ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಇತ್ತೀಚೆಗೆ ನೀಡಿದ ಹೇಳಿಕೆಯೊಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಜಲಾವರ್ ಜಿಲ್ಲೆಯ ಮನೋಹರ್ ಥಾನಾದಲ್ಲಿ ನಡೆದ ಜನಸಂಪರ್ಕ ಯಾತ್ರೆಯ ಸಂದರ್ಭದಲ್ಲಿ ಅವರು ಆಡಿದ ಮಾತುಗಳು, ಅವರು ಮುಖ್ಯಮಂತ್ರಿ ಸ್ಥಾನ ತಪ್ಪಿದ್ದಕ್ಕೆ ವ್ಯಕ್ತಪಡಿಸಿದ ನೋವೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
ತಮ್ಮ ಕ್ಷೇತ್ರದ ಜನರೊಂದಿಗೆ ಮಾತನಾಡುತ್ತಾ ಭಾವುಕರಾದ ವಸುಂಧರಾ ರಾಜೇ, “ಜನರ ಪ್ರೀತಿ ಮತ್ತು ನಂಬಿಕೆ ನನ್ನ ಮೇಲೆ ಸದಾ ಇರಲಿ. ಮನೆ ನಿರ್ಮಾಣವಾಗದಿರುವುದು ಅಥವಾ ಪಿಂಚಣಿ ಸಿಗದಿರುವುದು ಸಣ್ಣಪುಟ್ಟ ಸಮಸ್ಯೆಗಳು. ಇವು ಪ್ರಪಂಚದಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ನನಗೂ ಹೀಗೆಯೇ ಆಗಿದೆ- ನನ್ನ ಕೆಲಸವನ್ನೇ ಮಾಡಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ನನ್ನನ್ನೇ ನಾನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ,” ಎಂದು ಮಾರ್ಮಿಕವಾಗಿ ನುಡಿದಿದ್ದರು. ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಹೈಕಮಾಂಡ್ ನಿರ್ಧಾರದ ವಿರುದ್ಧದ ಅಸಮಾಧಾನ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿಯ ‘ಮೋದಿ’ ಕವಿತೆ
ರಾಜೇ ಅವರ ಈ ಹೇಳಿಕೆಯನ್ನು ಅಸ್ತ್ರವಾಗಿಸಿಕೊಂಡ ಪ್ರತಿಪಕ್ಷ ನಾಯಕರು ಬಿಜೆಪಿಯ ಕಾಲೆಳೆದಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಮಾಜಿ ಸಿಎಂ ಅಶೋಕ್ ಗೆಹ್ಲೋಟ್, “ವಸುಂಧರಾ ಅವರೇ ಮುಖ್ಯಮಂತ್ರಿಯಾಗಿದ್ದರೆ ರಾಜ್ಯದಲ್ಲಿ ಉತ್ತಮ ಕೆಲಸಗಳಾಗುತ್ತಿದ್ದವು,” ಎಂದು ಹೇಳುವ ಮೂಲಕ ಬಿಜೆಪಿಯ ಆಂತರಿಕ ಭಿನ್ನಮತವನ್ನು ಕೆದಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್, ಕವಿತೆಯೊಂದರ ಮೂಲಕ ಟಾಂಗ್ ನೀಡಿದ್ದಾರೆ. “ಒಣ ರೊಟ್ಟಿ ಸಿಕ್ಕಾಗ ಅದಕ್ಕೆ ದಾಲ್ ಮತ್ತು ತುಪ್ಪ ಸುರಿದುಕೊಂಡು ತಿನ್ನಬೇಕು. ಪಡಿತರ ಅಂಗಡಿಯವನ (ಮೋದಿ) ಜೊತೆ ಜಗಳವಾಡಲು ಸಾಧ್ಯವಿಲ್ಲ,” ಎಂಬ ಅರ್ಥದ ಕವಿತೆ ಓದಿದ್ದಾರೆ. ಇಲ್ಲಿ ‘ಮೋದಿ’ ಎಂಬ ಪದವು ಪಡಿತರ ಅಂಗಡಿಯವನನ್ನು ಸೂಚಿಸಿದರೂ, ಇದು ನೇರವಾಗಿ ಪ್ರಧಾನಿ ಮೋದಿ ಮತ್ತು ಪಕ್ಷದ ಹೈಕಮಾಂಡ್ ಕುರಿತಾದ ಸಂದೇಶ ಎಂಬ ಚರ್ಚೆ ಶುರುವಾಗಿದೆ.
ಸ್ಪಷ್ಟನೆ ನೀಡಿದ ವಸುಂಧರಾ ರಾಜೆ
ಈ ಬೆಳವಣಿಗೆಯು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ವಸುಂಧರಾ ರಾಜೇ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. “ನನಗೆ ಜನರ ಪ್ರೀತಿಗಿಂತ ದೊಡ್ಡ ಸ್ಥಾನ ಯಾವುದೂ ಇಲ್ಲ. ನನ್ನ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುವಾಗ ನಿಯಮಗಳ ಕಾರಣದಿಂದ ನನ್ನ ಧೋಲ್ಪುರ ಮನೆಯ ಕಾಂಪೌಂಡ್ ಗೋಡೆಯನ್ನೇ ನಾನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದನ್ನೇ ನಾನು ಉದಾಹರಣೆಯಾಗಿ ನೀಡಿದ್ದೇ ಹೊರತು, ಅದು ಸಿಎಂ ಸ್ಥಾನದ ಕುರಿತಾದ ಮಾತಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಮ್ಮ ಹೇಳಿಕೆಯನ್ನು ರಾಜಕೀಯ ಪಿತೂರಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಾಲು ಸಾಲು ರ್ಯಾಲಿಗಳನ್ನು ರದ್ದುಗೊಳಿಸುತ್ತಿರುವ ನಟ ವಿಜಯ್ – ಡಿಎಂಕೆಯಿಂದ ‘ವರ್ಕ್ ಫ್ರಮ್ ಹೋಮ್’ ವ್ಯಂಗ್ಯ


















