ಹಾಸನ: ದೌರ್ಜನ್ಯ ಆರೋಪದಡಿ ಬಂಧನಕ್ಕೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಎಸ್ಐಟಿ (SIT) ಅಧಿಕಾರಿಗಳು ಹೊಳೆನರಸೀಪುರದ (Holenarasipur) ಚೆನ್ನಾಂಬಿಕಾ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ನಿವಾಸದ ಬಳಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. 43 ದಿನಗಳ ನಂತರ ಹೊಳೆನರಸೀಪುರಕ್ಕೆ ಪ್ರಜ್ವಲ್ ಆಗಮಿಸಿದಂತಾಗಿದೆ. ಡಿವೈಎಸ್ಪಿ ಸತ್ಯನಾರಾಯಣ ನೇತೃತ್ವದಲ್ಲಿ ಪ್ರಜ್ವಲ್ ರನ್ನು ಕರೆ ತರಲಾಯಿತು. ಮಾಧ್ಯಮಗಳ ಕ್ಯಾಮೆರಾಗೆ ಬೀಳದಂತೆ ಅವರ ನಿವಾಸಕ್ಕೆ ಕರೆದೊಯ್ಯಲಾಯಿತು. ಎಸ್ಐಟಿ ಅಧಿಕಾರಿಗಳೊಂದಿಗೆ ಎಫ್ಎಸ್ಎಲ್ ಅಧಿಕಾರಿಗಳು ಕೂಡ ಇದ್ದರು.
ಪ್ರಜ್ವಲ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಚೆನ್ನಾಂಬಿಕಾ ನಿವಾಸದ ಎದುರು ಎಎಸ್ಪಿ ವೆಂಕಟೇಶ್ ನಾಯ್ಡು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಜ್ವಲ್ ಹಲವು ಮಹಿಳೆಯ ಜೊತೆ ಇದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗಿತ್ತು. ಅದು ವೈರಲ್ ಆಗುತ್ತಿದ್ದಂತೆ ಜರ್ಮನಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಈಗ ಭಾರತಕ್ಕೆ ಬಂದಿದ್ದು, ಎಸ್ ಐಟಿ ತನಿಖೆಗೆ ಒಳಪಟ್ಟಿದ್ದಾರೆ.