ಕೊಲೊಂಬೊ : ಶ್ರೀಲಂಕಾದ ಗಾಲ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾದ ಭಾರತ ‘ಎ’ ಹಾಗೂ ಶ್ರೀಲಂಕಾ ‘ಎ’ ನಡುವಿನ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಯುವ ಬ್ಯಾಟರ್ ಸಾಯಿ ಸುದರ್ಶನ್ ಅದ್ಭುತ ಶತಕ ಸಿಡಿಸಿ ಮತ್ತೊಮ್ಮೆ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತದ ಟೆಸ್ಟ್ ತಂಡದ ಮೂರನೇ ಕ್ರಮಾಂಕದ ಬಗ್ಗೆ ನಡೆಯುತ್ತಿರುವ ಚರ್ಚೆಗಳ ನಡುವೆ ಸಾಯಿ ಸುದರ್ಶನ್ ಅವರ ಈ ಇನ್ನಿಂಗ್ಸ್ ಮಹತ್ವ ಪಡೆದುಕೊಂಡಿದ್ದು, ದೀರ್ಘ ಮಾದರಿಯ ಕ್ರಿಕೆಟ್ಗೆ ತಾವು ಸಂಪೂರ್ಣ ಸಿದ್ಧರಾಗಿರುವುದನ್ನು ಅವರು ಬ್ಯಾಟ್ ಮೂಲಕವೇ ಸಾಬೀತುಪಡಿಸಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ‘ಎ’ ತಂಡದ ನಾಯಕ ಧ್ರುವ್ ಜುರೆಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಸಾಯಿ ಸುದರ್ಶನ್, ಆರಂಭದಿಂದಲೇ ಅತ್ಯಂತ ಸಮತೋಲನದ ಆಟ ಪ್ರದರ್ಶಿಸಿದರು. ಶ್ರೀಲಂಕಾ ‘ಎ’ ಬೌಲರ್ಗಳು ಆರಂಭಿಕ ಹಂತದಲ್ಲಿ ಒತ್ತಡ ಹೇರುವ ಪ್ರಯತ್ನ ಮಾಡಿದರೂ ಸುಧರ್ಶನ ತಮ್ಮ ತಾಳ್ಮೆ ಮತ್ತು ತಾಂತ್ರಿಕ ನೈಪುಣ್ಯದಿಂದ ಅದನ್ನು ಸಮರ್ಥವಾಗಿ ಎದುರಿಸಿದರು. ಅವರು ಕ್ರೀಸ್ನಲ್ಲಿ ನೆಲೆ ನಿಂತ ಬಳಿಕ ಆಕರ್ಷಕ ಕವರ್ ಡ್ರೈವ್ಗಳು, ನೇರ ಹೊಡೆತಗಳು ಹಾಗೂ ಗ್ಯಾಪ್ಗಳನ್ನು ಹುಡುಕುವ ಚಾಣಾಕ್ಷತನದಿಂದ ರನ್ಗಳ ಹರಿವನ್ನು ನಿರಂತರವಾಗಿರಿಸಿದರು.
ಭಾರತ ‘ಎ’ ತಂಡ ಆರಂಭಿಕ ವಿಕೆಟ್ಗಳನ್ನು ಕಳೆದುಕೊಂಡ ಕ್ಷಣದಲ್ಲಿಯೂ ಸಾಯಿ ಸುದರ್ಶನ್ ಜವಾಬ್ದಾರಿಯುತ ಆಟ ಮುಂದುವರಿಸಿದರು. ವಿಶೇಷವಾಗಿ ಮಧ್ಯಮ ಕ್ರಮಾಂಕದ ಬ್ಯಾಟರ್ಗಳೊಂದಿಗೆ ಅವರು ಕಟ್ಟಿದ ಜೊತೆಯಾಟ ತಂಡವನ್ನು ಸಂಕಷ್ಟದಿಂದ ಹೊರತಂದಿತು. ರುತುರಾಜ್ ಗಾಯಕ್ವಾಡ್ ಜೊತೆಗಿನ ಜೊತೆಯಾಟ ಭಾರತಕ್ಕೆ ಸ್ಥಿರತೆ ಒದಗಿಸಿತು. ಸಾಯಿ ಸುದರ್ಶನ್ ಒಂದು ತುದಿಯಲ್ಲಿ ಅಚಲವಾಗಿ ನಿಂತು ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದರೆ, ಮತ್ತೊಂದು ತುದಿಯಲ್ಲಿ ಬ್ಯಾಟರ್ಗಳು ಅವರಿಗೆ ಉತ್ತಮ ಬೆಂಬಲ ನೀಡಿದರು.
