ಬೆಂಗಳೂರು: ಹೈಕಮಾಂಡ್ ಅನುಮತಿ ಪಡೆದು ಬಸನಗೌಡ ಪಾಟೀಲ್ ಯತ್ನಾಳ್ ಪಾದಯಾತ್ರೆ ಮಾಡಿದರೆ ಯಾವುದೇ ಅಭ್ಯಂತರವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿಯ ಹರ್ ಘರ್ ತಿರಂಗಾ ಅಭಿಯಾನಕ್ಕೆ ನಗರದ ವಸಂತ ನಗರ ಮಂಡಲ್ ಬೂತ್ ನಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಇನ್ನಿತರ ಕೆಲವು ಶಾಸಕರು ಪಾದಯಾತ್ರೆ ಮಾಡಬೇಕೆಂದು ಅಂದುಕೊಂಡಿದ್ದಕ್ಕೆ ನಮ್ಮದು ತಕರಾರು ಇಲ್ಲ. ಯತ್ನಾಳ್ ನೇತೃತ್ವದಲ್ಲಿ ಕೆಲವು ಬಿಜೆಪಿ ಶಾಸಕರು ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಮಾಡುವ ನಿರ್ಧಾರ ಮಾಡಿಕೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಪ್ರಯತ್ವನ್ನು ನಾನು ಮಾಡುತ್ತೇನೆ. ಆ ಪಾದಯಾತ್ರೆಗೆ ನಮ್ಮ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ.
ಅಲ್ಲದೇ, ಹೈಕಮಾಂಡ್ ಅನುಮತಿ ಪಡೆದು ಅವರು ಪಾದಯಾತ್ರೆ ಮಾಡಿದರೆ ನಮ್ಮ ಬೆಂಬಲವೂ ಇರುತ್ತದೆ. ರಾಜ್ಯಾಧ್ಯಕ್ಷನಾಗಿ ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯತ್ನಾಳ್ ಅವರ ಉದ್ದೇಶಿತ ಪಾದಯಾತ್ರೆ ಕುರಿತು ನನ್ನ ತಕರಾರು ಇಲ್ಲ. ಅದರೆ ಅವರ ಪಾದಯಾತ್ರೆ ಪಕ್ಷದ ಸಂಘಟನೆಗೆ ಪೂರಕವಾಗಿರಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ.