ಚಿಕ್ಕಮಗಳೂರು: ನಗರದ ರಸ್ತೆಗಳಲ್ಲಿ ಯುವಕರ ಗುಂಪೊಂದು ಪ್ಯಾಲೆಸ್ತೀನ್ ಧ್ವಜ ಹಿಡಿದು ಓಡಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲದ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದ್ದು, ಯುವಕರ ಗುಂಪು ಪ್ಯಾಲೆಸ್ತೀನ್ ಧ್ವಜ (Palestine Flag) ಹಿಡಿದು ಬೈಕ್ ನಲ್ಲಿ ರೌಂಡ್ಸ್ ಹಾಕಿದ್ದಾರೆ. ರೌಂಡ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಕುರಿತು ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ನಾಲ್ವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕರಿಗೆ ಪ್ಯಾಲೆಸ್ತೀನ್ ಧ್ವಜ ಸಿಕ್ಕಿದ್ದು ಹೇಗೆ? ಧ್ವಜ ನೀಡಿ ನಗರದಾದ್ಯಂತ ಓಡಾಟ ನಡೆಸಲು ಸೂಚನೆ ನೀಡಿದ್ದು ಯಾರು? ಎಂಬ ಚರ್ಚೆ ಈಗ ಶುರುವಾಗಿದೆ. ಹೀಗಾಗಿ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
ಪ್ಯಾಲೆಸ್ತೀನ್ ಧ್ವಜ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಘಟನೆಗೆ ಸಂಬಂಧಿಸಿದಂತೆ ಇನ್ ಸ್ಪೆಕ್ಟರ್ ಗವಿರಾಜ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಕೋಮು ಸೂಕ್ಷ್ಮ ಚಿಕ್ಕಮಗಳೂರು ನಗರದಲ್ಲಿ ಗಲಭೆಗೆ ಸಂಚು ರೂಪಿಸಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕುತ್ತಿವೆ.