ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಾತ್ಕೋಳಿ ಗ್ರಾಮದಲ್ಲಿ ನಡೆದಿದ್ದ ದಂಪತಿಗಳ ಡಬಲ್ ಮರ್ಡರ್ ಪ್ರಕರಣದಲ್ಲಿದ್ದ ಆರೋಪಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಆರೋಪಿಯಾದ ಗೋವಿಂದಪ್ಪನಿಗೆ ಮರಣದಂಡನೆ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಈ ಘಟನೆ 30 ಆಗಸ್ಟ್ 2019ರಂದು ಎನ್.ಆರ್.ಪುರ ತಾಲೂಕಿನ ಸಾತ್ಕೋಳಿ ಗ್ರಾಮದಲ್ಲಿ ನಡೆದಿತ್ತು. ಮನೆಯಲ್ಲೇ ಮಲಗಿದ್ದ ದಂಪತಿಗಳಾದ 53 ವರ್ಷದ ಧರ್ಮಯ್ಯ ಮತ್ತು 33 ವರ್ಷದ ಭಾರತಿ ಮೇಲೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಾತ್ಕೋಳಿ ಗ್ರಾಮದ ಗೋವಿಂದಪ್ಪನೇ ಹತ್ಯೆ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಭಾರತಿ ಮತ್ತು ಗೋವಿಂದಪ್ಪನ ನಡುವೆ ಅನೈತಿಕ ಸಂಬಂಧ ಇದ್ದಿದ್ದು, ಈ ವಿಚಾರವಾಗಿ ಭಾರತಿ ಪತಿ ಧರ್ಮಯ್ಯ ಮತ್ತು ಗೋವಿಂದಪ್ಪನ ನಡುವೆ ಜಗಳವೂ ನಡೆದಿತ್ತು.
ಈ ಸಂಬಂಧ ಗ್ರಾಮ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಕೂಡ ನಡೆಸಲಾಗಿತ್ತು. ಆದರೆ ಗಲಾಟೆ ನಡೆದ ಸುಮಾರು ಎರಡು ತಿಂಗಳ ಬಳಿಕ ಗೋವಿಂದಪ್ಪ ದಂಪತಿಗಳನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಬಳಿಕ ನ್ಯಾಯಾಲಯ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ : ಕಬ್ಬಿಣದ ಸ್ಟ್ಯಾಂಡ್ ಹಿಡಿದು ಹೋಗುತ್ತಿದ್ದವರಿಗೆ ವಿದ್ಯುತ್ ಶಾಕ್.. ಇಬ್ಬರು ದುರ್ಮರಣ!



















