ಲಖನೌ : ರಾಮಮಂದಿರ ಆವರಣದೊಳಗೆ ನಮಾಜ್ ಮಾಡಲು ಯತ್ನಿಸಿ, ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ, ಆ ವ್ಯಕ್ತಿಯನ್ನು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ನಿವಾಸಿ ಅಹ್ಮದ್ ಶೇಖ್ ಎಂದು ಗುರುತಿಸಲಾಗಿದೆ.
55 ವರ್ಷದ ವ್ಯಕ್ತಿಯು ಶುಕ್ರವಾರ (ಜನವರಿ 9) ಹೆಚ್ಚಿನ ಭದ್ರತೆಯಿರುವ ದೇವಾಲಯದ ಆವರಣಕ್ಕೆ ಪ್ರವೇಶಿಸಿ ನಂತರ ಸೀತಾ ರಸೋಯಿ ಪ್ರದೇಶದ ಬಳಿ ಕುಳಿತು, ಅಲ್ಲಿ ನಮಾಜ್ ಮಾಡಲು ಸಿದ್ಧತೆ ನಡೆಸುತ್ತಿದ್ದನೆಂದು ಹೇಳಲಾಗಿದೆ.
ಆತನ ಕೃತ್ಯವನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ಮಧ್ಯ ಪ್ರವೇಶಿಸಿ ವಶಕ್ಕೆ ಪಡೆದಿದ್ದು, ವಿಚಾರಣೆಗಾಗಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕೆಲವು ಮೂಲಗಳು ಹೇಳುವಂತೆ, ಆ ವ್ಯಕ್ತಿಯನ್ನು ತಡೆದಾಗ ಘೋಷಣೆಗಳನ್ನು ಕೂಗಿದ್ದಾನೆ ಎನ್ನಲಾಗಿದೆ. ಆದರೆ ಈ ಹೇಳಿಕೆಯನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ.
ಪೊಲೀಸರು ತನಿಖಾ ಮತ್ತು ಗುಪ್ತಚರ ಸಂಸ್ಥೆಗಳು ಆತನ ಉದ್ದೇಶವನ್ನು ತಿಳಿದುಕೊಳ್ಳಲು ವಿಚಾರಣೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಆತ ಅಯೋಧ್ಯೆಗೆ ಏಕೆ ಬಂದಿದ್ದ, ಈ ಘಟನೆಯಲ್ಲಿ ಇನ್ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಸೇರಿದಂತೆ ಆತನ ಪ್ರಯಾಣ ವಿವರಗಳನ್ನು ಸಹ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಮುಂದಿನ ವಾರ ಅಯೋಧ್ಯೆಯಲ್ಲಿ ಮಕರ ಸಂಕ್ರಾಂತಿ ಆಚರಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಭಾರಿ ಜನಸಂದಣಿ ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಾದ್ಯಂತ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಜನವರಿ 22ರಂದು ರಾಮ ಮಂದಿರದ ಎರಡನೇ ವಾರ್ಷಿಕೋತ್ಸವಕ್ಕೂ ಮುನ್ನ ಈ ಘಟನೆ ನಡೆದಿದೆ.
ಇದನ್ನೂ ಓದಿ : WPL 2026 | ಯುಪಿ ವಿರುದ್ಧ ಗುಜರಾತ್ಗೆ 10 ರನ್ಗಳ ರೋಚಕ ಗೆಲುವು!



















