ಜೈಪುರ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ ಬರೋಬ್ಬರಿ 264 ರನ್ಗಳ ಬೃಹತ್ ಗುರಿಯನ್ನು 18.5 ಓವರ್ಗಳಲ್ಲಿಯೇ ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಅತಿ ದೊಡ್ಡ ರನ್ ಚೇಸ್ ಮಾಡಿದ ದಾಖಲೆ ಬರೆದಿದೆ.
ಶ್ರೇಯಸ್ ಅಯ್ಯರ್ ಅವರ ಜವಾಬ್ದಾರಿಯುತ ಆಟ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ಅವರ ಸ್ಪೋಟಕ ಆರಂಭದಿಂದಾಗಿ ಕೆಎಲ್ ರಾಹುಲ್ ಅವರ 151 ರನ್ಗಳ ಐತಿಹಾಸಿಕ ಶತಕದ ಹೋರಾಟವೂ ವ್ಯರ್ಥವಾಯಿತು. ಈ ಅಮೋಘ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಈ ಬಾರಿಯ ಟೂರ್ನಿಯಲ್ಲಿ ಆಡಿದ ಏಳೂ ಪಂದ್ಯಗಳನ್ನು ಗೆದ್ದು ಅಜೇಯ ಓಟವನ್ನು ಮುಂದುವರಿಸಿದೆ.
ಬೌಲರ್ಗಳಿಗೆ ದುಃಸ್ವಪ್ನವಾದ ಪಂದ್ಯ
ಶನಿವಾರ ಮಧ್ಯಾಹ್ನ ದೆಹಲಿಯ ಬಿರುಬಿಸಿಲಿನಲ್ಲಿ ನಡೆದ ಈ ಪಂದ್ಯ ಬೌಲರ್ಗಳಿಗೆ ಅಕ್ಷರಶಃ ದುಃಸ್ವಪ್ನವಾಗಿತ್ತು. ಪಿಚ್ ಸಂಪೂರ್ಣವಾಗಿ ಬ್ಯಾಟರ್ಗಳಿಗೆ ಸ್ವರ್ಗವಾಗಿದ್ದು, ಒಟ್ಟಾರೆ 529 ರನ್ಗಳು ಹರಿದುಬಂದವು. 31 ಸಿಕ್ಸರ್ ಹಾಗೂ 46 ಬೌಂಡರಿಗಳು ಸಿಡಿದವು ಎಂದರೆ ಪಂದ್ಯದ ಸ್ವರೂಪ ಹೇಗಿತ್ತು ಎಂಬುದನ್ನು ಊಹಿಸಬಹುದು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಕೆಎಲ್ ರಾಹುಲ್ ಅವರ ದಾಖಲೆಯ 151 ರನ್ ಮತ್ತು ನಿತೀಶ್ ರಾಣಾ ಅವರ 44 ಎಸೆತಗಳ 91 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 264 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಆದರೆ, ದೆಹಲಿಯ ಸಣ್ಣ ಮೈದಾನ ಹಾಗೂ ಬ್ಯಾಟಿಂಗ್ಗೆ ಹೇಳಿಮಾಡಿಸಿದಂತಿದ್ದ ಪಿಚ್ನಲ್ಲಿ ಪಂಜಾಬ್ ಕಿಂಗ್ಸ್ ಬೌಲರ್ಗಳ ಮೇಲೆ ನಿರ್ದಯವಾಗಿ ಸವಾರಿ ಮಾಡಿತು. 250ಕ್ಕೂ ಅಧಿಕ ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಐಪಿಎಲ್ನ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಂಜಾಬ್ ಕಿಂಗ್ಸ್ ಪಾತ್ರವಾಗಿದೆ. ಅಲ್ಲದೆ, 2024ರಲ್ಲಿ ತಾನೇ ನಿರ್ಮಿಸಿದ್ದ 262 ರನ್ಗಳ ದಾಖಲೆಯನ್ನು ಇದೀಗ ಮುರಿದಿದೆ.
ಪವರ್ಪ್ಲೇನಲ್ಲಿ ಪಂಜಾಬ್ ಕಿಂಗ್ಸ್ ಅಬ್ಬರ
ಐಪಿಎಲ್ ಇತಿಹಾಸದ ಅತಿ ದೊಡ್ಡ ಗುರಿಯನ್ನು ಬೆನ್ನಟ್ಟುವಾಗ ಆರಂಭ ಹೇಗಿರಬೇಕು ಎಂಬುದನ್ನು ಪಂಜಾಬ್ ಕಿಂಗ್ಸ್ ಆರಂಭಿಕರಾದ ಪ್ರಿಯಾನ್ಶ್ ಆರ್ಯ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ತೋರಿಸಿಕೊಟ್ಟರು. ಇನ್ನಿಂಗ್ಸ್ನ ಮೊದಲ ಎಸೆತದಲ್ಲಿಯೇ ಸಿಕ್ಸರ್ ಸಿಡಿಸುವ ಮೂಲಕ ಪ್ರಿಯಾನ್ಶ್ ಆರ್ಯ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದರು. ಪ್ರಭ್ಸಿಮ್ರಾನ್ ಸಿಂಗ್ ಡೆಲ್ಲಿ ಬೌಲರ್ಗಳಾದ ಮುಖೇಶ್ ಕುಮಾರ್ ಹಾಗೂ ಆಕಿಬ್ ನಬಿ ಅವರ ಬೆವರಿಳಿಸಿದರು. ಪವರ್ಪ್ಲೇಯ 6 ಓವರ್ಗಳಲ್ಲಿ ಪಂಜಾಬ್ 116 ರನ್ ಕಲೆಹಾಕಿತು. ಇದು ಐಪಿಎಲ್ ಇತಿಹಾಸದಲ್ಲಿ ಮೊದಲ ಆರು ಓವರ್ಗಳಲ್ಲಿ ದಾಖಲಾದ ಎರಡನೇ ಅತಿ ದೊಡ್ಡ ಮೊತ್ತವಾಗಿದೆ. ಪ್ರಭ್ಸಿಮ್ರಾನ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಅಂತಿಮವಾಗಿ 26 ಎಸೆತಗಳಲ್ಲಿ 76 ರನ್ ಸಿಡಿಸಿ ಔಟಾದರು. ಪ್ರಿಯಾನ್ಶ್ ಆರ್ಯ ಕೇವಲ 17 ಎಸೆತಗಳಲ್ಲಿ 43 ರನ್ ಚಚ್ಚಿದರು.
