ಬೆಂಗಳೂರು : ನೀವೇನಾದರೂ 9ನೇ ತರಗತಿಯಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದರೆ, ನಿಮಗೊಂದು ಸುವರ್ಣಾವಕಾಶ ದೊರೆತಿದೆ. ಕೇಂದ್ರ ಸರ್ಕಾರವು ಪಿಎಂ ಯಶಸ್ವಿ (PM-YASASVI Scholarship) ವಿದ್ಯಾರ್ಥಿವೇತನ ಯೋಜನೆ ಜಾರಿಗೆ ತಂದಿದ್ದು, ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವತಿಯಿಂದ ಒಬಿಸಿ, ಇಬಿಸಿ (ಆರ್ಥಿಕವಾಗಿ ಹಿಂದುಳಿದವರು) ಹಾಗೂ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಜಾರಿಗೆ ತಂದಿರುವ ಪ್ರಮುಖ ವಿದ್ಯಾರ್ಥಿವೇತನ ಯೋಜನೆಯಾಗಿದೆ.
ಅರ್ಹತೆಗಳು ಏನೇನು?
• ಭಾರತೀಯ ನಾಗರಿಕರಾಗಿರಬೇಕು
• ವಿದ್ಯಾರ್ಥಿಗಳು ಒಬಿಸಿ, ಇಬಿಸಿ ಅಥವಾ ಬುಡಕಟ್ಟು ವರ್ಗಕ್ಕೆ ಸೇರಿರಬೇಕು.
• ಪೋಷಕರ ಅಥವಾ ಕುಟುಂಬದ ಒಟ್ಟು ವಾರ್ಷಿಕ ಆದಾಯವು 2.50 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
• 9ನೇ ತರಗತಿಯಿಂದ 12ನೇ ತರಗತಿಯವರೆಗೆ ಸರ್ಕಾರಿ ಅಥವಾ ಸರ್ಕಾರದ ಮಾನ್ಯತೆ ಪಡೆದ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರಬೇಕು.
ವಿದ್ಯಾರ್ಥಿವೇತನ ಎಷ್ಟು?
- 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 75 ಸಾವಿರ ರೂಪಾಯಿ.
- 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 1,25,000 ರೂಪಾಯಿವರೆಗೆ ಬೋಧನಾ ಶುಲ್ಕ ಹಾಗೂ ಇತರ ವೆಚ್ಚಗಳಿಗೆ ಧನಸಹಾಯ ಸಿಗುತ್ತದೆ.
ಯಾವೆಲ್ಲ ದಾಖಲೆ ಸಲ್ಲಿಸಬೇಕು?
ಅರ್ಹ ಹಾಗೂ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಹಿಂದಿನ ತರಗತಿಯ ಅಂಕಪಟ್ಟಿ, ಬ್ಯಾಂಕ್ ಪಾಸ್ ಬುಕ್ ವಿವರ, ಪಾಸ್ ಪೋರ್ಟ್ ಅಳತೆಯ ಫೋಟೊ ನೀಡಬೇಕು. ವಿದ್ಯಾರ್ಥಿಗಳು https://scholarships.gov.in/ ವೆಬ್ ಸೈಟ್ ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಪಿಎಂ ಯಶಸ್ವಿ ಸ್ಕಾಲರ್ ಶಿಪ್ ಆಯ್ಕೆ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ.
ಇದನ್ನೂ ಓದಿ : ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಅವರ ಬಾಲ್ಯ ಸ್ನೇಹಿತನಿಗೆ ಮರಳಿ ಸಿಕ್ಕಿತು ಕಳೆದುಕೊಂಡಿದ್ದ ಭೂಮಿ!



















