ನವದೆಹಲಿ : ಐಸಿಸಿ ವೈಟ್-ಬಾಲ್ (ಸೀಮಿತ ಓವರ್ಗಳ) ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾಕ್ಕೆ ಸತತ ಎರಡು ಐತಿಹಾಸಿಕ ಪ್ರಶಸ್ತಿಗಳನ್ನು ತಂದುಕೊಡುವಲ್ಲಿ ಯಶಸ್ವಿಯಾಗಿರುವ ಮುಖ್ಯ ತರಬೇತುದಾರ ಗೌತಮ್ ಗಂಭೀರ್, ಇದೀಗ 2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ಗೇರುವ ಮಹತ್ವದ ಗುರಿಯತ್ತ ಕಣ್ಣಿಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ ಮಾದರಿಯು ತಮ್ಮ ಹೃದಯಕ್ಕೆ ಅತ್ಯಂತ ಹತ್ತಿರವಾದದ್ದು ಎಂದು ಬಣ್ಣಿಸಿರುವ ಅವರು, ಮುಂಬರುವ ಟೆಸ್ಟ್ ಸರಣಿಗಳಿಗೆ ಈಗಿನಿಂದಲೇ ರಣತಂತ್ರ ರೂಪಿಸುತ್ತಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳಿಂದ ಮಣಿಸಿದ ಭಾರತ, ತನ್ನ ಟಿ20 ವಿಶ್ವಕಪ್ (2026) ಕಿರೀಟವನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ. ಈ ಗೆಲುವಿನೊಂದಿಗೆ ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ, ಸತತ ಎರಡು ಬಾರಿ (2024 ಮತ್ತು 2026) ಚಾಂಪಿಯನ್ ಆದ ಹಾಗೂ ಮೂರು ಬಾರಿ (2007, 2024, 2026) ಟ್ರೋಫಿ ಎತ್ತಿಹಿಡಿದ ವಿಶ್ವದ ಏಕೈಕ ತಂಡ ಎಂಬ ಐತಿಹಾಸಿಕ ಸಾಧನೆಗೆ ಟೀಮ್ ಇಂಡಿಯಾ ಭಾಜನವಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಭಾರತ 2024ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿ ಮತ್ತು 2026ರ ಟಿ20 ವಿಶ್ವಕಪ್ ಸೇರಿದಂತೆ ಮೂರು ಐಸಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಆದರೆ, ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಪ್ರಶಸ್ತಿ ಮಾತ್ರ ಭಾರತಕ್ಕೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಚೊಚ್ಚಲ ಡಬ್ಲ್ಯುಟಿಸಿ ಫೈನಲ್ನಲ್ಲಿ ನ್ಯೂಜಿಲೆಂಡ್ ಎದುರು, ಆನಂತರ 2021-2023ರ ಆವೃತ್ತಿಯ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮುಗ್ಗರಿಸಿತ್ತು. ಇನ್ನು 2023-2025ರ ಆವೃತ್ತಿಯಲ್ಲಿ ಫೈನಲ್ಗೇರಲು ವಿಫಲವಾಗಿತ್ತು.
ಮುಂದಿನ ಗುರಿ ಡಬ್ಲ್ಯುಟಿಸಿ ಫೈನಲ್: ಗಂಭೀರ್
