರಕ್ಷಿಸುತ್ತೇವೆ” ಎಂದು ಭುಟ್ಟೋ ಹೇಳಿದ್ದಾರೆ. ವಾಸ್ತವವಾಗಿ, ಸಿಂಧೂ ಕಣಿವೆ ನಾಗರಿಕತೆಯು ಆಧುನಿಕ ಪಾಕಿಸ್ತಾನ ಮತ್ತು ಪಶ್ಚಿಮ ಭಾರತದ ಹೆಚ್ಚಿನ ಭಾಗಗಳಲ್ಲಿ ಹರಡಿತ್ತು.
ಪಾಕಿಸ್ತಾನದ ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಬಿಲಾವಲ್ ಭುಟ್ಟೋ ಅವರು, ಭಾರತದಲ್ಲಿ 26 ಪ್ರವಾಸಿಗರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನ ಈಗಾಗಲೇ ಖಂಡಿಸಿದೆ. ಆದರೆ ಭಾರತವು ತನ್ನದೇ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ನಮ್ಮ ದೇಶವನ್ನು ದೂಷಿಸುತ್ತಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬಳಿಕ ಈಗ ಪಾಕಿಸ್ತಾನದ ಮತ್ತೊಬ್ಬ ನಾಯಕ ಭುಟ್ಟೋ ಭಾರತದ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಬಿಹಾರದ ಕಾರ್ಯಕ್ರಮಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿ, ಪ್ರತಿ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು “ಗುರುತಿಸಿ, ಪತ್ತೆಹಚ್ಚಿ, ಶಿಕ್ಷಿಸುವುದಾಗಿ” ಪ್ರತಿಜ್ಞೆ ಮಾಡಿದ್ದರು.



















