ರಾಮನಗರ : ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಎನ್ಫೋರ್ಸ್ಮೆಂಟ್ ವಿಂಗ್ ಅಧಿಕಾರಿಗಳು ಬಿಡದಿ ಬಳಿಯ ಹೆಜ್ಜಾಲದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ, ಬರೋಬ್ಬರಿ ₹5 ಕೋಟಿಗೂ ಹೆಚ್ಚು ಮೌಲ್ಯದ ನಕಲಿ ಔಷಧಿಗಳನ್ನು ಜಪ್ತಿ ಮಾಡಿದ್ದಾರೆ. ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳ ಹೆಸರಿನಲ್ಲಿ ನಕಲಿ ಔಷಧಿಗಳನ್ನು ತಯಾರಿಸಿ, ಮರುಪ್ಯಾಕ್ ಮಾಡಿ ಲೇಬಲಿಂಗ್ ಮಾಡುತ್ತಿದ್ದ ಅಕ್ರಮ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಯಾವುದೇ ಪರವಾನಗಿ ಇಲ್ಲದೆ ಘಟಕದಲ್ಲಿ ಔಷಧ ತಯಾರಿಕೆ ಹಾಗೂ ಪ್ಯಾಕಿಂಗ್ ಮಾಡಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ನಿಖರ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದು, ಘಟಕದಲ್ಲಿದ್ದ ವಿವಿಧ ಕಂಪನಿಗಳ ಹೆಸರಿನ ನಕಲಿ ಔಷಧಿಗಳು, ಕಚ್ಚಾ ವಸ್ತುಗಳು ಹಾಗೂ ಔಷಧಗಳ ಪ್ರಿಂಟಿಂಗ್ ಮತ್ತು ಲೇಬಲಿಂಗ್ ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದಿಂದ ಕಡಿಮೆ ಬೆಲೆಗೆ ಔಷಧಿಗಳನ್ನು ತಂದು, ಇಲ್ಲಿ ಪ್ರತಿಷ್ಠಿತ ಕಂಪನಿಗಳ ಲೇಬಲ್ಗಳನ್ನು ಹಾಕಿ ಆಸ್ಪತ್ರೆಗಳು ಹಾಗೂ ಮೆಡಿಕಲ್ಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಫೋಜ್ ಲೇಬಲ್, ಹಿಜ್ಲಮ, ಕ್ರವಿಟಾಜ್ ಸೇರಿದಂತೆ ಹಲವು ಔಷಧಿಗಳ ಹೆಸರಿನಲ್ಲಿ ಅಕ್ರಮವಾಗಿ ಪ್ಯಾಕಿಂಗ್ ಮತ್ತು ಲೇಬಲಿಂಗ್ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಮಾತನಾಡಿ, ಬಿಡದಿಯಲ್ಲಿ ನಡೆದಿರುವ ಘಟನೆ ಆಘಾತಕಾರಿ ಹಾಗೂ ಚಿಂತೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಬೀಟ್ ಪೊಲೀಸರಿಂದ ಬಂದ ಮಾಹಿತಿಯ ಆಧಾರದ ಮೇಲೆ ತಕ್ಷಣ ದಾಳಿ ನಡೆಸಿ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿ ವಿಳಂಬವಾಗಿದ್ದರೆ ಔಷಧಿಗಳನ್ನು ಬೇರೆಡೆಗೆ ಸಾಗಿಸುವ ಸಾಧ್ಯತೆ ಇತ್ತು. ಒಂದೇ ದಿನ ಸುಮಾರು ₹5 ಕೋಟಿ ಮೌಲ್ಯದ ಔಷಧಿಗಳು ರವಾನೆಯಾಗುತ್ತಿದ್ದವು ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಸಿದ್ಧಯ್ಯ ಎಂಬುವರಿಗೆ ಸೇರಿದ ಫಾರಂ ಹೌಸ್ ಅನ್ನು ಪ್ರಶಾಂತ್ ಎಂಬುವರಿಗೆ ಲೀಸ್ಗೆ ನೀಡಲಾಗಿತ್ತು. ಅಲ್ಲಿಂದ ಪ್ರಭು ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದು ಅಂತರರಾಜ್ಯ ನಕಲಿ ಔಷಧಿ ದಂಧೆಯಾಗಿರುವ ಶಂಕೆ ಇರುವುದರಿಂದ ಸಮಗ್ರ ತನಿಖೆ ನಡೆಸಲಾಗುವುದು ಎಂದು ಯು.ಟಿ. ಖಾದರ್ ಹೇಳಿದ್ದಾರೆ. ದಂಧೆಯ ಹಿಂದೆ ಯಾರಿದ್ದಾರೆ, ಔಷಧಿಗಳು ಎಲ್ಲಿಂದ ಬಂದವು, ಇಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ, ಕಳೆದ ಎರಡು ವರ್ಷಗಳಲ್ಲಿ ಈ ಔಷಧಿಗಳನ್ನು ಎಲ್ಲೆಲ್ಲಿ ಬಳಸಲಾಗಿದೆ ಮತ್ತು ಇದರಿಂದ ಯಾರಿಗಾದರೂ ಆರೋಗ್ಯ ಹಾನಿ ಅಥವಾ ಸಾವು ಸಂಭವಿಸಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಕರಣದ ತನಿಖೆ ಎಸ್ಪಿ ನೇತೃತ್ವದಲ್ಲಿ ನಡೆಯುತ್ತಿದೆ. ಈ ಬಗ್ಗೆ ಗೃಹ ಸಚಿವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದು, ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಲಾಗುವುದು. ಪ್ರಕರಣವನ್ನು ವಿಧಾನಸಭೆಯಲ್ಲಿ ಚರ್ಚಿಸುವುದರ ಜೊತೆಗೆ ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಲಾಗುವುದು ಎಂದಿದ್ದಾರೆ.
FDA ಕಮಿಷನರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ನಕಲಿ ಔಷಧಿ ತಯಾರಿಕೆ ಹಿಂದಿರುವ ಸಂಪೂರ್ಣ ಜಾಲದ ಬಗ್ಗೆ ತನಿಖೆ ಮುಂದುವರಿದಿದೆ. ಘಟಕದಲ್ಲಿರುವ ಔಷಧಿಗಳು, ಕಚ್ಚಾ ವಸ್ತುಗಳು ಹಾಗೂ ಇತರ ಸಾಮಗ್ರಿಗಳ ಜಪ್ತಿ ಕಾರ್ಯವೂ ಮುಂದುವರಿದಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಕಾರ್ಯಾಚರಣೆಗೆ ಸಹಕರಿಸಿದ ಬೀಟ್ ಪೊಲೀಸ್ ಸಿಬ್ಬಂದಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಇದನ್ನೂ ಓದಿ : ವಿವೋದಲ್ಲಿ ಶೀಘ್ರವೇ ಗೂಗಲ್ನ ‘ಸ್ಕ್ಯಾಮ್ ಡಿಟೆಕ್ಷನ್’ ಫೀಚರ್ : ಕರೆ, ಸಂದೇಶಗಳ ಮೂಲಕ ನಡೆಯುವ ವಂಚನೆಗೆ ಬೀಳಲಿದೆ ಬ್ರೇಕ್!



















