ನವದೆಹಲಿ : ನ್ಯಾಯಕ್ಕಾಗಿ ನಡೆಸುವ ಪ್ರಾಮಾಣಿಕ ಹೋರಾಟ ಎಂದಿಗೂ ವಿಫಲವಾಗುವುದಿಲ್ಲ ಎಂಬುದಕ್ಕೆ ಮಧ್ಯಪ್ರದೇಶದ ಮೋರೆನಾದ ಗಿರ್ವಾರ್ ಸಿಂಗ್ ತೋಮರ್ ಅವರ ಜೀವನವೇ ಸಾಕ್ಷಿ. ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (CRPF) ಸೇವೆ ಸಲ್ಲಿಸುತ್ತಿದ್ದ ವೇಳೆ ಉದ್ಯೋಗ ಕಳೆದುಕೊಂಡು, ಸುದೀರ್ಘ 27 ವರ್ಷಗಳ ಕಾಲ ಸಾಧುವಾಗಿ ಕಾಲ ಕಳೆದಿದ್ದ ಇವರು, ಈಗ ಕಾನೂನು ಹೋರಾಟದಲ್ಲಿ ಗೆದ್ದು ಮತ್ತೆ ಖಾವಿ ಬಿಟ್ಟು ಸಮವಸ್ತ್ರ ತೊಟ್ಟು ಸೇವೆಗೆ ಮರಳಿದ್ದಾರೆ.
ವಜಾಗೊಂಡ ನಂತರ ಸಾಧುವಾದ ಸೈನಿಕ
1991ರಲ್ಲಿ ಸಿಆರ್ಪಿಎಫ್ ಪಡೆಯ ಹವಾಲ್ದಾರ್ ಆಗಿ ಸೇವೆಗೆ ಸೇರಿದ ಗಿರ್ವಾರ್ ಸಿಂಗ್, ಸುಮಾರು ಎಂಟು ವರ್ಷಗಳ ಕಾಲ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದರು. ಆದರೆ 1999ರಲ್ಲಿ ಹಿರಿಯ ಅಧಿಕಾರಿಯೊಬ್ಬರ ಜೊತೆ ಉಂಟಾದ ಭಿನ್ನಾಭಿಪ್ರಾಯದ ಕಾರಣಕ್ಕೆ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ಸೇವೆಯಿಂದ ವಜಾಗೊಳಿಸಲಾಯಿತು. ಕೆಲಸ ಕಳೆದುಕೊಂಡು ತವರೂರು ಮೋರೆನಾಗೆ ಹಿಂತಿರುಗಿದ ಗಿರ್ವಾರ್ ಸಿಂಗ್ ಅವರ ಜೀವನ ಸಂಪೂರ್ಣ ಬದಲಾಯಿತು. ದೇವಸ್ಥಾನ ಮತ್ತು ಗವಿಗಳಲ್ಲಿ ಪೂಜೆ, ಧ್ಯಾನದಲ್ಲಿ ತೊಡಗಿಸಿಕೊಂಡ ಅವರು ‘ಗಿರ್ವಾರ್ ದಾಸ್ ಮಹಾರಾಜ್’ ಎಂಬ ಹೆಸರಿನಿಂದ ಸಾಧುವಾಗಿ ಸನ್ಯಾಸಿ ಜೀವನ ನಡೆಸಲು ಆರಂಭಿಸಿದರು.
ನ್ಯಾಯಾಲಯದಲ್ಲಿ ಸುದೀರ್ಘ ಕಾನೂನು ಸಮರ
ಆಧ್ಯಾತ್ಮಿಕ ಹಾದಿಯಲ್ಲಿದ್ದರೂ ತಮ್ಮ ಮೇಲಾದ ಅನ್ಯಾಯದ ವಿರುದ್ಧ ಹೋರಾಡುವುದನ್ನು ಗಿರ್ವಾರ್ ಸಿಂಗ್ ಕೈಬಿಡಲಿಲ್ಲ. 1999ರಲ್ಲೇ ತಮ್ಮ ವಜಾ ಆದೇಶವನ್ನು ಪ್ರಶ್ನಿಸಿ ಮಧ್ಯಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದರು. 2007ರಲ್ಲಿ ನ್ಯಾಯಾಲಯ ಇವರ ಪರವಾಗಿ ತೀರ್ಪು ನೀಡಿತಾದರೂ, ಸಿಆರ್ಪಿಎಫ್ ಆ ಆದೇಶಕ್ಕೆ ತಡೆ (Stay) ತಂದಿದ್ದರಿಂದ ಕಾನೂನು ಸಮರ ಮುಂದುವರಿಯಿತು. ನಂತರ ಹೈಕೋರ್ಟ್ನ ದ್ವಿಪೀಠಕ್ಕೆ ಮೇಲ್ಮನವಿ ಸಲ್ಲಿಸಿದ ಇವರಿಗೆ ಆಗಸ್ಟ್ 2025ರಲ್ಲಿ ಅಂತಿಮವಾಗಿ ಮರುನೇಮಕಾತಿ ಮಾಡುವಂತೆ ಕೋರ್ಟ್ ಆದೇಶಿಸಿತು.
ಮತ್ತೆ ಯೂನಿಫಾರ್ಮ್ ತೊಟ್ಟು ಸೇವೆಗೆ ಹಾಜರ್
ಕೋರ್ಟ್ ಆದೇಶ ಬಂದ ಮೇಲೆಯೂ ಇಲಾಖೆಯಿಂದ ತಕ್ಷಣದ ಕರೆ ಬರಲಿಲ್ಲ. ಅಧಿಕೃತ ನೋಟಿಸ್ಗಳು ಮತ್ತು ಸತತ ಪ್ರಯತ್ನಗಳ ನಂತರ, 27 ವರ್ಷಗಳ ಸುದೀರ್ಘ ನಿರೀಕ್ಷೆಗೆ ಕೊನೆಗೂ ತೆರೆಬಿದ್ದಿದೆ. ಗಿರ್ವಾರ್ ಸಿಂಗ್ ಅವರನ್ನು ಮತ್ತೆ ಸಿಆರ್ಪಿಎಫ್ ಸೇವೆಗೆ ಮರುಸೇರ್ಪಡೆಗೊಳಿಸಲಾಗಿದ್ದು, ಛತ್ತೀಸ್ಗಢದ ಬಿಜಾಪುರದಲ್ಲಿ ಹುದ್ದೆ ನೀಡಲಾಗಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಸಾಧುವಾಗಿದ್ದ ಗಿರ್ವಾರ್ ಸಿಂಗ್, ಮತ್ತೆ ಹೆಮ್ಮೆಯಿಂದ ಯೂನಿಫಾರ್ಮ್ ಧರಿಸಿ ದೇಶಸೇವೆಗೆ ಮರಳಿದ್ದಾರೆ.
ಇದನ್ನೂ ಓದಿ : ಗುಜರಾತ್ನಲ್ಲಿ ಟೆಸ್ಲಾ ಸೇವಾ ಜಾಲ ವಿಸ್ತರಣೆ : ಅಹಮದಾಬಾದ್ನಲ್ಲಿ ಹೊಸ ‘ಅನುಮೋದಿತ ಬಾಡಿ ಶಾಪ್’ ಆರಂಭ



