ಮುಂದಿನ ಯೋಜನೆಗಳ ಬಗ್ಗೆ ಎಎನ್ಐ (ANI) ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಗೌತಮ್ ಗಂಭೀರ್, “ಟೆಸ್ಟ್ ಕ್ರಿಕೆಟ್ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದದ್ದು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯುವುದೇ ಸದ್ಯ ನನ್ನ ಮುಂದಿನ ಗುರಿಯಾಗಿದೆ. ಡಬ್ಲ್ಯುಟಿಸಿ ಫೈನಲ್ಗೇರಲು ನಮ್ಮ ಮುಂದೆ ಇನ್ನು 9 ಟೆಸ್ಟ್ ಪಂದ್ಯಗಳು ಬಾಕಿಯಿವೆ. ಪ್ರಸ್ತುತ ನಾವು ರೆಡ್-ಬಾಲ್ ಕ್ರಿಕೆಟ್ನಲ್ಲಿ ಬದಲಾವಣೆಯ (Transition) ಹಂತದಲ್ಲಿದ್ದೇವೆ. ವೈಟ್-ಬಾಲ್ ಕ್ರಿಕೆಟ್ಗೆ ಹೋಲಿಸಿದರೆ ಇದು ಹೆಚ್ಚು ಸವಾಲಿನಿಂದ ಕೂಡಿದೆ. ಆದರೂ ನಾವು ಯುವ ಆಟಗಾರರನ್ನು ನಿರಂತರವಾಗಿ ಬೆಂಬಲಿಸಲಿದ್ದೇವೆ” ಎಂದು ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ನ ಮಹತ್ವವನ್ನು ಒತ್ತಿ ಹೇಳಿದ ಅವರು, “ಡ್ರೆಸ್ಸಿಂಗ್ ರೂಮ್ನಲ್ಲಿರುವ ಬಹುತೇಕ ಆಟಗಾರರು ಟೆಸ್ಟ್ ಕ್ರಿಕೆಟ್ನಲ್ಲಿ ಮಿಂಚಲು ತುಡಿಯುತ್ತಿದ್ದಾರೆ. ಏಕೆಂದರೆ ಆಟಗಾರರ ನಿಜವಾದ ಲೆಗಸಿ (ಪರಂಪರೆ) ನಿರ್ಮಾಣವಾಗುವುದೇ ಇಲ್ಲಿ. ನೀವು ದ್ವಿಶತಕ ಅಥವಾ ತ್ರಿಶತಕ ಬಾರಿಸುವ ಅವಕಾಶ ಸಿಗುವುದು ಈ ಮಾದರಿಯಲ್ಲಿ ಮಾತ್ರ. 5 ದಿನಗಳ ಕಠಿಣ ಪರಿಶ್ರಮದ ನಂತರ ಸಿಗುವ ಗೆಲುವಿನ ತೃಪ್ತಿ, ಟಿ20 ಅಥವಾ ಏಕದಿನ ವಿಶ್ವಕಪ್ ಫೈನಲ್ ಗೆಲುವಿಗಿಂತಲೂ ಮಿಗಿಲಾದುದು. ಟೆಸ್ಟ್ ಕ್ರಿಕೆಟ್ ನಿಮಗೆ ಪರಮೋಚ್ಚ ಸಂತೋಷವನ್ನು ನೀಡುತ್ತದೆ” ಎಂದು ಬಣ್ಣಿಸಿದ್ದಾರೆ.
ಗಂಭೀರ್ ಮುಂದಿರುವ ಸವಾಲುಗಳೇನು?
ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಗಂಭೀರ್ ಯಶಸ್ವಿಯಾಗಿದ್ದರೂ, ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಸಾಧಾರಣ ಪ್ರದರ್ಶನ ನೀಡಿದೆ. ಗಂಭೀರ್ ಅವರ ಅಧಿಕಾರಾವಧಿಯಲ್ಲಿಯೇ ಭಾರತ 2025ರ ಡಬ್ಲ್ಯುಟಿಸಿ ಫೈನಲ್ಗೇರಲು ವಿಫಲವಾಗಿತ್ತು. ಅಲ್ಲದೆ ಒಂದೇ ವರ್ಷದ ಅಂತರದಲ್ಲಿ ತವರಿನಲ್ಲಿಯೇ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗಳನ್ನು ಸೋತು ಮುಖಭಂಗ ಅನುಭವಿಸಿತ್ತು. ಹೀಗಾಗಿ, ಸತತ ಎರಡನೇ ಬಾರಿಯೂ ಭಾರತ ಡಬ್ಲ್ಯುಟಿಸಿ ಫೈನಲ್ಗೇರಲು ವಿಫಲವಾದರೆ ಗಂಭೀರ್ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಯಿದೆ. ಪ್ರಸ್ತುತ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತ 9 ಪಂದ್ಯಗಳಿಂದ 4 ಗೆಲುವು ಸಾಧಿಸಿ 48.15 ಶೇಕಡಾವಾರು ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಮೂರು ಸರಣಿಗಳು ಭಾರತದ ಫೈನಲ್ ಭವಿಷ್ಯವನ್ನು ನಿರ್ಧರಿಸಲಿವೆ.
ಇದನ್ನೂ ಓದಿ : ‘ಕುಂಭಮೇಳದ ಬೆಡಗಿ’ ಮೊನಾಲಿಸಾ ಅಪ್ರಾಪ್ತೆಯಲ್ಲ.. VHPಗೆ ಹಿನ್ನಡೆ, ವಿವಾಹ ಸಂಪೂರ್ಣ ಕಾನೂನುಬದ್ಧ!



















