ಮಂಗಳೂರು: ಮುಸ್ಲಿಂ ಹಾಗೂ ಹಿಂದೂ ನಾಯಕರ ಪ್ರಚೋದನಾಕಾರಿ ಹೇಳಿಕೆಗಳಿಂದ ಉದ್ವಿಗ್ನತೆಗೆ ಕಾರಣವಾಗಿದ್ದ ಬಿಸಿ ರೋಡ್ ಬೆಳಿಗ್ಗೆ ಶಾಂತವಾಗಿತ್ತು. ಆದರೆ, ಈಗ ಪೊಲೀಸರ ನಡೆಯಿಂದ ಮತ್ತೆ ಉದ್ವಿಗ್ನತೆಯ ಹಾದಿ ಹಿಡಿದಂತಾಗಿದೆ.
ಈದ್ ಮಿಲಾದ್ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕರ ಬೈಕ್ ರ್ಯಾಲಿಗೆ ಅವಕಾಶ ನೀಡಿದ್ದು, ಪರಿಸ್ಥಿತಿ ಹದಗೆಡುವಂತಾಗಿದೆ. ಮುಸ್ಲಿಂ ಬೈಕ್ ರ್ಯಾಲಿಗೆ ಅವಕಾಶ ನೀಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಮೆರವಣಿಗೆಗೆ ನಮಗೆ ಅನುಮತಿ ನೀಡಿಲ್ಲ. ಆದರೆ, ಮುಸ್ಲಿಂರಿಗೆ ಹೇಗೆ ಅವಕಾಶ ನೀಡಲಾಯಿತು ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರನ್ನು ಪ್ರಶ್ನಿಸಿದ್ದಾರೆ.
ನಾವು ಸಂಜೆವರೆಗೂ ಇಲ್ಲಿಂದ ಹೋಗುವುದಿಲ್ಲ. ಇಲ್ಲೇ ಇರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಮುಸ್ಲಿಂರಿಗೆ ಏಕಾಏಕಿ ಬೈಕ್ ರ್ಯಾಲಿಗೆ ಅವಕಾಶ ನೀಡಿದ್ದೀರಿ. ನಮಗೂ ರ್ಯಾಲಿಗೆ ಅವಕಾಶ ನೀಡಿ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಮುಸ್ಲಿಂ ಯುವಕರು ಜೋರಾಗಿ ಹಾರ್ನ್ ಮಾಡುತ್ತಾ, ಜೋರಾಗಿ ಎಕ್ಸ್ ಲೇಟರ್ ಕೊಟ್ಟು ಹಿಂದೂ ಕಾರ್ಯಕರ್ತರ ಸಮೀಪದಲ್ಲೇ ಅಣಕಿಸುತ್ತಿರುವುದು ಉದ್ವಿಗ್ನತೆಗೆ ಕಾರಣವಾಗಿದೆ. ಆಕ್ರೋಶಗೊಂಡ ಹಿಂದೂ ಸಂಘಟನೆ ಕಾರ್ಯಕರ್ತರು ಭಗವಾಧ್ವಜ ಪ್ರದರ್ಶಿಸಿದ್ದಾರೆ.
‘ತಾಕತ್ತಿದ್ದರೆ ಈದ್ ಮಿಲಾದ್ ಮೆರವಣಿಗೆ ತಡೆಯಿರಿ’ ಎಂದು ವಿಹೆಚ್ಪಿ ಮುಖಂಡ ಶರಣ್ ಪಂಪ್ವೆಲ್ಗೆ ಸವಾಲು ಹಾಕಿದ್ದವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.