ಜೈಪುರ: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET-UG 2026) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಮತ್ತು ಪರೀಕ್ಷೆ ರದ್ದತಿಯು ಈಗ ಮತ್ತೊಬ್ಬ ವಿದ್ಯಾರ್ಥಿಯನ್ನು ಬಲಿ ಪಡೆದಿದೆ. ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯನ್ನು ರದ್ದಾದ ಬೆನ್ನಲ್ಲೇ, ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ 22 ವರ್ಷದ ವೈದ್ಯಕೀಯ ಆಕಾಂಕ್ಷಿ ಪ್ರದೀಪ್ ಮೇಘವಾಲ್ ರಾಜಸ್ಥಾನದ ಸಿಕಾರ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಗರಣ ಸಂಬಂಧ ಸಿಬಿಐ ತನಿಖೆ ಪ್ರಗತಿಯಲ್ಲಿರುವಂತೆಯೇ ಕೇಂದ್ರ ಸರ್ಕಾರವು ಶುಕ್ರವಾರವಷ್ಟೇ ಮರುಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿತ್ತು. ಆದರೆ ದುರದೃಷ್ಟವಶಾತ್ ಆ ದಿನವೇ ಈ ದುರಂತ ಸಂಭವಿಸಿದೆ.
ಉತ್ತಮ ಅಂಕದ ನಿರೀಕ್ಷೆಯಲ್ಲಿದ್ದ ಪ್ರದೀಪ್
ರಾಜಸ್ಥಾನದ ಜುಂಜುನು ಜಿಲ್ಲೆಯ ನಿವಾಸಿಯಾಗಿದ್ದ ಪ್ರದೀಪ್ ಮೇಘವಾಲ್, ಸಿಕಾರ್ನ ಜಲಧಾರಿ ನಗರ ಪ್ರದೇಶದಲ್ಲಿ ಬಾಡಿಗೆ ಕೊಠಡಿಯೊಂದರಲ್ಲಿ ತನ್ನ ಸಹೋದರಿಯರೊಂದಿಗೆ ವಾಸಿಸುತ್ತಾ ಕಳೆದ ಮೂರು ವರ್ಷಗಳಿಂದ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ಉದ್ಯೋಗ್ ನಗರ ಠಾಣೆಯ ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್ ನೀಡಿರುವ ಮಾಹಿತಿ ಪ್ರಕಾರ, ಪ್ರದೀಪ್ ತನ್ನ ಸಹೋದರಿಯ ಸ್ಕಾರ್ಫ್ ಬಳಸಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದಾನೆ. ಘಟನೆ ನಡೆದಾಗ ಒಬ್ಬ ಸಹೋದರಿ ಕೋಚಿಂಗ್ ಕ್ಲಾಸ್ಗೆ ಹೋಗಿದ್ದರೆ, ಮತ್ತೊಬ್ಬಳು ಸ್ನಾನದ ಗೃಹದಲ್ಲಿದ್ದಳು. ಪ್ರದೀಪ್ ಈ ಬಾರಿ ಪರೀಕ್ಷೆಯನ್ನು ಅತ್ಯುತ್ತಮವಾಗಿ ಬರೆದಿದ್ದು, ಒಟ್ಟು 720 ಅಂಕಗಳಿಗೆ 650ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವ ಭರವಸೆಯಲ್ಲಿದ್ದ ಎಂದು ಆತನ ತಂದೆ ರಾಜೇಶ್ ಕುಮಾರ್ ಮೇಘವಾಲ್ ಕಣ್ಣೀರಿಟ್ಟಿದ್ದಾರೆ.
ವ್ಯವಸ್ಥೆಯ ವೈಫಲ್ಯಕ್ಕೆ ಬಲಿಯಾದ ಬಡ ಕುಟುಂಬದ ಕನಸು
ದಿನಗೂಲಿ ಕಾರ್ಮಿಕರಾಗಿರುವ ರಾಜೇಶ್ ಕುಮಾರ್ ಅವರು ತೀವ್ರ ಆರ್ಥಿಕ ಸಂಕಷ್ಟದ ನಡುವೆಯೂ ತಮ್ಮ ಕೃಷಿ ಭೂಮಿಯ ಒಂದು ಭಾಗವನ್ನು ಮಾರಿ, ಮಗನ ಓದಿಗಾಗಿ ಸುಮಾರು 8ರಿಂದ 11 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಮಗ ಈ ಬಾರಿ ಖಂಡಿತಾ ವೈದ್ಯನಾಗುತ್ತಾನೆ ಎಂಬ ದೊಡ್ಡ ಕನಸನ್ನು ಕುಟುಂಬ ಹೊಂದಿತ್ತು. ಆದರೆ ಪರೀಕ್ಷೆ ರದ್ದಾದ ಸುದ್ದಿ ಕೇಳಿದಾಗಿನಿಂದ ಪ್ರದೀಪ್ ತೀವ್ರ ಆಘಾತ ಮತ್ತು ಖಿನ್ನತೆಗೆ ಒಳಗಾಗಿದ್ದ ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ. “ಇದು ಕೇವಲ ಆತ್ಮಹತ್ಯೆಯಲ್ಲ, ದೇಶದ ಶಿಕ್ಷಣ ವ್ಯವಸ್ಥೆಯ ವೈಫಲ್ಯ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾ ಸೇರಿ ಈ ಯುವಕನ ಭವಿಷ್ಯವನ್ನು ಬಲಿಪಡೆದಿದೆ” ಎಂದು ಕುಟುಂಬದ ಹಿತೈಷಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಆಕ್ರೋಶ
ಈ ಘಟನೆಯು ರಾಜಸ್ಥಾನದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಈ ಕುರಿತು ತೀವ್ರ ಕಳಕಳಿ ವ್ಯಕ್ತಪಡಿಸಿದ್ದು, “ನಿರಂತರವಾಗಿ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆಗಳು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರುತ್ತಿವೆ. ಕೇಂದ್ರ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿದೆ, ಆದರೆ ಇದು ಕೇವಲ ನಾಮ್ಕೇವಾಸ್ತೆ ಕ್ರಮವಾಗಬಾರದು. ಕಾಲಮಿತಿಯೊಳಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಮೇ 3 ರಂದು ನಡೆದಿದ್ದ ಈ ಪರೀಕ್ಷೆಗೆ ದೇಶಾದ್ಯಂತ ಸುಮಾರು 22 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜಸ್ಥಾನದಲ್ಲಿ 45 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಮರುಪರೀಕ್ಷೆಗೆ ವಿದ್ಯಾರ್ಥಿಗಳು ಮತ್ತೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಎನ್ಟಿಎ ತಿಳಿಸಿದ್ದರೂ, ಪರೀಕ್ಷಾ ಅಕ್ರಮಗಳು ಸೃಷ್ಟಿಸಿರುವ ಗೊಂದಲಗಳು ವಿದ್ಯಾರ್ಥಿ ಸಮುದಾಯವನ್ನು ಭೀತಿಯಲ್ಲಿ ಮುಳುಗಿಸಿವೆ.


















