ಯಾದಗಿರಿ: ನಗರ ಪಿಎಸ್ ಐ ಆಗಿದ್ದ ಪರಶುರಾಮ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಗುರುವಾರ ಸಿಐಡಿ ಅಧಿಕಾರಿಗಳು ಪೊಲೀಸ್ ವಸತಿ ಗೃಹದ ಪರಶುರಾಮ ಮನೆಗೆ ತೆರಳಿ ಸ್ಥಳ ಮಹಜರು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹೆಸರಿನ ಲೆಟರ್ ಹೆಡ್ ಪತ್ತೆಯಾಗಿದೆ. ಕಾನೂನು ಸುವ್ಯವಸ್ಥೆ ಪೋಸ್ಟಿಂಗ್ ಬೇರೆಯವರಿಗೆ ಕೊಟ್ಟ ಹಿನ್ನೆಲೆಯಲ್ಲಿ ಅಪರಾಧ ವಿಭಾಗದ ಪೋಸ್ಟಿಂಗ್ ಕೊಡಿ ಎಂದು ಪರಶುರಾಮ ಮನವಿ ಮಾಡಿದ್ದರು. ಹೀಗಾಗಿ ಶಾಸಕರು ಯಾದಗಿರಿ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್ ಐ ಪೋಸ್ಟಿಂಗ್ ಗಾಗಿ ಲೆಟರ್ ಹೆಡ್ ನೀಡಿದ್ದರು. ಸದ್ಯ ಅಧಿಕಾರಿಗಳು ಈ ಲೆಟರ್ ಹೆಡ್ ವಶಕ್ಕೆ ಪಡೆದಿದ್ದಾರೆ.
ಯಾದಗಿರಿ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಪೋಸ್ಟಿಂಗ್ ಗಾಗಿ ಶಾಸಕ ಚೆನ್ನಾರೆಡ್ಡಿ 15 ಲಕ್ಷ ರೂ. ಕೇಳಿದ್ದರು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಪಿಎಸ್ ಐ ಪರಶುರಾಮ ಹಣ ಹೊಂದಿಸುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಕೂಡಿಟ್ಟ 7.33 ಲಕ್ಷ ನಗದು ಸಿಕ್ಕಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಾಲ್ಕು ಬ್ಯಾಂಕ್ ಖಾತೆಯಲ್ಲಿನ ಹಣದ ಮಾಹಿತಿಯನ್ನೂ ಸಹ ಸಿಐಡಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಜೊತೆಗೆ ಇಲಾಖಾ ರಿವಾಲ್ವರ್ (ಬಂದೂಕು), ಸಿಮ್ಕಾರ್ಡ್, ಮೊಬೈಲ್ ಮತ್ತು ವಾಕಿಟಾಕಿ ಜಪ್ತಿ ಮಾಡಿದ್ದಾರೆ. ಪಿಎಸ್ ಐ ಸಾವನ್ನಪ್ಪಿದ ಜಾಗದಲ್ಲಿ ಮುಗಿನಿಂದ ಬಾಯಿಂದ ಬಂದ ರಕ್ತದ ಮಾದರಿ ಕೂಡ ಸಂಗ್ರಹಿಸಲಾಗಿದೆ.
ಪಿಎಸ್ ಐ ಪರಶುರಾಮ ಪ್ರತಿಯೊಂದು ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಪೋಸ್ಟಿಂಗ್ ಆಗದೆ ಇರುವ ಕುರಿತು ಸ್ನೇಹಿತರು ಮತ್ತು ಕಟುಂಬಸ್ಥರ ಮುಂದೆ ಪೋಸ್ಟಿಂಗ್ ಹಣ ಕೇಳಿರುವ ದೂರವಾಣಿ ಮೂಲಕ ಸಂಭಾಷಣೆ ಮಾಡಿದ್ದಾರೆ. ಈ ಎಲ್ಲ ಸಂಭಾಷಣೆಗಳು ಕೂಡ ಈಗ ಮೊಬೈಲ್ ನಲ್ಲಿ ಇವೆ ಎನ್ನಲಾಗುತ್ತಿದೆ. ಹೀಗಾಗಿ ತಪ್ಪಿತಸ್ಥರಿಗೆ ಆತಂಕ ಶುರುವಾಗಿದೆ.