ಎಡಗೈ ಬ್ಯಾಟರ್ ಸಾಯಿ ಸುದರ್ಶನ್ 175 ಎಸೆತಗಳಲ್ಲಿ 132 ರನ್ ಗಳಿಸಿ ಮಿಂಚಿದರು. ಅವರ ಇನ್ನಿಂಗ್ಸ್ನಲ್ಲಿ 19 ಆಕರ್ಷಕ ಬೌಂಡರಿಗಳು ಸೇರಿದ್ದವು. ಶತಕದ ಹಾದಿಯುದ್ದಕ್ಕೂ ಅವರು ಯಾವುದೇ ಆತುರ ತೋರಿಸದೆ, ಟೆಸ್ಟ್ ಕ್ರಿಕೆಟ್ಗೆ ಅಗತ್ಯವಾದ ತಾಳ್ಮೆ, ಏಕಾಗ್ರತೆ ಹಾಗೂ ಶಾಟ್ ಆಯ್ಕೆಯನ್ನು ಪ್ರದರ್ಶಿಸಿದರು. ಗಾಲ್ನಂತಹ ಸ್ಪಿನ್ ಸ್ನೇಹಿ ಪಿಚ್ನಲ್ಲಿ ಇಂತಹ ಇನ್ನಿಂಗ್ಸ್ ಆಡುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಸಾಯಿ ಸುದರ್ಶನ್ ಔಟಾದ ಬಳಿಕ ನಾಯಕ ಧ್ರುವ್ ಜುರೆಲ್ ಹಾಗೂ ಶೇಖ್ ರಶೀದ್ ತಂಡದ ಇನ್ನಿಂಗ್ಸ್ ಅನ್ನು ಮತ್ತಷ್ಟು ಬಲಪಡಿಸಿದರು. ಇಬ್ಬರೂ ಐದನೇ ವಿಕೆಟ್ಗೆ ಮುರಿಯದ 116 ರನ್ಗಳ ಜೊತೆಯಾಟ ನಿರ್ಮಿಸಿ ದಿನದಾಟದ ಅಂತ್ಯಕ್ಕೆ ಭಾರತ ‘ಎ’ ತಂಡವನ್ನು 333/4 ಎಂಬ ಭದ್ರ ಸ್ಥಿತಿಗೆ ಕೊಂಡೊಯ್ದರು. ಜುರೆಲ್ ಅಜೇಯ 68 ರನ್ ಹಾಗೂ ರಶೀದ್ ಅಜೇಯ 53 ರನ್ ಗಳಿಸಿ ತಂಡದ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸಿದರು.
ಈ ಶತಕದ ಮೂಲಕ ಸಾಯಿ ಸುಧರ್ಶನ ಮತ್ತೆ ಟೆಸ್ಟ್ ತಂಡದ ಬಾಗಿಲನ್ನು ಬಲವಾಗಿ ತಟ್ಟಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ದೇಶೀಯ ಕ್ರಿಕೆಟ್, ಐಪಿಎಲ್ ಹಾಗೂ ಭಾರತ ‘ಎ’ ಪರ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಅವರು, ಕೆಂಪು ಚೆಂಡಿನ ಕ್ರಿಕೆಟ್ನಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಮೂರನೇ ಕ್ರಮಾಂಕ ಅತ್ಯಂತ ಪ್ರಮುಖ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಹೊಸ ಚೆಂಡಿನ ಸವಾಲನ್ನು ಎದುರಿಸುವುದರ ಜೊತೆಗೆ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿಯೂ ಈ ಸ್ಥಾನದಲ್ಲಿರುತ್ತದೆ. ಗಾಲ್ನಲ್ಲಿ ಸಾಯಿ ಸುದರ್ಶನ್ ಆಡಿದ ಇನ್ನಿಂಗ್ಸ್ ನೋಡಿದರೆ, ಆ ಜವಾಬ್ದಾರಿಯನ್ನು ಹೊರುವ ಸಾಮರ್ಥ್ಯ ಅವರಲ್ಲಿದೆ ಎಂಬ ಸಂದೇಶ ಸ್ಪಷ್ಟವಾಗಿ ರವಾನೆಯಾಗಿದೆ.
ಭಾರತ ‘ಎ’ ತಂಡದ ಶ್ರೀಲಂಕಾ ಪ್ರವಾಸವನ್ನು ಭವಿಷ್ಯದ ಟೆಸ್ಟ್ ಆಟಗಾರರನ್ನು ಗುರುತಿಸುವ ಪ್ರಮುಖ ವೇದಿಕೆಯಾಗಿ ಪರಿಗಣಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಯಿ ಸುದರ್ಶನ್ ಅವರ ಶತಕ ಕೇವಲ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಭಾರತೀಯ ಟೆಸ್ಟ್ ತಂಡದ ಭವಿಷ್ಯದ ಯೋಜನೆಗಳಲ್ಲಿಯೂ ಮಹತ್ವದ ಸೂಚನೆಯಾಗಿ ಪರಿಣಮಿಸಿದೆ. ಗಾಲ್ನಲ್ಲಿ ಅವರು ಪ್ರದರ್ಶಿಸಿದ ಬ್ಯಾಟಿಂಗ್ ಪರಿಪಕ್ವತೆ ಮತ್ತು ದೀರ್ಘ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತಂಡದಲ್ಲಿ ಹೆಚ್ಚಿನ ಅವಕಾಶಗಳ ಬಾಗಿಲು ತೆರೆಯುವ ಸಾಧ್ಯತೆಯನ್ನು ಹೆಚ್ಚಿಸಿದೆ.
ಇದನ್ನೂ ಓದಿ : ಬ್ರಿಟಿಷ್ ಪಾಸ್ಪೋರ್ಟ್ನಿಂದ ಹೊಸ ಅವಕಾಶ : ನಾಟಿಂಗ್ಹ್ಯಾಮ್ಶೈರ್ ತಂಡ ಸೇರಿದ ಮೊಹಮ್ಮದ್ ಅಮೀರ್



















