ಅಮರಾವತಿ: ತಮ್ಮ ಅವಧಿಯಲ್ಲಿ ತಿರುಪತಿ ಲಡ್ಡುದಲ್ಲಿ ದನ, ಹಂದಿ ಮಾಂಸದ ಕೊಬ್ಬಿನ ಅಂಶವಿದ್ದ ತುಪ್ಪ ಬಳಸಲಾಗಿತ್ತು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಕ್ಕೆ ಹಿಂದಿನ ಸಿಎಂ ಜಗನ್ಮೋಹನ್ ರೆಡ್ಡಿ ಸಿಡಿದೆದ್ದಿದ್ದಾರೆ.
ತಿರುಪತಿ ಲಡ್ಡು ವಿರುದ್ಧ ಇಂತಹದೊಂದು ಸುಳ್ಳು ಆರೋಪ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ವಾಪದ ಪ್ರಾಯಶ್ಚಿತಕ್ಕಾಗಿ ಸೆ.28ರಂದು ಜನರು ರಾಜ್ಯವ್ಯಾಪಿ ದೇಗುಲಗಳಲ್ಲಿ ಪೂಜೆ ಮಾಡಬೇಕು ಎಂದು ಜಗನ್ ಕರೆ ನೀಡಿದ್ದಾರೆ. ಅಲ್ಲದೆ, ಅಂದು ಖುದ್ದು ತಿರುಪತಿಗೆ ಭೇಟಿ ನೀಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಮುಂದಾಗಿದ್ದಾರೆ.
ಜಗನ್ ಅವರು ತಿರುಮಲಕ್ಕೆ ಭೇಟಿ ನೀಡಿದಾಗ ನಿಯಮಾನುಸಾರ ತಮ್ಮ ಧರ್ಮ ಘೋಷಿಸಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ನಾಯಕಿ ಹಾಗೂ ಲೋಕಸಭಾ ಸದಸ್ಯೆ ದಗ್ಗುಬಾಟಿ ಪುರಂದೇಶ್ವರಿ ತಾಕೀತು ಮಾಡಿದ್ದಾರೆ.