ಕಲ್ಲಿದ್ದಲು ಕುಲುಮೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಸಜೀವವಾಗಿ ಸುಟ್ಟು ಹಾಕಿದ್ದ ಪಾಪಿಗಳಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ.
ಈ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೊ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಮರಣದಂಡನೆ ವಿಧಿಸಿದೆ. ಪಾಪಿಗಳು ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೇ, ಸಜೀವವಾಗಿ ಸುಟ್ಟು ಹಾಕಿದ್ದರು. ನಂತರ ಅರೆಬೆಂದ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಕಾಲುವೆಗೆ ಎಸೆದಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಬ್ಬರನ್ನು ಬಂಧಿಸಿ, ಸತ್ಯ ಬಾಯಿ ಬಿಡಿಸಿದ್ದರು. ಎರಡು ದಿನಗಳ ಹಿಂದೆ ಇಬ್ಬರೂ ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿತ್ತು. ನಿನ್ನೆ ಇಬ್ಬರಿಗೂ ಮರಣದಂಡನೆ ವಿಧಿಸಲಾಗಿದೆ. ವಿಚಾರಣೆ ವೇಳೆ 43 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿತ್ತು.
ಆಡುಗಳನ್ನು ಮೇಯಿಸುತ್ತಿದ್ದ ಬಾಲಕಿಯ ಮೇಲೆಯೇ ಪಾಪಿಗಳು ಅತ್ಯಾಚಾರ ನಡೆಸಿದ್ದರು ಎನ್ನಲಾಗಿದೆ. ಓಡಿ ಹೋಗಲು ಯತ್ನಿಸಿದಾಗ ದೊಣ್ಣೆಯಿಂದ ಆಕೆಯ ತಲೆಗೆ ಹೊಡೆದಿದ್ದಾರೆ. ಆಕೆ ಪ್ರಜ್ಞಾಹೀನಳಾದಾಗ ಮತ್ತೆ ಇಬ್ಬರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು ಎನ್ನಲಾಗಿದೆ.
ನ್ಯಾ. ಅನಿಲ್ ಗುಪ್ತಾ ಅವರು ಕಾಲು ಮತ್ತು ಕನ್ಹಾ ಕಲ್ಬೆಲಿಯಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ತಕ್ಷಣ ಕುಟುಂಬದವರ ಕಣ್ಣಂಚಲ್ಲಿ ನೀರು ಮೂಡಿತ್ತು. ಮಗಳಂತೂ ಹಿಂದಿರುಗುವುದಿಲ್ಲ ಆದರೆ ಆಕೆಯ ಸಾವಿಗೆ ನ್ಯಾಯ ಸಿಕ್ಕಿದೆ ಎನ್ನುವ ತೃಪ್ತಿ ಕಾಣುತ್ತಿತ್ತು.