ಲುಂಗಿ ಎನ್ಗಿಡಿ ಗಾಯ: ಆತಂಕದ ಕ್ಷಣಗಳು
ಪಂದ್ಯದ ರೋಚಕತೆಯ ನಡುವೆಯೇ ಮೈದಾನದಲ್ಲಿ ಆತಂಕದ ಕ್ಷಣಗಳೂ ಸೃಷ್ಟಿಯಾದವು. ಅಕ್ಷರ್ ಪಟೇಲ್ ಅವರ ಓವರ್ನಲ್ಲಿ ಕ್ಯಾಚ್ ಹಿಡಿಯಲು ಯತ್ನಿಸುವಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ವೇಗಿ ಲುಂಗಿ ಎನ್ಗಿಡಿ ನೆಲಕ್ಕೆ ಅಪ್ಪಳಿಸಿ ತಲೆಗೆ ತೀವ್ರ ಪೆಟ್ಟು ತಿಂದರು. ಅವರನ್ನು ತಕ್ಷಣವೇ ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರತಂದು ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ರವಾನಿಸಲಾಯಿತು. ಈ ಘಟನೆಯಿಂದಾಗಿ ಪಂದ್ಯ ಸುಮಾರು 15 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಆದರೆ, ಪಂದ್ಯ ಪುನರಾರಂಭಗೊಂಡ ನಂತರವೂ ಪಂಜಾಬ್ ಕಿಂಗ್ಸ್ ಬ್ಯಾಟರ್ಗಳ ಅಬ್ಬರ ಮಾತ್ರ ನಿಲ್ಲಲಿಲ್ಲ.
ನಾಯಕನ ಆಟವಾಡಿದ ಶ್ರೇಯಸ್ ಅಯ್ಯರ್
ಪವರ್ಪ್ಲೇ ನಂತರ ಡೆಲ್ಲಿ ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ತಲಾ ವಿಕೆಟ್ ಪಡೆದು ಪಂದ್ಯಕ್ಕೆ ಮರಳುವ ಮುನ್ಸೂಚನೆ ನೀಡಿದರು. ಆದರೆ, ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತ್ರ ಎದೆಗುಂದಲಿಲ್ಲ. ಆರಂಭಿಕರು ನೀಡಿದ್ದ ಭದ್ರ ಬುನಾದಿಯನ್ನು ಉಪಯೋಗಿಸಿಕೊಂಡು ತಾಳ್ಮೆಯಿಂದ ಹಾಗೂ ಚಾಕಚಕ್ಯತೆಯಿಂದ ಇನ್ನಿಂಗ್ಸ್ ಮುನ್ನಡೆಸಿದರು. ನೇಹಾಲ್ ವಧೇರಾ ಅವರೊಂದಿಗೆ ಮೂರನೇ ವಿಕೆಟ್ಗೆ 56 ರನ್ಗಳ ಜೊತೆಯಾಟವಾಡಿ, 15ನೇ ಓವರ್ನಲ್ಲೇ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. 27 ರನ್ ಗಳಿಸಿದ್ದಾಗ ಬದಲಿ ಫೀಲ್ಡರ್ ಕರುಣ್ ನಾಯರ್ ಶ್ರೇಯಸ್ ಅವರ ಎರಡು ಕ್ಯಾಚ್ಗಳನ್ನು ಕೈಚೆಲ್ಲಿದ್ದು ಡೆಲ್ಲಿಗೆ ಭಾರಿ ಬೆಲೆ ತೆರುವಂತೆ ಮಾಡಿತು. ಈ ಜೀವದಾನವನ್ನು ಸದುಪಯೋಗಪಡಿಸಿಕೊಂಡ ಶ್ರೇಯಸ್ ಅಯ್ಯರ್ ಕೇವಲ 36 ಎಸೆತಗಳಲ್ಲಿ ಅಜೇಯ 71 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದನ್ನೂ ಓದಿ : ‘ಕೊಹ್ಲಿಗಿಂತ ಜೋ ರೂಟ್ ಆಟ ನೋಡಲು ಹೆಚ್ಚು ಮಜಾ’ : ಹೊಸ ವಿವಾದ!


















