ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದಲ್ಲಿ ಔಷಧ ಉದ್ಯಮಿ ವಿನೀತ್ ಮಿನೋಚಾ ಹತ್ಯೆ ಪ್ರಕರಣ ತನಿಖೆ ತೀವ್ರ ಕುತೂಹಲ ಮೂಡಿಸಿದೆ. ಇಂದಿರಾ ನಗರದಲ್ಲಿರುವ ತಮ್ಮ ನಿವಾಸದಲ್ಲೇ ವಿನೀತ್ ಅವರ ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಇದು ಹೊರಗಿನ ವ್ಯಕ್ತಿಗಳು ನಡೆಸಿದ ದಾಳಿ ಎಂದು ಪೊಲೀಸರು ಶಂಕಿಸಿದ್ದರು. ಆದರೆ ಮನೆಯ ಸಿಸಿಟಿವಿ ದೃಶ್ಯಗಳು, ದೂರವಾಣಿ ಕರೆಗಳ ದಾಖಲೆ, ಅಳಿಸಲಾದ ಸಂದೇಶಗಳು ಹಾಗೂ ಮಾಜಿ ನೌಕರನ ವಿಚಾರಣೆ ಬಳಿಕ ತನಿಖೆಯ ದಿಕ್ಕೇ ಬದಲಾಗಿದೆ. ಇದೀಗ ವಿನೀತ್ ಅವರ ಸೊಸೆ ಶಾಲು ಮಿನೋಚಾಳನ್ನು ಕೊಲೆ ಸಂಚಿನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಆದರೆ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ.
ಸಿಸಿಟಿವಿ ಕಣ್ಗಾವಲು ಬಗ್ಗೆ ಕುಟುಂಬದಲ್ಲಿ ಅಸಮಾಧಾನ?
ಪೊಲೀಸರ ಪ್ರಕಾರ, ವಿನೀತ್ ತಮ್ಮ ಪುತ್ರ ಮತ್ತು ಸೊಸೆಯ ಚಟುವಟಿಕೆಗಳ ಮೇಲೆ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇಡುತ್ತಿದ್ದರು. ಕುಟುಂಬದ ಖರ್ಚಿನ ಮೇಲೂ ಅವರು ನಿಯಂತ್ರಣ ಹೊಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಶಾಲು ಅಸಮಾಧಾನಗೊಂಡಿದ್ದಿರಬಹುದು ಎಂಬುದು ತನಿಖಾಧಿಕಾರಿಗಳ ಅನುಮಾನ. ಶನಿವಾರ ರಾತ್ರಿ ಸುಮಾರು 9.36ಕ್ಕೆ ವಿನೀತ್ ಅವರ ಪುತ್ರ ಸುಬ್ರತ್, ಸೊಸೆ ಶಾಲು ಮತ್ತು ಅವರ ಆರು ವರ್ಷದ ಮಗ ಪಾರ್ಟಿಗೆ ತೆರಳಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆಗೆ ತೆರಳುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು.
ಮಾಜಿ ನೌಕರನಿಂದ ಕೊಲೆಯ ಸುಳಿವು
ಪೊಲೀಸರ ತನಿಖೆಯಲ್ಲಿ ಶಂಕಿತರಲ್ಲಿ ಒಬ್ಬನನ್ನು ವಿನೀತ್ ಅವರ ಮಾಜಿ ನೌಕರ ವಿಶಾಲ್ ಗೌತಮ್ ಎಂದು ಗುರುತಿಸಲಾಯಿತು. ಸುಮಾರು 12–13 ವರ್ಷಗಳ ಕಾಲ ಮನೆಯಲ್ಲಿ ಕೆಲಸ ಮಾಡಿದ್ದ ವಿಶಾಲ್ಗೆ ಮನೆಯ ವಿನ್ಯಾಸದ ಬಗ್ಗೆ ಸಂಪೂರ್ಣ ಪರಿಚಯವಿತ್ತು. ಆತ ತನ್ನ ಸಹಚರ ರಾಜ್ ಕಿಶೋರ್ನೊಂದಿಗೆ ನಕಲಿ ಕೀಲಿಯ ಮೂಲಕ ಮನೆಗೆ ಪ್ರವೇಶಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನೀತ್ ರಾತ್ರಿ 10.58ರ ಸುಮಾರಿಗೆ ಮನೆಗೆ ಮರಳುವ ವೇಳೆಗೆ ಆರೋಪಿಗಳು ಮನೆಯೊಳಗೇ ಅಡಗಿ ಕುಳಿತಿದ್ದರು ಎನ್ನಲಾಗಿದೆ.
309 ಕರೆ, 49 ಅಳಿಸಲಾದ ಸಂದೇಶಗಳು
ತನಿಖೆಯಲ್ಲಿ ಶಾಲು ಮತ್ತು ವಿಶಾಲ್ ನಡುವೆ ಮೇ 1ರಿಂದ ಹತ್ಯೆಯ ದಿನದವರೆಗೆ ಸುಮಾರು 309 ಬಾರಿ ಸಂಪರ್ಕ ನಡೆದಿರುವುದು ಬೆಳಕಿಗೆ ಬಂದಿದೆ. ದೂರವಾಣಿ ಕರೆಗಳ ಜತೆಗೆ ವಾಟ್ಸ್ಆ್ಯಪ್ ಕರೆಗಳೂ ನಡೆದಿವೆ ಎನ್ನಲಾಗಿದೆ. ಅಲ್ಲದೆ, ಇಬ್ಬರ ನಡುವೆ ವಿನಿಮಯವಾಗಿದ್ದ 49 ಸಂದೇಶಗಳನ್ನು ಅಳಿಸಲಾಗಿದ್ದು, ಅವುಗಳನ್ನು ತಾಂತ್ರಿಕವಾಗಿ ಮರುಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಹತ್ಯೆಗೆ 6 ಲಕ್ಷ ರೂಪಾಯಿ ಮೊತ್ತದ ಒಪ್ಪಂದವಾಗಿತ್ತು ಎಂಬುದನ್ನೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮನೆಯಿಂದ ಹಣ ಅಥವಾ ಬೆಲೆಬಾಳುವ ವಸ್ತುಗಳು ಕಳವಾಗದಿರುವುದು ಕೂಡ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಹೀಗಾಗಿ ದರೋಡೆ ಉದ್ದೇಶಕ್ಕಿಂತ ಕುಟುಂಬದೊಳಗಿನ ವೈಮನಸ್ಸೇ ಹತ್ಯೆಯ ಹಿಂದಿನ ಪ್ರಮುಖ ಕಾರಣವಾಗಿರಬಹುದೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ರಾಷ್ಟ್ರೀಯ ವಿಧಿವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳ ನೇಮಕಾತಿ



















