ಮುಂಬೈ : ಭಾರತೀಯ ನೌಕಾಪಡೆಯ ಯೋಧರೊಬ್ಬರು ತಮ್ಮ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು, ಕೊನೆಗೆ ತಾವೂ ಆತ್ಮಹತ್ಯೆ ಮಾಡಿಕೊಂಡಿರುವಂಥ ಆಘಾತಕಾರಿ ಘಟನೆ ಮುಂಬೈನ ನೌಕಾಪಡೆಯ ವಸತಿ ಗೃಹದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನೌಕಾಪಡೆಯ ಯೋಧ, ತಮ್ಮ ತಾಯಿಗೆ “ಬಂದು ನಮ್ಮ ಶವಗಳನ್ನು ತೆಗೆದುಕೊಂಡು ಹೋಗಿ” ಎಂದು ಮೆಸೇಜ್ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ.
30 ವರ್ಷದ ನೌಕಾಪಡೆಯ ಸಿಬ್ಬಂದಿ ಪೂರನ್ಮಲ್ ಶಂಭೂಲಾಲ್ ಮೆಹ್ರಾ ಅವರೇ ಈ ಕೃತ್ಯವೆಸಗಿದವರು. ಮೂಲತಃ ರಾಜಸ್ಥಾನದವರಾದ ಇವರು ದಕ್ಷಿಣ ಮುಂಬೈನ ನೇವಿ ನಗರದಲ್ಲಿರುವ ತಮ್ಮ ಕ್ವಾರ್ಟರ್ಸ್ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರ 28 ವರ್ಷದ ಪತ್ನಿ ಓಮಾ, ಮೂರು ವರ್ಷದ ಮಗ ಯಶ್ ಮತ್ತು ಎರಡು ತಿಂಗಳ ಹಸುಗೂಸಿನ ಮೃತದೇಹಗಳು ಮಂಚದ ಮೇಲೆ ಪತ್ತೆಯಾಗಿವೆ. ಮೆಹ್ರಾ ಅವರು ಮೊದಲು ಹೆಂಡತಿ ಮತ್ತು ಮಕ್ಕಳಿಗೆ ವಿಷ ನೀಡಿ ಕೊಲೆಗೈದು, ನಂತರ ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸಾವಿಗೆ ಮುನ್ನ ತಾಯಿಗೆ ವಾಟ್ಸ್ ಆ್ಯಪ್ ಸಂದೇಶ
ಆಗಸ್ಟ್ 14ರ ರಾತ್ರಿ ಸುಮಾರು 11 ಗಂಟೆಗೆ ಮೆಹ್ರಾ ತಮ್ಮ ತಾಯಿಗೆ ವಾಟ್ಸ್ಆ್ಯಪ್ ಸಂದೇಶವೊಂದನ್ನು ಕಳುಹಿಸಿದ್ದರು. ಅಷ್ಟರಲ್ಲಿ ತಾಯಿ ನಿದ್ದೆಗೆ ಜಾರಿದ್ದರಿಂದ ಈ ಸಂದೇಶ ಓದಿರಲಿಲ್ಲ. ಆದರೆ ಮರುದಿನ ಬೆಳಿಗ್ಗೆ ಈ ಸಂದೇಶವನ್ನು ನೋಡಿದ ತಾಯಿ ಆತಂಕಗೊಂಡು ತಕ್ಷಣವೇ ಮಗನಿಗೆ ಕರೆ ಮಾಡಲು ಯತ್ನಿಸಿದ್ದಾರೆ. ಆದರೆ ಫೋನ್ ಸ್ವೀಕರಿಸದಿದ್ದಾಗ, ತಂದೆ ಶಂಭೂಲಾಲ್ ಮೆಹ್ರಾ ಅವರು ನೌಕಾಪಡೆಯ ನಿಯಂತ್ರಣ ಕೊಠಡಿಗೆ (Control Room) ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಧಿಕಾರಿಗಳು ಮತ್ತು ಸಿಬ್ಬಂದಿ ಫ್ಲ್ಯಾಟ್ಗೆ ಧಾವಿಸಿದಾಗ ಕುಟುಂಬದ ಎಲ್ಲಾ ನಾಲ್ವರೂ ಮೃತಪಟ್ಟಿರುವುದು ಪತ್ತೆಯಾಗಿದೆ.
ಫೋನ್ ಡೇಟಾ ಡಿಲೀಟ್
ಈ ಕೃತ್ಯ ಎಸಗುವ ಮುನ್ನ ಮೆಹ್ರಾ ತಮ್ಮ ಹಾಗೂ ತಮ್ಮ ಪತ್ನಿಯ ಮೊಬೈಲ್ ಫೋನ್ಗಳ ಸಂಪೂರ್ಣ ಡೇಟಾ(ದತ್ತಾಂಶ)ವನ್ನು ಡಿಲೀಟ್ (Format) ಮಾಡಿದ್ದಾರೆ. ಹೀಗಾಗಿ ಪ್ರಕರಣದ ತನಿಖೆಗೆ ಸೈಬರ್ ತಜ್ಞರ ನೆರವು ಪಡೆಯಲಾಗುತ್ತಿದ್ದು, ಅಳಿಸಿಹಾಕಲಾದ ದತ್ತಾಂಶವನ್ನು ಮರಳಿ ಪಡೆಯಲು ಯತ್ನಿಸಲಾಗುತ್ತಿದೆ. ಮೆಹ್ರಾ ಅವರು ತೀವ್ರತರವಾದ ಕೌಟುಂಬಿಕ ಕಲಹ ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು ಮತ್ತು ಮುಂಬೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಆಹಾರಕ್ಕೆ ವಿಷ ಬೆರೆಸಿ ಕೊಲೆ
ಪತ್ನಿ, ಮಕ್ಕಳಿಗೆ ನೀಡಲಾದ ವಿಷಕಾರಿ ವಸ್ತು ಯಾವುದು ಎಂಬುದನ್ನು ತಿಳಿಯಲು ಪೊಲೀಸರು ವೈದ್ಯಕೀಯ ಮತ್ತು ವಿಧಿವಿಜ್ಞಾನ (Forensic) ವರದಿಗಾಗಿ ಕಾಯುತ್ತಿದ್ದಾರೆ. ಘಟನೆಯ ಹಿನ್ನೆಲೆ ಮತ್ತು ಸ್ಪಷ್ಟ ಕಾರಣವನ್ನು ತಿಳಿಯಲು ಮೆಹ್ರಾ ಅವರ ಸಹೋದ್ಯೋಗಿಗಳು, ನೆರೆಹೊರೆಯವರು ಹಾಗೂ ಆಪ್ತರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಈ ನಡುವೆ ಭಾರತೀಯ ನೌಕಾಪಡೆಯು ಘಟನೆ ಬಗ್ಗೆ ಸಂತಾಪ ಸೂಚಿಸಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ : ‘ನೀಟ್’ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡಿಲ್ಲ : ಸುಪ್ರೀಂಗೆ ದೆಹಲಿ ಪೊಲೀಸರ ಅಫಿಡವಿಟ್



















