ನಾನು ಕಳೆದ ವರ್ಷ (04/08/23)
ಹೂಸ್ಟನ್ (ಅಮೇರಿಕಾ) ಹೋಗಿದ್ದಾಗ ಈ “ಓಪ್ಪನ್ ಹೈಮರ್” ಚಿತ್ರನೋಡಿದ್ದೆ. ಸದ್ಯ ಈ ಚಿತ್ರಕ್ಕೆ ಜಗತ್ತಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ದೊರೆತಿದೆ. ಬರೋಬ್ಬರಿ ಏಳು ವಿಭಾಗದಲ್ಲಿ!ಇರಲಿ. ಚಿತ್ರ ನೋಡಿದಾಗಲೇ ಅಂತಹದ್ದೊಂದು ಕುರುಹು ಸಿಕ್ಕಿತ್ತು. ಅಸಲಿಗೆ ಆ ಚಿತ್ರವೇ ಹಾಗೆ ಮೂಡಿ ಬಂದಿತ್ತು.
ನಿಜ ಹೇಳಬೇಕೆಂದರೆ ನನಗೆ ಇಂಗ್ಲೀಷ್ ಚಿತ್ರ ಅರ್ಥವಾಗುವುದಿಲ್ಲ. ನಿಜಕ್ಕೂ ಅವರ ಉಚ್ಛಾರಣೆ ನನಗೆ ಅಯೋಮಯ ಎನಿಸುವುದು. ಹೈಮರ್ ಬಗ್ಗೆ ನಾನು ಬಾಲ್ಯದಲ್ಲಿ ಕೆಲವು ಸಂಗತಿ ತಿಳಿದಿದ್ದೆ… ಆ ನಂತರ ದೊಡ್ಡವನಾದ ಮೇಲೆ ಬಹಳಷ್ಟು ಓದಿದ್ದೆ(ಕನ್ನಡದಲ್ಲಿ… ಕಾರಣ ನನಗೆ ಇಂಗ್ಲೀಷ್ ಓದು ಅರ್ಥವಾಗುವುದಿಲ್ಲ, ಮಾತನಾಡಲಂತೂ ಬರುವುದೇ ಇಲ್ಲ). ಬಾಂಬ್ ಮ್ಯಾನ್ ಅನ್ನುವ ನಾಯಕೀಯ ನಾಮಧೇಯವನ್ನು ಹಿರೋಷಿಮಾ- ನಾಗಸಾಕಿ ಅವರಿಗೆ ತಂದುಕೊಟ್ಟಿತ್ತು. ಚಿತ್ರದ ಆರಂಭದಿಂದ ಅಂತ್ಯದವರೆಗೂ, ಅರ್ಥವಾಗಿದ್ದು, ಅರ್ಥವಾಗದಿರುವುದು! ಎರಡನ್ನೂ ಒಂದೇ ಕುತೂಹಲದಿಂದ ವೀಕ್ಷಿಸಿದೆ. ಚಿತ್ರದ ಆರಂಭದಲ್ಲಿನ ಅಂಗಳದ ತುಂತುರು ಮಳೆ ಹನಿ ಅಂತ್ಯದ ಕೆರೆಯಲ್ಲಿ (ಅದು ಸಮುದ್ರ ಅನ್ನಿ, ಸರೋವರ ಅನ್ನಿ… ಇನ್ನೇನೇ ಅನ್ನಿ) ಅಂತ್ಯವಾಗಿದ್ದು(ಚಿತ್ರದ ಅಂತ್ಯ) ಕಂಡೆ. ಚಿತ್ರದುದ್ದಕ್ಕೂ ಹೈಮರ್ ರೆಸ್ಟ್! ತೆಗೆದುಕೊಂಡಿದ್ದು ಕಂಡಿಲ್ಲ… (ಸಿಗರೇಟು.. ಕಾಮದಾಹ ತೀರಿಸಿಕೊಳ್ಳುವ ಹೊರತಾಗಿ) ಅವನ ಬದುಕೊಂದು ಸಾಧನೆಯ ಓಟವಾಗಿತ್ತು, ಗುರಿಮುಟ್ಟಿದ ಮೇಲೂ ಅವಮಾನ, ಮಾನಸಿಕ ಹಿಂಸೆ, ಅಪರಾಧಿ ಮನೋಭಾವ, ಪಾಪಭಯ.
ಈ ಜಗತ್ತು, ಜ್ಞಾನಿಗಳು, ವಿಜ್ಞಾನಿಗಳು, ಪ್ರತಿಭಾವಂತರು, ಅನ್ವೇಷಕರುಗಳಿಂದ ತುಂಬಿ ತುಳುಕುತ್ತಿದೆ. ಎಲ್ಲೆಡೆಯೂ ಇರುವುದು ಅವಕಾಶದ ಕೊರತೆ! ಒಂದು ಅವಕಾಶಕ್ಕಾಗಿ ಹೈಮರ್ ಹಪಹಪಿಸಿ ಸಾಧಿಸುತ್ತಾನೆ. ಸ್ವಾರ್ಥಿಗಳ ಹಸ್ತಸೇರಿದ ಅವನ ಸಾಧನೆಯ ಪರಿಣಾಮ ಅಷ್ಟು ಭಯಂಕರವಾಗಿರುತ್ತದೆಂದು ಆತ ಕಲ್ಪಿಸಿಯು ಇರಲ್ಲ. ನಂತರದ ದಿನಗಳಲ್ಲಿ ಆತನ ಬದುಕು, ಮಾನಸಿಕವಾಗಿ ಯಾತನಾಮಯವಾಗಿಯೇ ಪರಿಸಮಾಪ್ತಿಯಾಗುತ್ತದೆ.
ಹಿರಿಯ ನಿರ್ದೇಶಕರು, ಲೇಖಕರು, ಧಾರ್ಮಿಕ ಚಿಂತಕರು.