ಬೆಂಗಳೂರು : ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ಎರಡನೇ ದಿನವಾದ ಶುಕ್ರವಾರ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಲೀಂ ಅಹ್ಮದ್ ಅವರು ಆಯ್ಕೆಯಾಗಿದ್ದಾರೆ.
ಧ್ವನಿ ಮತದ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಲೀಂ ಅಹ್ಮದ್ ಪರವಾಗಿ 38 ಮತಗಳು ಚಲಾವಣೆಯಾದರೆ, ಪಿ.ಎಚ್.ಪೂಜಾರ್ ಪರವಾಗಿ 30 ಮತಗಳು ಚಲಾವಣೆಯಾದವು.
ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಸಲೀಂ ಅಹ್ಮದ್ ಹಾಗೂ ಮೈತ್ರಿಕೂಟದಿಂದ ಬಿಜೆಪಿಯ ಪಿ.ಎಚ್.ಪೂಜಾರ್ ಕಣದಲ್ಲಿದ್ದರು. ವಿಧಾನ ಪರಿಷತ್ ನಲ್ಲಿ ಒಟ್ಟು 75 ಸ್ಥಾನಗಳ ಪೈಕಿ ಕಾಂಗ್ರೆಸ್ 38, ಬಿಜೆಪಿ 25, ಜೆಡಿಎಸ್ 6, ಪಕ್ಷೇತರ-1 ಸ್ಥಾನಗಳಿವೆ. ಐದು ಸದಸ್ಯ ಸ್ಥಾನಗಳು ಖಾಲಿಯಿವೆ.
ಸಭಾಪತಿ ಸ್ಥಾನಕ್ಕೆ ಏಳು ಪ್ರಸ್ತಾವಗಳು ಬಂದಿದ್ದವು. ಈ ಪೈಕಿ ಐದು ಪ್ರಸ್ತಾವಗಳು ಸಲೀಂ ಅಹ್ಮದ್ ಪರ ಬಂದಿದ್ದವು. ಈ ಹಿನ್ನೆಲೆಯಲ್ಲಿ ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಪ್ರಸ್ತಾವವನ್ನು ಮತಕ್ಕೆ ಹಾಕಿದರು. ಧ್ವನಿಮತದ ಮೂಲಕ ನಡೆದ ಚುನಾವಣೆಯಲ್ಲಿ ಸಲೀಂ ಅಹ್ಮದ್ ಬಹುಮತ ಪಡೆದು ಸಭಾಪತಿಯಾಗಿ ಆಯ್ಕೆಯಾದರು.
ಇದನ್ನೂ ಓದಿ : ಮಹಿಳಾ PSIಗೆ ಕಪಾಳಮೋಕ್ಷ ಆರೋಪ ; ಶಾಸಕ ಸುರೇಶ್ಗೌಡ ಪುತ್ರಿ ಐಶ್ವರ್ಯ ವಿರುದ್ಧ FIR!



















