ಡೆಹ್ರಾಡೂನ್ : ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆಯ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಸವರ್ಣೀಯ ಸಮುದಾಯದ ಯುವತಿಯೊಂದಿಗೆ ಸ್ನೇಹ ಬೆಳೆಸಿದ ಕಾರಣಕ್ಕಾಗಿ 18 ವರ್ಷದ ದಲಿತ ಯುವಕನೊಬ್ಬನನ್ನು ಭೀಕರವಾಗಿ ಕೊಲೆಗೈಯ್ಯಲಾಗಿದೆ. ಈ ಅಮಾನವೀಯ ಘಟನೆಯಲ್ಲಿ ಯುವಕನ ಸ್ನೇಹಿತನಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯವಾಗಿ ತೀವ್ರ ಆಕ್ರೋಶ ಭುಗಿಲೆದ್ದಿದೆ. ಜಾತೀಯತೆಯ ಈ ಕ್ರೌರ್ಯಕ್ಕೆ ಇಡೀ ಜಿಲ್ಲೆಯೇ ಬೆಚ್ಚಿಬಿದ್ದಿದೆ.
ಮೃತನನ್ನು ಕೇತನ್ ಲಾಲ್ ಎಂದು ಗುರುತಿಸಲಾಗಿದ್ದು, ಈತ ಕಳೆದ ಆರು ತಿಂಗಳಿನಿಂದ ಸವರ್ಣೀಯ ಸಮುದಾಯದ ಯುವತಿಯೊಬ್ಬಳೊಂದಿಗೆ ಸ್ನೇಹ ಹೊಂದಿದ್ದ. ಭಾನುವಾರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಯುವತಿಯಿಂದ ಕರೆ ಬಂದ ಹಿನ್ನೆಲೆಯಲ್ಲಿ ಕೇತನ್ ತನ್ನ ಸ್ನೇಹಿತ ದಿವಾಕರ್ ದಿಮ್ರಿ ಜೊತೆ ಆಕೆಯ ಗ್ರಾಮವಾದ ಖೋಲ್ಗಢ್ಗೆ ಹೋಗಿದ್ದ. ಈ ವೇಳೆ ಯುವತಿಯ ಕುಟುಂಬಸ್ಥರು ಇಬ್ಬರನ್ನೂ ಹಿಡಿದು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಇಬ್ಬರ ಮೇಲೂ ಮರಳುಗಡ್ಡೆ ಹಾಗೂ ದೊಣ್ಣೆಗಳಿಂದ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಪತ್ತೆಯಾದ ಮಗ; ಆಸ್ಪತ್ರೆಯಲ್ಲಿ ಸಾವು
ಮಾರನೆಯ ದಿನ ಬೆಳಗ್ಗೆ ಕೇತನ್ ತಂದೆ ಧನಪಾಲ್ ಲಾಲ್ ಅವರಿಗೆ ಯುವತಿಯ ತಂದೆಯಿಂದ ಕರೆ ಬಂದಿದ್ದು, ಬಂದು ನಿಮ್ಮ ಮಗನನ್ನು ಕರೆದುಕೊಂಡು ಹೋಗಿ ಎಂದು ಹೇಳಿ ಕರೆ ಕಟ್ ಮಾಡಿದ್ದಾರೆ. ಧನಪಾಲ್ ತಕ್ಷಣವೇ ಸ್ಥಳಕ್ಕೆ ಧಾವಿಸಿದಾಗ ಕೇತನ್ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ಕೇತನ್ ಸ್ನೇಹಿತ ದಿವಾಕರ್ ಸದ್ಯ ಬೌರಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆರೋಪಿಗಳ ಬಂಧನ
ಈ ಭೀಕರ ಘಟನೆಗೆ ಸಂಬಂಧಿಸಿದಂತೆ ತೆಹ್ರಿ ಗರ್ವಾಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಶ್ವೇತಾ ಚೌಬೆ ಅವರು ಮಾಹಿತಿ ನೀಡಿದ್ದು, ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ಹಾಗೂ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಯಶ್ವೀರ್ ಸಿಂಗ್ ಪನ್ವಾರ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ : ಚುಡಾಯಿಸಿದ್ದಕ್ಕೆ ಕಣ್ಣಿಗೆ ಖಾರದ ಪುಡಿ ಎರಚಿ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ!



















