ಲಂಡನ್ : ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು ಲಂಡನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವ ವೇಳೆ, ಅವರ ಭಾಷಣಕ್ಕೆ ಕೆಲವರು ಅಡ್ಡಿಪಡಿಸಿದ ಘಟನೆ ನಡೆದಿದ್ದು, ಈ ಘಟನೆಯನ್ನು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ತೀವ್ರವಾಗಿ ಖಂಡಿಸಿದೆ. ಸಭಿಕರ ಇಂತಹ ನಡವಳಿಕೆಯು ಅತ್ಯಂತ “ಅಸಭ್ಯ” ಮತ್ತು ಗೌರವಾನ್ವಿತ ಕಾರ್ಯಕ್ರಮ ಮತ್ತು ಸಂವಹನಕ್ಕೆ ವಿರುದ್ಧವಾದುದು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಲಂಡನ್ನ ಬಿರ್ಕ್ಬೆಕ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ‘ಕೃತಕ ಬುದ್ಧಿಮತ್ತೆ (AI) ಮತ್ತು ಅಂತಾರಾಷ್ಟ್ರೀಯ ಕಾನೂನು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು. ತಂತ್ರಜ್ಞಾನದ ಶಕ್ತಿಯು ಸಾಂವಿಧಾನಿಕ ಮೌಲ್ಯಗಳು, ಪ್ರಜಾಸತ್ತಾತ್ಮಕ ಸಿಂಧುತ್ವ ಮತ್ತು ಮಾನವ ಘನತೆಗೆ ಬಾಧ್ಯಸ್ಥವಾಗಿರಬೇಕು ಎಂದು ಪ್ರತಿಪಾದಿಸಿದ ಅವರು, ಈ ದಶಕದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದ ನ್ಯಾಯ ಮತ್ತು ಸ್ವಾತಂತ್ರ್ಯವನ್ನು ರೂಪಿಸಲಿವೆ ಎಂದೂ ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಪ್ರಶ್ನೋತ್ತರ ಅವಧಿಯಲ್ಲಿ ಗದ್ದಲ
ಉಪನ್ಯಾಸ ಮುಗಿದ ಬಳಿಕ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಸಭೆಯಲ್ಲಿದ್ದ ಕೆಲವು ಪ್ರೇಕ್ಷಕರು ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿ ಪ್ರಶ್ನೆಗಳನ್ನು ಕೇಳಲು ಮುಂದಾದರು. ಅಲ್ಲದೆ, ಸಿಜೆಐ ಅವರು ಇತ್ತೀಚೆಗೆ ನೀಡಿದ್ದ ಎನ್ನಲಾದ “ಜಿರಳೆ” (Cockroach) ಹೇಳಿಕೆಯ ಕುರಿತಾಗಿಯೂ ಪ್ರಶ್ನಿಸಲು ಯತ್ನಿಸಿದರು. ಈ ವೇಳೆ ಸಭೆಯಲ್ಲಿದ್ದ ಮಹಿಳೆಯೊಬ್ಬರು, ಭಾರತದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಭಿನ್ನಾಭಿಪ್ರಾಯಗಳ ಮೇಲಿನ ದಮನದ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳವಳ ವ್ಯಕ್ತವಾಗುತ್ತಿದೆ ಎಂದು ಮಾತನಾಡಲು ಆರಂಭಿಸಿದರು.
ಸಂಘಟಕರ ಹಸ್ತಕ್ಷೇಪ
ಮಹಿಳೆಯ ಪ್ರಶ್ನೆಯು ಕಾರ್ಯಕ್ರಮದ ಮುಖ್ಯ ವಿಷಯಕ್ಕೆ ಸಂಬಂಧಿಸಿಲ್ಲದ ಕಾರಣ ಮಧ್ಯಪ್ರವೇಶಿಸಿದ ಸಂಘಟಕರು, “ಕ್ಷಮಿಸಿ, ಈ ಪ್ರಶ್ನೆಯು ಕೃತಕ ಬುದ್ಧಿಮತ್ತೆ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಸಂಬಂಧಿಸಿಲ್ಲದ ಕಾರಣ ನಮಗೆ ಉತ್ತರಿಸಲು ಸಾಧ್ಯವಿಲ್ಲ” ಎಂದು ಹೇಳಿ ಆಕೆಯನ್ನು ತಡೆದರು. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಘಟನೆಯನ್ನು ಖಂಡಿಸಿ ಅಧಿಕೃತ ಪ್ರಕಟಣೆ ಹೊರಡಿಸಿರುವ ಭಾರತೀಯ ಹೈಕಮಿಷನ್, ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಲು ನಾಗರಿಕ ಮತ್ತು ಗೌರವಾನ್ವಿತ ಮಾರ್ಗಗಳಿವೆ. ಅದನ್ನು ಬಿಟ್ಟು ಇಂತಹ ಕಾರ್ಯಕ್ರಮಗಳಲ್ಲಿ ಅಡ್ಡಿಪಡಿಸುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.
ಇದನ್ನೂ ಓದಿ : ಖ್ಯಾತ ಪಂಚಾಯತ್ ರಾಜ್ ತಜ್ಞ, ಹಿರಿಯ ಪತ್ರಕರ್ತ ಎಸ್.ಜನಾರ್ದನ್ ಮರವಂತೆ ವಿಧಿವಶ



















