ಬೆಂಗಳೂರು: ಪೊಲೀಸರ ಹಲ್ಲೆಯಿಂದಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ (Death) ಗಂಭೀರ ಆರೋಪವೊಂದು ಕೇಳಿ ಬಂದಿದೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರಾಮಸ್ವಾಮಿ ಎಂಬ ವ್ಯಕ್ತಿಯನ್ನು ಕೋಣನಕುಂಟೆ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಪಾಪಣ್ಣ ಹಲ್ಲೆ (Assault) ನಡೆಸಿದ್ದರು ಎನ್ನಲಾಗಿದೆ. ಸದ್ಯ ಈ ವ್ಯಕ್ತಿ ಸಾವನ್ನಪ್ಪಿದ್ದು, ಪೊಲೀಸ್ ಅಧಿಕಾರಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಈ ಕುರಿತು ಮೃತ ರಾಮಸ್ವಾಮಿ ಪತ್ನಿ ಮುನಿಯಮ್ಮ ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಕೊತ್ತನೂರಿನಲ್ಲಿ ರಾಮಸ್ವಾಮಿ ಮತ್ತು ನಿರ್ಮಿತ ಕೇಂದ್ರದ ನಡುವೆ ಜಮೀನು ವ್ಯಾಜ್ಯ ಇದೆ. 2 ತಿಂಗಳ ಹಿಂದೆ ಈ ಜಮೀನಿನಲ್ಲಿ ನೀಲಗಿರಿ ಮರ ತೆರವು ಮಾಡಲು ನಿರ್ಮಿತಿ ಕೇಂದ್ರದ ಸಿಬ್ಬಂದಿ ತೆರಳಿದ್ದರು . ಕೋಣನಕುಂಟೆ ಪೊಲೀಸರ ಭದ್ರತೆ ಜೊತೆಗೆ ಮರ ತೆರವು ಮಾಡಲು ಹೋಗಿದ್ದರು. ಆಗ ಜಮೀನು ನಮ್ಮದು ಎಂದು ರಾಮಸ್ವಾಮಿ ಕುಟುಂಬ ಅಡ್ಡಿಪಡಿಸಿತ್ತು. ಈ ವೇಳೆ ಪೊಲೀಸರು ರಾಮಸ್ವಾಮಿ, ಆತನ ಪತ್ನಿ, ಮಗಳ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಆದರೆ, ಬಿಪಿ, ಶುಗರ್ ಇದ್ದ ಹಿನ್ನೆಲೆಯಲ್ಲಿ ರಾಮಸ್ವಾಮಿ ಹಲ್ಲೆಯಿಂದ ನಿತ್ರಾಣರಾಗಿದ್ದರು. ಆಗ ಪೊಲೀಸರು ರಾಮಸ್ವಾಮಿಯನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ರಾಮಸ್ವಾಮಿ ಅವರ ಪತ್ನಿ ಹಾಗೂ ಮಗಳ ಬಳಿ ಬಂದು ಪೊಲೀಸರು ಬೆದರಿಕೆ ಹಾಕಿದ್ದಾರೆ. ನ್ಯಾಯಾಧೀಶರ ಮುಂದೆ ಹಲ್ಲೆ ವಿಚಾರ ಹೇಳಿದರೆ ಮಗಳನ್ನ ಶಾಶ್ವತವಾಗಿ ಜೈಲಿಗೆ ಕಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಂತರ ನ್ಯಾಯಾಧೀಶರ ಮುಂದೆ ನಿಂತಾಗ ರಾಮಸ್ವಾಮಿ ಕುಸಿದು ಬಿದ್ದಿದ್ದರು. ನಂತರ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ನಂತರ ಮನೆಗೆ ಮರಳಿದ್ದ ರಾಮಸ್ವಾಮಿ ಅವರು 3 ದಿನದ ಹಿಂದೆ ಸಾವನ್ನಪ್ಪಿದ್ದಾರೆ. ಈ ಕುರಿತು ಮುಖ್ಯಮಂತ್ರಿ, ಪೊಲೀಸ್ ಆಯುಕ್ತರಿಗೆ ರಾಮಸ್ವಾಮಿ ಪತ್ನಿ ಮುನಿಯಮ್ಮ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಸಿಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.