ಅಮರಾವತಿ: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ 24 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮುನ್ನ ಅವರು ತಮ್ಮ ಸಹೋದರನಿಗೆ ಬರೆದ ವಿದಾಯದ ಪತ್ರ ಎಲ್ಲರ ಮನಕಲಕಿದೆ. ರಕ್ಷಾ ಬಂಧನ ಸಮೀಪಿಸುತ್ತಿರುವಂತೆಯೇ ಬರೆದಿರುವ ಈ ಪತ್ರದಲ್ಲಿ, “ಜಾಗರೂಕನಾಗಿರು ಚಿಕ್ಕ ತಮ್ಮ. ಈ ಬಾರಿ, ನಾನು ನಿನಗೆ ರಾಖಿ ಕಟ್ಟಲು ಸಾಧ್ಯವಾಗದಿರಬಹುದು” ಎಂದು ಬರೆದಿದ್ದಾರೆ.
ವರದಿಗಳ ಪ್ರಕಾರ, ಮೃತಪಟ್ಟ ಮಹಿಳೆಯನ್ನು ಶ್ರೀವಿದ್ಯಾ ಎಂದು ಗುರುತಿಸಲಾಗಿದ್ದು, ಅವರು ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಕೇವಲ ಆರು ತಿಂಗಳ ಹಿಂದೆಯಷ್ಟೇ ಅವರು ಗ್ರಾಮ ಸರ್ವೇಯರ್ ಆಗಿದ್ದ ರಾಂಬಾಬು ಎಂಬುವವರನ್ನು ವಿವಾಹವಾಗಿದ್ದರು. ಆದರೆ, ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಪತಿಯಿಂದ ಕಿರುಕುಳ ಆರಂಭವಾಗಿತ್ತು ಎಂದು ಅವರು ತಮ್ಮ ಪತ್ರದಲ್ಲಿ ನೋವನ್ನು ತೋಡಿಕೊಂಡಿದ್ದಾರೆ.
ಪತ್ರದಲ್ಲಿರುವಂತೆ, ಶ್ರೀವಿದ್ಯಾ ಅವರು ಪತಿ ರಾಂಬಾಬುನಿಂದ ನಿರಂತರವಾಗಿ ಕೌಟುಂಬಿಕ ದೌರ್ಜನ್ಯವನ್ನು ಅನುಭವಿಸಿದ್ದಾರೆ. ರಾಂಬಾಬು ಪ್ರತಿದಿನ ಕುಡಿದು ಮನೆಗೆ ಬಂದು, ಅವರಿಗೆ ದೈಹಿಕವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನು. ಇತರರ ಮುಂದೆ ಅವಮಾನಿಸುವುದು, ಕೀಳಾಗಿ ಮಾತನಾಡುವುದು ಮತ್ತು ತೀವ್ರವಾಗಿ ದೈಹಿಕ ಹಿಂಸೆ ನೀಡುವುದು ಮುಂದುವರಿದಿತ್ತು. ಈ ಪರಿಸ್ಥಿತಿ ಸಹಿಸಲಸಾಧ್ಯವಾದಾಗ, ಶ್ರೀವಿದ್ಯಾ ಅವರು ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹಿಂಸೆ ತಾಳಲಾರದೇ ಆತ್ಮಹತ್ಯೆ ಪತ್ರ ಬರೆದಿಟ್ಟು ಶ್ರೀವಿದ್ಯಾ ನೇಣಿಗೆ ಕೊರಳೊಡ್ದಿದ್ದಾರೆ. ಅದಕ್ಕೂ ಮುನ್ನ ತಮ್ಮ ಸಹೋದರನಿಗೆ ಪತ್ರ ಬರೆದು, “ಈ ಬಾರಿ ರಕ್ಷಾಬಂಧನಕ್ಕೆ ನಿನಗೆ ರಾಖಿ ಕಟ್ಟಲು ಸಾಧ್ಯವಾಗುತ್ತಿಲ್ಲ” ಎಂದೂ ಬರೆದಿರುವುದು ಮನಕಲಕುವಂತಿದೆ.



















