ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಮಂಗಳವಾರವೂ ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ (Valmiki Corporation Scam) ಸಾಕಷ್ಟು ಸದ್ದು ಮಾಡಿತು. ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashoka) ವಾಲ್ಮೀಕಿ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಸಿಎಂ (CM Siddaramaiah) 187 ಕೋಟಿ ರೂ. ಅಕ್ರಮ ವರ್ಗಾವಣೆ ಆಗಿಲ್ಲ. ವರ್ಗಾವಣೆ ಆಗಿರೋದು 89.62 ಕೋಟಿ ರೂ. ಅಂದಿದ್ದಾರೆ. ಅಂದರೆ ಅವರೇ ಅಕ್ರಮ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಕಳವು ಮಾಡಲು ಎಂ.ಜಿ ರಸ್ತೆ ಬ್ಯಾಂಕಿಗೆ 187 ಕೋಟಿ ವರ್ಗಾವಣೆ ಮಾಡಿದ ಮೇಲೆ, ಇದು ಪಕ್ಕಾ 187 ಕೋಟಿ ರೂ. ಅಕ್ರಮನೇ. ಈ ಕಳ್ಳತನ ಸಿಎಂಗೆ ಗೊತ್ತಿದ್ದರೂ ಗೊತ್ತಿಲ್ಲದಿದ್ದರೂ ಅವರದ್ದೇ ತಪ್ಪು. ಏಕೆಂದರೆ ಅವರ ಬಳಿಯೇ ಹಣಕಾಸು ಇಲಾಖೆ ಇರುವುದು ಎಂದು ಆರೋಪಿಸಿದ್ದಾರೆ.
ವಾಲ್ಮಿಕಿ ಜನಾಂಗದ ಶಾಪ ಸರ್ಕಾರಕ್ಕೆ ತಟ್ಟಬಾರದು ಅಂದರೆ, ಕೂಡಲೇ 187 ಕೋಟಿ ರೂ. ಮರಳಿ ಪಡೆಯಬೇಕು. ಪ್ರಕರಣದ ಸಿಬಿಐ ತನಿಖೆ ಆಗಬೇಕು. ಇದು ಸಿಎಂ ಹಣಕಾಸು ಇಲಾಖೆಗೆ ಬರುತ್ತೆ, ಸಿಎಂ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.