ಬೆಂಗಳೂರು : ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜಧಾನಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಕೆ.ಆರ್.ಮಾರ್ಕೆಟ್ನಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದ್ದು, ಸಾವಿರಾರು ಬೆಂಗಳೂರಿಗರು ಹೂವು, ಹಣ್ಣು ಮತ್ತು ಪೂಜಾ ಸಾಮಾಗ್ರಿಗಳನ್ನು ಖರೀದಿಸಲು ಮಾರುಕಟ್ಟೆಗೆ ಆಗಮಿಸಿದ್ದಾರೆ.

ಹೂವಿನ ಮಾರ್ಕೆಟ್ನಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನ ಲಗ್ಗೆಯಿಟ್ಟಿದ್ದಾರೆ. ಹೂವುಗಳ ಬೆಲೆ ಸಾವಿರದ ಗಟಿದಾಟಿರುವ ಮಧ್ಯೆಯೂ ಬೆಂಗಳೂರಲ್ಲಿ ಜನ ಸಂಭ್ರಮದಿಂದ ಹಬ್ಬ ಆಚರಣೆಗೆ ಸಿದ್ಧರಾಗಿದ್ದಾರೆ.

ಹೂವುಗಳ ಜೊತೆ ಹಣ್ಣುಗಳ ಬೆಲೆಯಲ್ಲೂ ಕೊಂಚ ಏರಿಕೆಯಾಗಿದೆ. ಸೇಬು 200 ರೂಪಾಯಿಯಿಂದ 250 ರೂಪಾಯಿವರೆಗೂ ಏರಿಕೆಯಾಗಿದೆ. ಎಲ್ಲಾ ಹಣ್ಣುಗಳ ಬೆಲೆಯಲ್ಲೂ 10-20 ರೂಪಾಯಿವರೆಗೂ ಹೆಚ್ಚಾಗಿದೆ. ಈ ಬಾರಿಯ ಬೆಲೆ ಏರಿಕೆ ಜನರಿಗೆ ಸ್ವಲ್ಪ ಮಟ್ಟಿಗೆ ಹೊರೆಯಾಗಲಿದೆ.
ಕೆ.ಆರ್.ಮಾರ್ಕೆಟ್ನಲ್ಲಿ ಸಾಮಾನ್ಯವಾಗಿ ಅಗ್ಗದ ದರದಲ್ಲಿ ಮತ್ತು ವಿವಿಧ ರೀತಿಯ ಹೂವುಗಳು ಲಭ್ಯವಿರುವುದರಿಂದ ಜನರು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ. ಕನಕಾಂಬರ ಪ್ರತಿ ಕೆ.ಜಿ.ಗೆ 5,000 ರೂಪಾಯಿ, ದುಂಡು ಮಲ್ಲಿಗೆ ಪ್ರತಿ ಕೆ.ಜಿ.ಗೆ 2,000 ರೂಪಾಯಿಯಂತೆ ಮಾರಾಟವಾಗುತ್ತಿದೆ.
ಕಳೆದ ವರ್ಷ ಹಬ್ಬದ ಸಂದರ್ಭದಲ್ಲಿ ಕೆ.ಆರ್.ಮಾರ್ಕೆಟ್ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿ ಆಂಬುಲೆನ್ಸ್ಗಳಿಗೆ ತೊಂದರೆಯಾಗಿತ್ತು. ಇದನ್ನು ಮನಗಂಡಿರುವ ಪೊಲೀಸರು, ಈ ಬಾರಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ರಸ್ತೆಯ ಮಧ್ಯಭಾಗದಲ್ಲಿ ವ್ಯಾಪಾರ ಮಾಡಲು ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದ್ದು, ರಸ್ತೆ ಬದಿಯಲ್ಲಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ಕೆ.ಆರ್.ಮಾರ್ಕೆಟ್ನಿಂದ ಟೌನ್ ಹಾಲ್ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸ್ಪಷ್ಟವಾಗಿ ಇಡಲಾಗಿದೆ. ಆದರೆ, ಮೈಸೂರು ಬ್ಯಾಂಕ್ ಸರ್ಕಲ್ಗೆ ಸಾಗುವ ಅವೆನ್ಯೂ ರಸ್ತೆಯಲ್ಲಿ ವ್ಯಾಪಾರ ಮುಂದುವರಿದಿದೆ.
ಇದನ್ನೂ ಓದಿ : ಅಧಿವೇಶನದಲ್ಲಿ ಆಡಳಿತ VS ವಿಪಕ್ಷಗಳ ಜಟಾಪಟಿ ; ಇಂದು ಕಾಂಗ್ರೆಸ್ನಿಂದ ಹೈವೋಲ್ಟೇಜ್ ಪ್ರತಿಭಟನೆ!


















